ದುಬೈ: ಐಪಿಎಲ್–2020 ಟೂರ್ನಿಯ ಫೈನಲ್ ಪಂದ್ಯ ಇಂದು ದುಬೈನಲ್ಲಿ ನಡೆಯಲಿದ್ದು, ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿವೆ. ಈ ಬಾರಿಯ ಐಪಿಎಲ್ನಲ್ಲಿ ಉಭಯ ತಂಡಗಳು ಮೂರು ಬಾರಿ ಮುಖಾಮುಖಿಯಾಗಿವೆ. ಮೂರೂ ಸಲ ಮುಂಬೈ ಜಯದ ನಗೆ ಬೀರಿದೆ. ಇದರಿಂದ ತಮ್ಮ ತಂಡಕ್ಕೆ ಮಾನಸಿಕವಾಗಿ ಪ್ರಯೋಜನವಾಗಲಿದೆ ಎಂದು ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾಹೇಳಿದ್ದಾರೆ.
ಫೈನಲ್ ಪಂದ್ಯಕ್ಕೂ ಮುನ್ನ ಮಾತನಾಡಿರುವ ರೋಹಿತ್, ‘ಹಿಂದಿನ ಗೆಲುವುಗಳಿಂದ ಮಾನಸಿಕವಾಗಿ ಸ್ವಲ್ಪ ಲಾಭವಾಗಲಿದೆ. ಆದರೆ, ಐಪಿಎಲ್ನಲ್ಲಿ ನಾವು ನೋಡಿರುವ ಪ್ರತಿದಿನವೂ ಹೊಸದಿನ. ಪ್ರತಿದಿನ ಹೊಸ ಒತ್ತಡ ಮತ್ತು ಪ್ರತಿ ಪಂದ್ಯವೂ ಹೊಸದು. ಹಾಗಾಗಿ, ಈ ಹಿಂದೆ ಏನಾಗಿದೆ ಎಂಬುದರ ಬಗ್ಗೆ ಹೆಚ್ಚು ಯೋಚಿಸಲು ಸಾಧ್ಯವಿಲ್ಲ’ ಎಂದಿದ್ದಾರೆ.
‘ಪ್ರಮಾಣಿಕವಾಗಿ ಹೇಳುವುದಾದರೆ, ನಾವು ಈ ತಂಡದ ವಿರುದ್ಧ ಹಿಂದೆ ಆಡಿದ್ದೇವೆ ಮತ್ತು ಅವರನ್ನು ಸೋಲಿಸಿದ್ದೇವೆ ಎಂಬುದನ್ನು ಯೋಚಿಸಲು ಸಾಧ್ಯವಿಲ್ಲ. ಅವರನ್ನು ಹೊಸ ಪ್ರತಿಸ್ಪರ್ಧಿ ಮತ್ತು ನಾವು ಒಂದು ತಂಡವಾಗಿ ಅವರ ವಿರುದ್ಧ ಏನು ಮಾಡಲು ಸಾಧ್ಯ ಎಂಬುದನ್ನು ಚಿಂತಿಸಬಹುದು ಅಷ್ಟೇ’ಎಂದು ತಿಳಿಸಿದ್ದಾರೆ.
‘ನಮ್ಮ ಯೋಜನೆ ಸರಳವಾಗಿದೆ. ಮೈದಾನದಲ್ಲಿ ಸರಿಯಾಗಿ ಆಡಲಿದ್ದೇವೆ. ಐದನೇ ಪ್ರಶಸ್ತಿಯನ್ನು ಗೆದ್ದುಕೊಳ್ಳಲಿದ್ದೇವೆ ಎಂಬ ವಿಶ್ವಾಸವಿದೆ’ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.