ADVERTISEMENT

ಎಂಟು ವಿಕೆಟ್ ಕಬಳಿಸಿದ ಸಿರಾಜ್‌

ಕ್ರಿಕೆಟ್: ಸಾಧಾರಣ ಮೊತ್ತ ಕಲೆಹಾಕಿದ ಆಸ್ಟ್ರೇಲಿಯಾ ಎ; ಉಸ್ಮಾನ್ ಖ್ವಾಜಾ ಶತಕ

ಗಿರೀಶದೊಡ್ಡಮನಿ
Published 2 ಸೆಪ್ಟೆಂಬರ್ 2018, 19:30 IST
Last Updated 2 ಸೆಪ್ಟೆಂಬರ್ 2018, 19:30 IST
ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ಭಾರತ ‘ಎ’ ಮತ್ತು ಆಸ್ಟ್ರೇಲಿಯಾ ‘ಎ’ ತಂಡಗಳ ನಡುವಿನ ‘ಟೆಸ್ಟ್’ ಪಂದ್ಯದಲ್ಲಿ ಎಂಟು ವಿಕೆಟ್‌ಗಳನ್ನು ಕಬಳಿಸಿದ ಭಾರತ ‘ಎ’ ತಂಡದ ಆಟಗಾರ ಮೊಹಮ್ಮದ್ ಸಿರಾಜ್ ಸಂಭ್ರಮ -ಪ್ರಜಾವಾಣಿ ಚಿತ್ರ / ರಂಜು ಪಿ
ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ಭಾರತ ‘ಎ’ ಮತ್ತು ಆಸ್ಟ್ರೇಲಿಯಾ ‘ಎ’ ತಂಡಗಳ ನಡುವಿನ ‘ಟೆಸ್ಟ್’ ಪಂದ್ಯದಲ್ಲಿ ಎಂಟು ವಿಕೆಟ್‌ಗಳನ್ನು ಕಬಳಿಸಿದ ಭಾರತ ‘ಎ’ ತಂಡದ ಆಟಗಾರ ಮೊಹಮ್ಮದ್ ಸಿರಾಜ್ ಸಂಭ್ರಮ -ಪ್ರಜಾವಾಣಿ ಚಿತ್ರ / ರಂಜು ಪಿ   

ಬೆಂಗಳೂರು: ಹೈದರಾಬಾದ್ ಹುಡುಗ ಮೊಹಮ್ಮದ್ ಸಿರಾಜ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ಬಿರುಗಾಳಿ ಎಬ್ಬಿಸಿದರು. ಇದರಿಂದಾಗಿ ದೊಡ್ಡ ಮೊತ್ತ ಗಳಿಸುವ ಆಸ್ಟ್ರೇಲಿಯಾ ಎ ತಂಡದ ಗುರಿ ಈಡೇರಲಿಲ್ಲ.

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ವೈಯಕ್ತಿಕ ಶ್ರೇಷ್ಠ ಸಾಧನೆ ಮಾಡಿದ ಭಾರತ ‘ಎ’ ತಂಡದ ಸಿರಾಜ್ (19.3–7–59–8) ಇಲ್ಲಿ ಆರಂಭವಾದ ‘ಟೆಸ್ಟ್‌’ನ ಮೊದಲ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ‘ಎ‘ ತಂಡವನ್ನು 243 ರನ್‌ಗಳ ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿದರು. ಶತಕ ಬಾರಿಸಿದ ಉಸ್ಮಾನ್ ಖ್ವಾಜಾ (127; 228ಎಸೆತ, 20ಬೌಂಡರಿ) ಮತ್ತು ಮಾರ್ನಸ್ ಲಾಬುಚಾನ್ (60; 105ಎಸೆತ, 11ಬೌಂಡರಿ) ಅವರು ತಂಡವು ಅಲ್ಪಮೊತ್ತಕ್ಕೆ ಕುಸಿಯುವುದನ್ನು ತಡೆದರು.

ಬ್ಯಾಟಿಂಗ್ ಆರಂಭಿಸಿರುವ ಭಾರತ ‘ಎ’ ತಂಡವು ದಿನದಾಟದ ಅಂತ್ಯಕ್ಕೆ 12 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೇ 41 ರನ್‌ ಗಳಿಸಿದೆ.

ADVERTISEMENT

ಬೆಳಿಗ್ಗೆ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ ಎ ತಂಡಕ್ಕೆ ಆರಂಭಿಕ ಜೋಡಿ ಉಸ್ಮಾನ್ ಮತ್ತು ಕರ್ಟಿಸ್ ಪ್ಯಾಟರ್ಸನ್ (31 ರನ್) ಅವರು ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ಗೆ 78 ರನ್‌ ಗಳಿಸಿದ ಅವರು ದೊಡ್ಡ ಮೊತ್ತ ಕಲೆಹಾಕುವತ್ತ ಹೆಜ್ಜೆ ಹಾಕಿದ್ದರು. ಆದರೆ ಊಟದ ವಿರಾಮಕ್ಕೆ ಕೇವಲ 15 ನಿಮಿಷಗಳು ಬಾಕಿಯಿದ್ದ ಸಂದರ್ಭದಲ್ಲಿ, ತಮ್ಮ ಎರಡು ಓವರ್‌ಗಳಲ್ಲಿ ಮೂರು ವಿಕೆಟ್ ಗಳಿಸಿದ ಸಿರಾಜ್ ಕೇಕೆ ಹಾಕಿದರು. ಪ್ಯಾಟರ್ಸನ್, ಟ್ರಾವಿಸ್ ಹೆಡ್ ಮತ್ತು ಪೀಟರ್ ಹ್ಯಾಂಡ್ಸ್‌ಕಂಬ್ ಅವರು ಪೆವಿಲಿಯನ್‌ಗೆ ಮರಳಿದರು. ವಿರಾಮದ ನಂತರದ ಎರಡನೇ ಓವರ್‌ನಲ್ಲಿ ಮಿಷೆಲ್ ಮಾರ್ಷ್ ಅವರ ವಿಕೆಟ್‌ ಕಬಳಿಸಿದರು. ಆಗ ತಂಡದ ಮೊತ್ತವು ಕೇವಲ 90 ರನ್‌ಗಳಾಗಿದ್ದವು.

ನಂತರ ಉಸ್ಮಾನ್ ಜೊತೆಗೂಡಿದ ಮಾರ್ನಸ್ ತಂಡದ ಆತಂಕವನ್ನು ದೂರ ಮಾಡಿದರು. ಐದನೇ ವಿಕೆಟ್‌ಗೇ 114 ರನ್‌ಗಳನ್ನು ಸೇರಿಸಿದರು. ಇದರಿಂದಾಗಿ ಚಹಾ ವಿರಾಮದವರೆಗೂ ಯಾವುದೇ ವಿಕೆಟ್‌ ಪತನವಾಗಲಿಲ್ಲ. ನಂತರ ಪೆವಿಲಿಯನ್‌ ಬದಿಯಿಂದ ಬೌಲಿಂಗ್ ಆರಂಭಿಸಿದ ಸಿರಾಜ್ ಈ ಜೊತೆಯಾಟವನ್ನು ಮುರಿದರು. ಅವರ ಇನ್‌ಸ್ವಿಂಗರ್‌ ತಡೆಯಲು ಮುಂದಾದ ಮಾರ್ನಸ್ ಬೀಟ್ ಆದರು. ಚೆಂಡು ಸ್ಟಂಪ್‌ಗೆ ಅಪ್ಪಳಿಸಿತು. ಇದಕ್ಕೂ ಮುನ್ನ ಉಸ್ಮಾನ್ ಶತಕದ ಗಡಿ ದಾಟಿದ್ದರು.

ನಂತರ ಬಂದ ಅಲೆಕ್ಸ್‌ ಕ್ಯಾರಿ ಅವರ ವಿಕೆಟ್‌ ಅನ್ನು ಕುಲದೀಪ್ ಯಾದವ್ ಕಬಳಿಸಿದರು. 66ನೇ ಓವರ್‌ನಲ್ಲಿ ಬೌಲಿಂಗ್ ಮಾಡಿದ ಸಿರಾಜ್ ಮೈಕೆಲ್ ನೇಸರ್ ಮತ್ತು ಕ್ರಿಸ್ ಟ್ರೆಮೆನ್ ಅವರ ವಿಕೆಟ್‌ಗಳನ್ನು ಕಬಳಿಸಿದರು. ಬ್ರೆಂಡನ್ ಡಾಜೆಟ್ ಅವರನ್ನು ಕುಲದೀಪ್ ಪೆವಿಲಿಯನ್‌ಗೆ ಕಳಿಸಿದರು. ಕೊನೆಯದಾಗಿ ಉಸ್ಮಾನ್ ಖ್ವಾಜಾ ಅವರನ್ನೂ ಸಿರಾಜ್ ಔಟ್ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.