ನವದೆಹಲಿ:ಕೊರೊನಾ ವೈರಸ್ನಿಂದ ಉಂಟಾಗಿರುವ ಪರಿಸ್ಥಿತಿಯನ್ನು ಗಮನದಲ್ಲಿರಿಸಿ ಐಪಿಎಲ್ 13ನೇ ಆವೃತ್ತಿಗೆ ಸಂಬಂಧಿಸಿದ ಹೊಸ ನಿರ್ದೇಶನಗಳನ್ನು ಏಪ್ರಿಲ್ 15ರ ನಂತರ ಪ್ರಕಟಿಸಲಾಗುವುದು ಎಂದು ಕ್ರೀಡಾ ಸಚಿವ ಕಿರಣ್ ರಿಜುಜು ತಿಳಿಸಿದ್ದಾರೆ.
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಕೈಗೊಳ್ಳುವ ನಿರ್ಧಾರಗಳಿಂದ, ಜಾಗತಿಗ ಪಿಡುಗಿನ ಪರಿಣಾಮಗಳು ಕ್ರಿಕೆಟ್ ಅನ್ನು ಪ್ರೀತಿಸುವ ದೇಶದ ಜನರ ಮೇಲೆ ನೇರವಾಗಿ ಆಗಲಿವೆ ಎಂದು ಒತ್ತಿ ಹೇಳಿದ್ದಾರೆ.
‘ಏಪ್ರಿಲ್ 15ರ ನಂತರಪರಿಸ್ಥಿತಿಯನ್ನು ಗಮನದಲ್ಲಿರಿಸಿ ಸರ್ಕಾರವು ಹೊಸ ಸಲಹೆ ಮತ್ತು ನಿರ್ದೇಶನಗಳನ್ನು ಹೊರಡಿಸಲಿದೆ. ಕ್ರಿಕೆಟ್ ಒಲಿಂಪಿಕ್ ಕ್ರೀಡೆಯಂತಲ್ಲ.ಕ್ರಿಡಾ ಚಟುವಟಿಕೆಗಳನ್ನು ನಡೆಸುವುದು ದೊಡ್ಡ ವಿಚಾರವಲ್ಲ. ಆದರೆ, ನಾಗರಿಕರ ಸುರಕ್ಷತೆ ಪ್ರಶ್ನೆಯಾಗಿ ಉಳಿದಿದೆ. ಒಂದೊಂದು ಕಾರ್ಯಕ್ರಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ಹಾಗಾಗಿ ಇದು ಕೇವಲ ಕ್ರೀಡಾ ಮಂಡಳಿ ಅಥವಾ ಆಟಗಾರರ ವಿಚಾರ ಮಾತ್ರವಲ್ಲ. ದೇಶದ ಎಲ್ಲರಿಗೂ ಸೇರಿದ್ದಾಗಿದೆ’ ಎಂದಿದ್ದಾರೆ.
ದೆಹಲಿ ಸರ್ಕಾರವು ಐಪಿಎಲ್ ಪಂದ್ಯಗಳನ್ನು ನಡೆಯಲು ಅವಕಾಶ ನೀಡುವುದಿಲ್ಲ ಎಂದು ಈ ಹಿಂದೆ ಹೇಳಿತ್ತು. ಅದಾದ ಬಳಿಕ ಎಚ್ಚೆತ್ತ ಬಿಸಿಸಿಐ,ಟೂರ್ನಿಯನ್ನು ಏಪ್ರಿಲ್ 15ರ ವರೆಗೆ ಮುಂದೂಡಿತ್ತು. ಇದೇ ತಿಂಗಳು 29ರಿಂದ ಟೂರ್ನಿ ಆರಂಭವಾಗಬೇಕಿತ್ತು.
ಮಾರ್ಚ್ 12ರಂದು ಸಭೆ ನಡೆಸಿದ್ದ ಕ್ರೀಡಾ ಇಲಾಖೆ, ದೇಶದಲ್ಲಿ ಎಲ್ಲ ರೀತಿಯ ಕ್ರೀಡಾ ಚಟುವಟಿಕೆಗಳನ್ನು ರದ್ದು ಮಾಡುವಂತೆ ಕ್ರೀಡಾ ಮಂಡಳಿಗಳಿಗೆ ಸೂಚಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.