ಹಾರ್ದಿಕ್ ಪಾಂಡ್ಯ, ಶ್ರೇಯಸ್ ಅಯ್ಯರ್
(ಪಿಟಿಐ ಚಿತ್ರ)
ಅಹಮದಾಬಾದ್: 2025ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಅಮೋಘ ಅರ್ಧಶತಕ ಗಳಿಸುವ ಮೂಲಕ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿರುವ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್, ಮಹತ್ತರ ಪಂದ್ಯಗಳಲ್ಲಿ ಅತ್ಯಂತ ಒತ್ತಡದಲ್ಲಿ ಆಡಲು ಇಷ್ಟಪಡುವುದಾಗಿ ತಿಳಿಸಿದ್ದಾರೆ.
ಶ್ರೇಯಸ್ ಬಿರುಸಿನ ಅರ್ಧಶತಕದ ಬಲದಿಂದ ಮುಂಬೈ ಒಡ್ಡಿದ 204 ರನ್ಗಳ ಗುರಿಯನ್ನು ಪಂಜಾಬ್ ಇನ್ನೊಂದು ಓವರ್ ಬಾಕಿ ಇರುವಂತೆಯೇ ಐದು ವಿಕೆಟ್ ನಷ್ಟಕ್ಕೆ ತಲುಪಿತು.
ಆ ಮೂಲಕ 11 ವರ್ಷಗಳ ಬಳಿಕ ಪಂಜಾಬ್ ಫೈನಲ್ಗೆ ಲಗ್ಗೆ ಇಟ್ಟಿತು. ಇದೀಗ ಜೂನ್ 3ರಂದು ನಡೆಯಲಿರುವ ಪ್ರಶಸ್ತಿ ಹಣಾಹಣಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸವಾಲನ್ನು ಎದುರಿಸಲಿದೆ.
ನಾಯಕನ ಆಟವಾಡಿದ ಅಯ್ಯರ್, ಕೇವಲ 41 ಎಸೆತಗಳಲ್ಲಿ ಎಂಟು ಸಿಕ್ಸರ್ ಹಾಗೂ ಐದು ಬೌಂಡರಿಗಳ ನೆರವಿನಿಂದ ಅಜೇಯ 87 ರನ್ ಗಳಿಸಿ ಅರ್ಹವಾಗಿಯೇ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು.
ಅತ್ಯಂತ ಒತ್ತಡದ ಪರಿಸ್ಥಿತಿಯಲ್ಲಿ ಹೇಗೆ ತಾಳ್ಮೆ ಕಾಯ್ದುಕೊಳ್ಳುತ್ತೀರಿ ಎಂದು ಕೇಳಿದಾಗ, 'ಪ್ರಾಮಾಣಿಕವಾಗಿ ನನಗೆ ಗೊತ್ತಿಲ್ಲ, ಆದರೆ ದೊಡ್ಡ ವೇದಿಕೆಗಳನ್ನು ಇಷ್ಟಪಡುತ್ತೇನೆ. ಮಹತ್ತರ ಪಂದ್ಯಗಳಲ್ಲಿ ಶಾಂತಚಿತ್ತರಾಗಿ ಇದ್ದಷ್ಟು ನಿಮಗೆ ಬೇಕಾದ ಫಲಿತಾಂಶ ಸಿಗುತ್ತದೆ ಎಂದು ಸದಾ ನನ್ನ ಸಹ ಆಟಗಾರರಿಗೆ ಹೇಳುತ್ತಿರುತ್ತೇನೆ' ಎಂದು ಅಯ್ಯರ್ ಹೇಳಿದ್ದಾರೆ.
ಅದೇ ಸಂದರ್ಭದಲ್ಲಿ ತಂಡದ ಆಟಗಾರರ ಮನೋಬಲವನ್ನು ಶ್ರೇಯಸ್ ಮೆಚ್ಚಿದ್ದಾರೆ. ಅಲ್ಲದೆ ನಮ್ಮ ಗುರಿ ಇಲ್ಲಿಗೆ ಕೊನೆಗೊಂಡಿಲ್ಲ. ಫೈನಲ್ನಲ್ಲಿ ಗೆಲುವು ದಾಖಲಿಸಬೇಕಿದೆ ಎಂದಿದ್ದಾರೆ.
ಅತ್ತ ಶ್ರೇಯಸ್ ಅಯ್ಯರ್ ಪಂದ್ಯದ ಫಲಿತಾಂಶದಲ್ಲಿ ವ್ಯತ್ಯಾಸಕ್ಕೆ ಕಾರಣರಾದರು ಎಂದು ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಒಪ್ಪಿಕೊಂಡಿದ್ದಾರೆ. 'ಶ್ರೇಯಸ್ ನಿಜಕ್ಕೂ ಅತ್ಯುತ್ತಮವಾಗಿ ಆಡಿದರು. ನಮ್ಮ ಯೋಜನೆಗಳನ್ನು ಕಾರ್ಯಕತಗೊಳಿಸಲು ವಿಫಲರಾದೆವು' ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.