
ದುಬೈ: ಇಂದಿನಿಂದ (ಮಂಗಳವಾರ) ಪ್ರಾರಂಭವಾಗಲಿರುವ ಏಕದಿನ ವಿಶ್ವಕಪ್ ಭಾರತದಲ್ಲಿ ಮಹಿಳಾ ಕ್ರಿಕೆಟ್ಗೆ ಒಂದು ಮಹತ್ವದ ತಿರುವು ನೀಡಲಿದೆ ಎಂದು ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಾರತ ಮಹಿಳಾ ತಂಡ 2017 ರಲ್ಲಿ ಇಂಗ್ಲೆಂಡ್ನಲ್ಲಿ ನಡೆದ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿತ್ತು. ಅದಾದ ಬಳಿಕ ಮಹಿಳಾ ಕ್ರಿಕೆಟ್ ತನ್ನ ಜನಪ್ರೀಯತೆಯನ್ನು ಹೆಚ್ಚಿಸಿಕೊಂಡಿದೆ. ಆದರೆ, ಇದುವರೆಗೂ ಭಾರತ ತಂಡಕ್ಕೆ ವಿಶ್ವಕಪ್ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ಆದರೆ, ಹರ್ಮನ್ಪ್ರೀತ್ ನಾಯಕತ್ವದ ಟೀಂ ಇಂಡಿಯಾಗೆ ಈ ಬಾರಿ ತವರಿನಲ್ಲಿ ಟ್ರೋಫಿ ಗೆಲ್ಲುವ ಅವಕಾಶ ಇದೆ ಎಂದು ಸಚಿನ್ ತೆಂಡುಲ್ಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
'ಭಾರತ ಮಹಿಳಾ ಕ್ರಿಕೆಟ್ ಒಂದು ಐತಿಹಾಸಿಕ ಕ್ಷಣದಲ್ಲಿದೆ ಎಂದು ನನಗನಿಸುತ್ತದೆ. ಮುಂಬರುವ ಐಸಿಸಿ ಮಹಿಳಾ ವಿಶ್ವಕಪ್ ಕೇವಲ ಟ್ರೋಫಿ ಗೆಲ್ಲುವುದಲ್ಲ. ಬದಲಾಗಿ ಇದು ಲೆಕ್ಕವಿಲ್ಲದಷ್ಟು ಕನಸುಗಳನ್ನು ಬಿತ್ತುವುದಾಗಿದೆ' ಎಂದು ಸಚಿನ್ ತೆಂಡುಲ್ಕರ್ ಐಸಿಸಿಗೆ ಬರೆದು ಅಂಕಣದಲ್ಲಿ ತಿಳಿಸಿದ್ದಾರೆ.
‘ಯಾವುದೋ ಮೋಗಾದ ಗಲ್ಲಿಯೊಂದರಲ್ಲಿ ಕುಳಿತು ಕ್ರಿಕೆಟ್ ವೀಕ್ಷಿಸುವ ಯುವ ಪ್ರತಿಭೆ ತಾನು ಆರಾಧಿಸುವ ಹರ್ಮನ್ಪ್ರೀತ್ ಕೌರ್ ರೀತಿ ಆಗಬೇಕು ಎನ್ನುವ ಆಶಯದಿಂದ ಬ್ಯಾಟ್ ಹಿಡಿದಿರಬಹುದು. ಅಥವಾ ಇನ್ನೆಲ್ಲೋ ಸಾಂಗ್ಲಿಯಲ್ಲಿರುವ ಯುವತಿ ತಾನು ಸ್ಮೃತಿ ಮಂದಾನಳಂತೆ ಆಗಬೇಕು ಎಂಬ ಕನಸು ಕಾಣುವ ಧೈರ್ಯ ಮಾಡಬಹುದು. ಅದಕ್ಕೆಲ್ಲ ಈ ಬಾರಿಯ ಐಸಿಸಿ ಮಹಿಳಾ ವಿಶ್ವಕಪ್ ಮುನ್ನುಡಿ ಬರೆಯಲಿದೆ‘ ಎಂದು ಅವರು ಬರೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.