ADVERTISEMENT

ವಿಶ್ವಕಪ್ | ರಾಹುಲ್ ಅಥವಾ ಧವನ್: ರೋಹಿತ್ ಜೊತೆ ಇನಿಂಗ್ಸ್ ಆರಂಭಿಸಲು ಯಾರು ಸೂಕ್ತ?

ಆರಂಭಿಕ ಜೋಡಿ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಮಾಜಿ ಕ್ರಿಕೆಟಿಗ ಶ್ರೀಕಾಂತ್‌

​ಪ್ರಜಾವಾಣಿ ವಾರ್ತೆ
Published 6 ಜನವರಿ 2020, 7:25 IST
Last Updated 6 ಜನವರಿ 2020, 7:25 IST
   

ಗುವಾಹಟಿ: ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಭಾರತ ಪರ ರೋಹಿತ್‌ ಶರ್ಮಾ ಜೊತೆಗೆ ಇನಿಂಗ್ಸ್‌ ಆರಂಭಿಸಲು ಯಾರು ಸೂಕ್ತ ಎಂಬುದಕ್ಕೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆ ನಡೆಯುತ್ತಿವೆ. ಶಿಖರ್‌ ಧವನ್‌ ಈ ಹಿಂದಿನ ಹಲವು ಟೂರ್ನಿಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಹಾಗಾಗಿ ರೋಹಿತ್‌ ಜೊತೆ ಇನಿಂಗ್ಸ್‌ ಆರಂಭಿಸಲು ಅವರೇ ಸೂಕ್ತ ಎಂದು ಕೆಲವುಪರಿಣತರು ಹಾಗೂ ಅಭಿಮಾನಿಗಳು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ಇತ್ತೀಚೆಗೆ ಮುಕ್ತಾಯವಾದ ವೆಸ್ಟ್‌ ಇಂಡೀಸ್‌ ವಿರುದ್ಧದ ಸರಣಿಯಲ್ಲಿ ಸಾಮರ್ಥ್ಯ ಸಾಬೀತು ಪಡಿಸಿರುವ ಕನ್ನಡಿಗ ಕೆ.ಎಲ್‌ ರಾಹುಲ್‌ ಅವರನ್ನು ಹೆಚ್ಚಿನವರು ಬೆಂಬಲಿಸಿದ್ದಾರೆ.

ವಿಶ್ವಕಪ್‌ಗೆ ವಿರಾಟ್‌ ಕೊಹ್ಲಿ ಪಡೆಯ ಆರಂಭಿಕ ಜೋಡಿ ಕುರಿತು,ಭಾರತದ ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್‌ ಮಾತನಾಡಿದ್ದಾರೆ. ಖಾಸಗಿ ವಾಹಿಯೊಂದಿಗೆ ಮಾತನಾಡಿರುವ ಅವರು, ‘ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಗಳಿಸುವ ರನ್‌ ಲೆಕ್ಕಕ್ಕೆ ಬರುವುದಿಲ್ಲ. ನಾನು ಆಯ್ಕೆ ಸಮಿತಿ ಮುಖ್ಯಸ್ಥನಾಗಿದ್ದರೆ ಧವನ್‌ರನ್ನು ವಿಶ್ವಕಪ್‌ ತಂಡಕ್ಕೆ ಆಯ್ಕೆ ಮಾಡುತ್ತಲೇ ಇರಲಿಲ್ಲ. ಇಲ್ಲಿ ರಾಹುಲ್‌ ಮತ್ತು ಧವನ್‌ ನಡುವೆ ಪೈಪೋಟಿಯೇ ಇಲ್ಲ. ಇಲ್ಲಿರುವುದು ಒಬ್ಬನೇ ಜಯಶಾಲಿ’ ಎಂದಿದ್ದಾರೆ.

ಕಳೆದ ವರ್ಷ ಸಾಕಷ್ಟು ಬಾರಿ ಗಾಯದ ಸಮಸ್ಯೆಗೆ ತುತ್ತಾಗಿದ್ದ ಧವನ್‌, ಇದೀಗ ತಂಡಕ್ಕೆ ಮರಳಿದ್ದಾರೆ. ಹೊಸ ವರ್ಷವನ್ನು ಸ್ಮರಣೀಯವಾಗಿಸಿಕೊಳ್ಳುವ ಉತ್ಸಾಹದಲ್ಲಿದ್ದಾರೆ.

ADVERTISEMENT

ಸದ್ಯ ಶ್ರೀಲಂಕಾ ವಿರುದ್ಧ ಆರಂಭವಾಗಿರುವ ಟಿ20 ಸರಣಿಯಿಂದ ರೋಹಿತ್‌ಗೆ ವಿಶ್ರಾಂತಿ ನೀಡಲಾಗಿದೆ. ಹಾಗಾಗಿ ಧವನ್‌ ಜೊತೆಗೆರಾಹುಲ್‌ ಇನಿಂಗ್ಸ್‌ ಆರಂಭಿಸಲಿದ್ದಾರೆ. ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಲು ಈ ಇಬ್ಬರೂ ಗಮನಹರಿಸಿದ್ದಾರೆ. ಆದರೆ, ಗುವಾಹಟಿಯಲ್ಲಿ ಭಾನುವಾರ ನಡೆಯಬೇಕಿದ್ದ ಮೊದಲ ಪಂದ್ಯ ರದ್ದಾಯಿತು. ಹೀಗಾಗಿ ಧವನ್‌–ರಾಹುಲ್‌ ಜೋಡಿ ಇನಿಂಗ್ಸ್‌ ಆರಂಭಿಸುವುದನ್ನು ಕಣ್ತುಂಬಿಕೊಳ್ಳುವ ಅವಕಾಶ ಅಭಿಮಾನಿಗಳಿಗೆ ತಪ್ಪಿತ್ತು.

ಈ ವೇಳೆ ಮಾತನಾಡಿದ ಧವನ್,‘ಕಳೆದ ವರ್ಷ ಸಾಕಷ್ಟು ಸಲ ಗಾಯದ ಸಮಸ್ಯೆಗೆ ಒಳಗಾಗಿದ್ದೆ. ಇದು ಕ್ರೀಡೆಯ ಒಂದು ಭಾಗ. ಹೊಸ ವರ್ಷ ವರ್ಷವನ್ನು ಹೊಸದಾಗಿ ಆರಂಭಿಸುವತ್ತ ಗಮನ ಹರಿಸಿದ್ದೇನೆ. ನಾನು ಯಾವಾಗಲೂ ಧನಾತ್ಮಕವಾಗಿ ಚಿಂತಿಸುತ್ತೇನೆ.ಗಾಯದ ಸಮಸ್ಯೆ ಸಾಮಾನ್ಯವಾದ ಸಂಗತಿ. ಅವುಗಳನ್ನು ದಾಟುತ್ತೇನೆ. ಈ ವರ್ಷ ಹೆಚ್ಚು ರನ್‌ ಕಲೆಹಾಕುವ ಯೋಜನೆಯಲ್ಲಿದ್ದೇನೆ. ತಂಡಕ್ಕಾಗಿ ಪಂದ್ಯ ಗೆದ್ದುಕೊಡಲು, ವಿಶ್ವಕಪ್‌ ಜಯಿಸಲು ಪರಿಣಾಮಕಾರಿಯಾದ ಆಟಗಾರನಾಗಲು ಬಯಸಿದ್ದೇನೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.