
ಶುಭಮನ್ ಗಿಲ್
– ಪಿಟಿಐ ಚಿತ್ರ
ಮುಂಬೈ: ಭಾರತ ಹಾಗೂ ಶ್ರೀಲಂಕಾದಲ್ಲಿ ಫೆಬ್ರುವರಿ ಹಾಗೂ ಮಾರ್ಚ್ ತಿಂಗಳಿನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಗೆ ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡದಲ್ಲಿ ಏಕದಿನ ಹಾಗೂ ಟೆಸ್ಟ್ ತಂಡದ ನಾಯಕ ಶುಭಮನ್ ಗಿಲ್ ಅವರನ್ನು ಕೈಬಿಡಲಾಗಿದೆ.
ಶುಭಮನ್ ಗಿಲ್ ಅವರನ್ನು ಕೈಬಿಟ್ಟಿರುವುದಕ್ಕೆ ಭಾರತ ತಂಡದ ಮುಖ್ಯ ತರಬೇತುದಾರ ಅಜಿತ್ ಅಗರ್ಕರ್ ಅವರು ಕಾರಣ ಬಹಿರಂಗಪಡಿಸಿದ್ದಾರೆ ‘ಶುಭಮನ್ ಗಿಲ್ ಅವರು ಇತ್ತೀಚೆಗೆ ರನ್ ಗಳಿಸಲು ಪರದಾಡುತ್ತಿದ್ದಾರೆ ಹಾಗೂ ತಂಡದ ಸಂಯೋಜನೆಯ ದೃಷ್ಟಿಯಿಂದ ಅವರನ್ನು ತಂಡದಿಂದ ಹೊರಗಿಡಲಾಗಿದೆ’ ಎಂದು ತಿಳಿಸಿದ್ದಾರೆ.
‘ಗಿಲ್ ಉತ್ತಮ ಗುಣಮಟ್ಟದ ಆಟಗಾರ ಎಂಬುದು ನಮಗೆ ತಿಳಿದಿದೆ, ಆದರೆ, ಈ ಸಮಯದಲ್ಲಿ ಅವರ ಬ್ಯಾಟ್ನಿಂದ ರನ್ಗಳು ಬರುತ್ತಿಲ್ಲ’ ಎಂದು ಅಗರ್ಕರ್ ತಿಳಿಸಿದ್ದಾರೆ.
‘ಕಳೆದ ಟಿ20 ವಿಶ್ವಕಪ್ಗೆ ನಾವು ವಿಭಿನ್ನ ಸಂಯೋಜನೆಗಳೊಂದಿಗೆ ಹೋಗಿದ್ದರಿಂದ ಟ್ರೋಫಿ ಗೆಲ್ಲಲು ಸಾಧ್ಯವಾಯಿತು. ನಾವು 15 ಜನ ಸದಸ್ಯರ ಸಮತೋಲನ ತಂಡ ಕಟ್ಟುವಾಗ ಯಾರಾದರೂ ಒಬ್ಬರನ್ನು ತಂಡದಿಂದ ಕೈಬಿಡುವುದು ಅನಿವಾರ್ಯ, ಈ ಬಾರಿ ದುರಾದೃಷ್ಟವಶಾತ್ ಗಿಲ್ರನ್ನು ಕೈಬಿಡಲಾಗಿದೆ’ ಎಂದಿದ್ದಾರೆ.
ಹೆಚ್ಚುವರಿ ವಿಕೆಟ್ ಕೀಪರ್ ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಸಾಮರ್ಥ್ಯವಿರುವವರನ್ನು ಆಯ್ಕೆ ಮಾಡಲು ನಿರ್ಧರಿಸಿದ್ದೆವು. ಹಾಗಾಗಿ ಇಶಾನ್ ಕಿಶನ್ರನ್ನು ಅಯ್ಕೆ ಮಾಡಲಾಗಿದೆ ಎಂದರು.
ಇತ್ತೀಚೆಗೆ ಮುಕ್ತಾಯಗೊಂಡ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಇಶಾನ್ ಕಿಶನ್ ಅಗ್ರ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಸೂಕ್ತ ವ್ಯಕ್ತಿ ಎಂಬ ಕಾರಣಕ್ಕೆ ಜಿತೇಶ್ ಶರ್ಮಾ ಅವರನ್ನು ಕೈಬಿಡಲಾಗಿದೆ.
‘ನಾವು ತಂಡದ ಸಮತೋಲನದ ದೃಷ್ಟಿಯಿಂದ ಸಂಯೋಜನೆಯನ್ನು ನೋಡುತ್ತಿದ್ದೇವೆ. ವಿಕೆಟ್ ಕೀಪರ್ ಅಗ್ರಸ್ಥಾನದಲ್ಲಿ ಬ್ಯಾಟಿಂಗ್ ಮಾಡಿದರೆ ತಂಡಕ್ಕೆ ಅನುಕೂಲವಾಗಲಿದೆ. ಜಿತೇಶ್ ಯಾವುದೇ ತಪ್ಪು ಮಾಡಿಲ್ಲ. ಆದರೆ, ತಂಡದ ಸಂಯೋಜನೆಯ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ’ ಎಂದು ಹೇಳಿದರು.
ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ) ಅಭಿಷೇಕ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಸಂಜು ಸ್ಯಾಮ್ಸನ್, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ತಿಲಕ್ ವರ್ಮಾ, ಕುಲದೀಪ ಯಾದವ್, ಹಾರ್ದಿಕ್ ಪಾಂಡ್ಯ, ವರುಣ್ ಚಕ್ರವರ್ತಿ, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ರಿಂಕು ಸಿಂಗ್, ಇಶನ್ ಕಿಶನ್ ಸ್ಥಾನ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.