ನವದೆಹಲಿ: ಇತ್ತೀಚಿಗೆ ಇಂಗ್ಲೆಂಡ್ ವಿರುದ್ಧ ನಡೆದ ಟೆಸ್ಟ್ ಸರಣಿಯಲ್ಲಿ ಗೆಲುವು ದಾಖಲಿಸಿದ್ದೇವೆ ಎಂದು ಭಾರತ ತಂಡದ ಆಟಗಾರ ರೋಹಿತ್ ಶರ್ಮಾ ಸಮರ್ಥನೆ ಮಾಡಿರುವುದು ವಿವಾದವನ್ನು ಹುಟ್ಟು ಹಾಕಲು ಕಾರಣವಾಗಿದೆ.
ಕೋವಿಡ್ ಆತಂಕದಿಂದಾಗಿ ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಿಂದ ಭಾರತ ಹಿಂಜರಿದ ಕಾರಣ ರದ್ದುಗೊಳಿಸಲಾಗಿತ್ತು. ಇದರಿಂದಾಗಿ ಕೊನೆಯ ಟೆಸ್ಟ್ ಆಯೋಜನೆಯ ಬಗ್ಗೆ ಅನಿಶ್ಚಿತತೆ ಮುಂದುವರಿದಿದೆ. ಈ ಕುರಿತಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹಾಗೂ ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿಗಳ (ಇಸಿಬಿ) ನಡುವಣ ಮಾತುಕತೆ ಜಾರಿಯಲ್ಲಿದೆ.
ನಾಲ್ಕು ಪಂದ್ಯಗಳ ಅಂತ್ಯದ ವೇಳೆಗೆ ಭಾರತ 2-1ರ ಅಂತರದ ಮುನ್ನಡೆ ಕಾಯ್ದುಕೊಂಡಿತ್ತು. ಆದರೆ ಟೀಮ್ ಇಂಡಿಯಾ ಪಾಳಯದಲ್ಲಿ ಕೋವಿಡ್ ಕಾಣಿಸಿಕೊಂಡ ಪರಿಣಾಮ ಮ್ಯಾಂಚೆಸ್ಟರ್ನಲ್ಲಿ ಆರಂಭವಾಗಬೇಕಿದ್ದ ಅಂತಿಮ ಟೆಸ್ಟ್ ಪಂದ್ಯಕ್ಕೂ ಎರಡು ತಾಸಿಗೂ ಮುನ್ನ ಪಂದ್ಯವನ್ನು ರದ್ದುಗೊಳಿಸಲಾಯಿತು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರೋಹಿತ್ ಶರ್ಮಾ, ನನ್ನ ದೃಷ್ಟಿಯಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತ ಗೆಲುವು ದಾಖಲಿಸಿದೆ ಎಂದು ಹೇಳಿದ್ದಾರೆ.
'ವೈಯಕ್ತಿಕವಾಗಿ ನನಗೆ ಹಾಗೂ ನಮ್ಮ ತಂಡಕ್ಕೆ ಇದೊಂದು (ಇಂಗ್ಲೆಂಡ್) ಅತ್ಯುತ್ತಮ ಸರಣಿಯಾಗಿತ್ತು. ಕೊನೆಯ ಟೆಸ್ಟ್ ಪಂದ್ಯ ಏನಾಯಿತು ಎಂಬುದು ತಿಳಿದಿಲ್ಲ. ನಾವು ಸರಣಿಯನ್ನು ಗೆದ್ದಿದ್ದೇವೆಯೇ ಅಥವಾಅಂತಿಮ ಟೆಸ್ಟ್ ಪಂದ್ಯ ಆಯೋಜಿಸಲಾಗುತ್ತದೆಯೇ ಎಂಬುದು ತಿಳಿದಿಲ್ಲ. ಆದರೆ ನನ್ನ ದೃಷ್ಟಿಕೋನದಲ್ಲಿ ನಾವು ಸರಣಿಯನ್ನು 2-1ರಲ್ಲಿ ಗೆದ್ದಿದ್ದೇವೆ' ಎಂದಿದ್ದಾರೆ.
ಮುಂದಿನ ವರ್ಷ ಜುಲೈ ತಿಂಗಳಲ್ಲಿ ಇಂಗ್ಲೆಂಡ್ ಪ್ರವಾಸದ ವೇಳೆಯಲ್ಲಿ ಅಂತಿಮ ಟೆಸ್ಟ್ ಪಂದ್ಯವನ್ನು ಆಯೋಜಿಸಲು ಬಿಸಿಸಿಐ ಪ್ರಸ್ತಾಪಿಸಿದೆ. ಈ ಕುರಿತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೂಡ ಹೇಳಿಕೆ ಕೊಟ್ಟಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.