ADVERTISEMENT

ವಿದೇಶಿ ಟಿ20 ಲೀಗ್‌ಗಳಲ್ಲಿ ಆಡಲು ಅವಕಾಶ ನೀಡಿ: ಬಿಸಿಸಿಐಗೆ ಉತ್ತಪ್ಪ ಮನವಿ

ಏಜೆನ್ಸೀಸ್
Published 22 ಮೇ 2020, 6:24 IST
Last Updated 22 ಮೇ 2020, 6:24 IST
   

ನವದೆಹಲಿ: ವಿದೇಶಿ ಟಿ–20 ಕ್ರಿಕೆಟ್‌ ಲೀಗ್‌ಗಳಲ್ಲಿ ಆಡುವ ಅವಕಾಶ ನೀಡುವಂತೆ ಕರ್ನಾಟಕಕ್ರಿಕೆಟಿಗ ರಾಬಿನ್‌ ಉತ್ತಪ್ಪ ಬಿಸಿಸಿಐಗೆ ಮನವಿ ಮಾಡಿದ್ದಾರೆ. ಐಪಿಎಲ್‌ ಹೊರತುಪಡಿಸಿ ಭಾರತ ಪುರುಷರ ತಂಡದ ಆಟಗಾರರು ಯಾವುದೇ ವಿದೇಶಿ ಕ್ರಿಕೆಟ್‌ ಲೀಗ್‌ಗಳಲ್ಲಿ ಭಾಗವಹಿಸುವಂತಿಲ್ಲ ಎಂದು ಬಿಸಿಸಿಐ ನಿರ್ಬಂಧ ವಿಧಿಸಿದೆ. ಇದಕ್ಕೂ ಮೊದಲು ಈ ವಿಚಾರವಾಗಿ ಹಿರಿಯ ಕ್ರಿಕೆಟಿಗರಾದ ಸುರೇಶ್‌ ರೈನಾ ಮತ್ತು ಇರ್ಫಾನ್‌ ಪಠಾಣ್‌ ಮಾತನಾಡಿದ್ದರು.

ಬಿಬಿಸಿ ಸುದ್ದಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಉತ್ತಪ್ಪ, ಬಿಸಿಸಿಐ ಈ ಕಟ್ಟುಪಾಡನ್ನು ತೆಗೆದುಹಾಕಬೇಕು. ಇದರಿಂದ ಭಾರತೀಯ ಕ್ರಿಕೆಟಿಗರು ಸಾಧ್ಯವಾದಷ್ಟನ್ನು ಕಲಿಯಲು ಮತ್ತು ಬೆಳೆಯಲು ಸಾಧ್ಯವಾಗಲಿದೆ ಎಂದು ಮನವಿ ಮಾಡಿದ್ದಾರೆ.

‘ದಯವಿಟ್ಟು ನಮಗೆ ಪ್ರಾಮಾಣಿಕವಾಗಿ ಆಡಲು ಅನುಮತಿ ನೀಡಿ. ಆಡಲು ಅವಕಾಶ ಇಲ್ಲವಾದರೆ ನೋವುಂಟಾಗಲಿದೆ. ವಿದೇಶಿ ಲೀಗ್‌ಗಳಲ್ಲಿ ಆಡಲು ಅವಕಾಶ ಸಿಕ್ಕಿ, ನಾವು ಹೋಗುವಂತಾದರೆ ಚೆನ್ನಾಗಿರುತ್ತದೆ. ಏಕೆಂದರೆ, ಕ್ರಿಕೆಟ್‌ಅನ್ನು ಕಲಿಯುವಂತಹವರಾದರೆ ನೀವು ಸಾಧ್ಯವಾದಷ್ಟನ್ನು ಕಲಿಯಲು ಮತ್ತು ಬೆಳೆಯಲು ಬಯಸುತ್ತೀರಿ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಆಸ್ಟ್ರೇಲಿಯಾದ ಬಿಗ್‌ ಬಾಷ್‌ ಲೀಗ್‌ (ಬಿಬಿಎಲ್‌), ಕೆರಿಬಿಯನ್‌ ಪ್ರಿಮಿಯರ್‌ ಲೀಗ್‌ (ಸಿಪಿಎಲ್‌) ಅಥವಾ ಇಂಗ್ಲೆಂಡ್‌ನಲ್ಲಿ ಆರಂಭವಾಗಲಿರುವ ದಿ ಹಂಡ್ರೆಡ್‌ನಂತಹ ಟೂರ್ನಿಗಳಲ್ಲಿ ಆಡಲು ಭಾರತ ಆಟಗಾರರಿಗೆ ಅವಕಾಶವಿಲ್ಲ. ಇದರಿಂದಾಗಿ ವಯಸ್ಸಾದ ಹಿರಿಯ ಕ್ರಿಕೆಟಿಗರು ಮತ್ತು ಬಹಳ ದಿನಗಳಿಂದ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿರುವ ಆಟಗಾರರ ಪಾಲಿಗೆ ಕಠಿಣವಾಗಿ ಪರಿಣಮಿಸಿದೆ. ಕ್ರಿಕೆಟ್‌ನಲ್ಲಿ ಉಳಿಯಲು ಮತ್ತು ವೃತ್ತಿ ಬದುಕನ್ನು ಮತ್ತಷ್ಟು ವಿಸ್ತರಿಸಿಕೊಳ್ಳಲು ಲೀಗ್‌ಗಳಲ್ಲಿ ಆಡುವ ಅವಕಾಶ ಬೇಕು ಎಂಬುದು ಅವರ ಬೇಡಿಕೆಯಾಗಿದೆ.

ಸದ್ಯ ಬಿಸಿಸಿಐ ಅಧ್ಯಕ್ಷರಾಗಿರುವ ಸೌರವ್‌ ಗಂಗೂಲಿ ಅವರು ಈ ನಿಟ್ಟಿನಲ್ಲಿ ಚಿಂತನೆ ನಡೆಸಲಿದ್ದಾರೆ ಎಂಬ ಭರವಸೆಯನ್ನು ಉತ್ತಪ್ಪ ವ್ಯಕ್ತಪಡಿಸಿದ್ದಾರೆ.

‘ಗಂಗೂಲಿ ಅವರು ಪ್ರಗತಿಪರ ಚಿಂತನೆಯುಳ್ಳ ಮನುಷ್ಯ, ಸದಾಕಾಲ ಭಾರತವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಬಗ್ಗೆ ಯೋಚಿಸುವ ವ್ಯಕ್ತಿ. ನಿಜವಾಗಿಯೂ ಭಾರತ ಕ್ರಿಕೆಟ್‌ಗೆ ಅಡಿಪಾಯ ಹಾಕಿದವರು ಅವರೇ. ಖಂಡಿತವಾಗಿಯೂ ಅವರು ಈ ವಿಚಾರದ ಬಗ್ಗೆ ಗಮನ ಹರಿಸುತ್ತಾರೆ’ ಎಂದು ಹೇಳಿದ್ದಾರೆ.

ಇದಕ್ಕೂ ಮೊದಲು, ‘ವಿದೇಶಿ ಟ್ವೆಂಟಿ–20 ಕ್ರಿಕೆಟ್‌ ಲೀಗ್‌ಗಳಲ್ಲಿ ಆಡಲು ಭಾರತದ ಆಟಗಾರರಿಗೂ ಅವಕಾಶ ನೀಡಿಬೇಕು’ ಎಂದು ಮನವಿ ಮಾಡಿದ್ದ ರೈನಾ, ‘ಹಲವು ಆಟಗಾರರು ಈಗ ಮೂಲೆ ಗುಂಪಾಗಿದ್ದಾರೆ. ಕೇಂದ್ರೀಯ ಗುತ್ತಿಗೆ ಪದ್ಧತಿಯಿಂದಲೂ ಅವನ್ನು ಹೊರಗಿಡಲಾಗಿದೆ. ಅಂತಹವರಿಗೆ ವಿದೇಶಿ ಲೀಗ್‌ಗಳಲ್ಲಿ ಆಡಲು ಅನುಮತಿ ಕೊಡಬೇಕು. ಬಿಸಿಸಿಐ, ಈ ಸಂಬಂಧ ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಹಾಗೂ ಫ್ರಾಂಚೈಸ್‌ಗಳ ಜೊತೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಬೇಕು’ ಎಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.