ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಶುಕ್ರವಾರ ಈಡನ್ ಗಾರ್ಡನ್ನಲ್ಲಿ ಅಭ್ಯಾಸ ನಡೆಸಿದರು
–ಪಿಟಿಐ ಚಿತ್ರ
ಕೋಲ್ಕತ್ತ : ಶ್ರೇಯಸ್ ಅಯ್ಯರ್ ಅವರು ಈಡನ್ ಗಾರ್ಡನ್ ಕ್ರೀಡಾಂಗಣಕ್ಕೆ ಮರಳಿದ್ದಾರೆ. ಅವರಿಗೆ ಇಲ್ಲಿ ಚೆಂದದ ನೆನಪುಗಳಿವೆ. ಹೋದ ವರ್ಷ ಅವರ ನಾಯಕತ್ವದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಐಪಿಎಲ್ ಪ್ರಶಸ್ತಿ ಗೆದ್ದಿತ್ತು. ಇದೀಗ ಅವರು ಅದೇ ಕೋಲ್ಕತ್ತದ ಎದುರು ಕಣಕ್ಕಿಳಿಯಲು ಸಿದ್ಧರಾಗಿದ್ದಾರೆ. ಶ್ರೇಯಸ್ ನಾಯಕತ್ವದ ಪಂಜಾಬ್ ಕಿಂಗ್ಸ್ ಶನಿವಾರ ಆತಿಥೇಯ ಕೋಲ್ಕತ್ತ ತಂಡವನ್ನು ಎದುರಿಸಲಿದೆ.
ಅಜಿಂಕ್ಯ ರಹಾನೆ ನಾಯಕತ್ವದ ಕೆಕೆಆರ್ ತಂಡಕ್ಕೆ ಪ್ಲೇಆಫ್ ಪ್ರವೇಶದ ಹಾದಿ ಸುಗಮವಾಗಿಲ್ಲ. ಏಕೆಂದರೆ ಇಲ್ಲಿಯವರೆಗೆ ಆಡಿರುವ 8 ಪಂದ್ಯಗಳಲ್ಲಿ 3ರಲ್ಲಿ ಮಾತ್ರ ಜಯಿಸಿದೆ. ಉಳಿದ ಪಂದ್ಯಗಳಲ್ಲಿ ಸೋತಿದೆ. ಮುಂದಿನ ಪಂದ್ಯಗಳ ಪೈಕಿ ಒಂದರಲ್ಲಿ ಸೋತರೂ ಪ್ಲೇ ಆಫ್ ಪ್ರವೇಶದ ಬಾಗಿಲು ಮುಚ್ಚುವ ಸಾಧ್ಯತೆ ಇದೆ.
ತಂಡದ ಅಗ್ರಕ್ರಮಾಂಕದ ಬ್ಯಾಟರ್ಗಳ ಅಸ್ಥಿರತೆ, ಮಧ್ಯಮಕ್ರಮಾಂಕದಲ್ಲಿರುವ ಆ್ಯಂಡ್ರೆ ರಸೆಲ್, ರಿಂಕು ಸಿಂಗ್ ಮತ್ತು ರಮಣದೀಪ್ ಸಿಂಗ್ ಅವರ ಫಾರ್ಮ್ ಕೊರತೆ ತಂಡವನ್ನು ಕಾಡುತ್ತಿದೆ. ಅಂಗಕ್ರಿಷ್ ರಘುವಂಶಿ ಒಬ್ಬರೇ ರನ್ಗಳ ಕಾಣಿಕೆ ನೀಡುತ್ತಿದ್ದಾರೆ. ಕೋಲ್ಕತ್ತ ಬ್ಯಾಟರ್ಗಳಿಗೆ ಕಿಂಗ್ಸ್ ತಂಡದ ವೇಗಿ ಅರ್ಷದೀಪ್ ಸಿಂಗ್ (11 ವಿಕೆಟ್) ಮತ್ತು ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರನ್ನುಎದುರಿಸುವ ಸವಾಲು ಇದೆ.
ಹೋದ ವಾರ ಮುಲ್ಲನಪುರದಲ್ಲಿ ನಡೆದಿದ್ದ ಪಂದ್ಯದಲ್ಲಿ ಚಾಹಲ್ ಸ್ಪಿನ್ ಮೋಡಿಗೆ ಕೋಲ್ಕತ್ತ ಕೇವಲ 95 ರನ್ಗಳಿಗೆ ಆಲೌಟ್ ಆಗಿತ್ತು. ಅವರಿಗೆ ಎಡಗೈ ವೇಗಿ ಮಾರ್ಕೊ ಯಾನ್ಸೆನ್ ಕೂಡ ಉತ್ತಮ ಜೊತೆ ನೀಡಿದ್ದರು. ಅದರಿಂದಾಗಿ ಕೋಲ್ಕತ್ತ ಪರಾಭವಗೊಂಡಿತ್ತು.
ಕಿಂಗ್ಸ್ ತಂಡದ ನೆಹಲ್ ವಧೇರಾ ಫಿನಿಷರ್ ಹೊಣೆಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ತಂಡದ ಆರಂಭಿಕ ಬ್ಯಾಟರ್ ಪ್ರಿಯಾಂಶ್ ಆರ್ಯ ಟೂರ್ನಿಯಲ್ಲಿ ಒಂದು ಅಬ್ಬರದ ಶತಕವನ್ನೂ ದಾಖಲಿಸಿದ್ದಾರೆ. ಶ್ರೇಯಸ್, ಪ್ರಭಸಿಮ್ರನ್ ಸಿಂಗ್, ಜೋಷ್ ಇಂಗ್ಲಿಸ್ ಹಾಗೂ ಮಾರ್ಕಸ್ ಸ್ಟೋಯಿನಿಸ್ ಅವರನ್ನು ಕಟ್ಟಿಹಾಕುವ ಸವಾಲು ಆತಿಥೇಯ ತಂಡದ ಸ್ಪಿನ್ ಜೋಡಿ ವರುಣ್ ಚಕ್ರವರ್ತಿ–ಸುನಿಲ್ ನಾರಾಯಣ್, ಹರ್ಷಿತ್ ರಾಣಾ ಅವರ ಮುಂದಿದೆ. ಕಿಂಗ್ಸ್ ಎಂಟು ಪಂದ್ಯಗಳಲ್ಲಿ 5ರಲ್ಲಿ ಜಯಿಸಿದೆ. 3ರಲ್ಲಿ ಸೋತಿದೆ. ಪ್ಲೇ ಆಫ್ ಹಾದಿಯನ್ನು ಸುಗಮಗೊಳಿಸುವತ್ತ ಚಿತ್ತ ನೆಟ್ಟಿದೆ.
ಪಂದ್ಯ ಆರಂಭ: 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೊ ಹಾಟ್ಸ್ಟಾರ್ ಆ್ಯಪ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.