ಪ್ರಾತಿನಿಧಿಕ ಚಿತ್ರ
ಕೋಲ್ಕತ್ತ: ಹೊಸ ನಾಯಕ, ಹೊಸದಾಗಿ ಬಂದ ಆಟಗಾರರ ಸಂಯೋಜನೆಯೊಡನೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಶನಿವಾರ ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಮತ್ತೊಮ್ಮೆ ಮೊದಲ ಪ್ರಶಸ್ತಿ ನಿರೀಕ್ಷೆಯೊಡನೆ.
ಈ ಮಧ್ಯೆ ಹವಾಮಾನ ಇಲಾಖೆ ಶನಿವಾರ ‘ಆರೆಂಜ್ ಅಲರ್ಟ್’ ಘೋಷಿಸಿದ್ದು, ಈಡನ್ ಗಾರ್ಡನ್ನಲ್ಲಿ ನಡೆಯುವ ಈ ಪಂದ್ಯ ಮಳೆಯ ಪಾಲಾಗಬಹುದೆಂಬ ಆತಂಕ ಮೂಡಿದೆ.
ರಜತ್ ಪಾಟೀದಾರ್ ಮೊದಲ ಬಾರಿ ರಾಯಲ್ ಚಾಲೆಂಜರ್ಸ್ ತಂಡದ ನೇತೃತ್ವ ವಹಿಸಿದ್ದಾರೆ. ನಾಲ್ಕು ವರ್ಷಗಳಲ್ಲಿ ಅವರು ಮೂರನೇ ನಾಯಕ. ಮೆಗಾ ಸ್ಟಾರ್ ವಿರಾಟ್ ಕೊಹ್ಲಿ ನಂತರ ಮೂರು ಋತುವಿಗೆ ದಕ್ಷಿಣ ಆಫ್ರಿಕಾದ ಬ್ಯಾಟರ್ ವರ್ಷ ಫಾಫ್ ಡುಪ್ಲೆಸಿ ತಂಡವನ್ನು ಮುನ್ನಡೆಸಿದ್ದರು. ಕಳೆದ ಆಕ್ಷನ್ಗಿಂತ ಮೊದಲು ಆರ್ಸಿಬಿ ಅವರನ್ನು ಉಳಿಸಿಕೊಂಡಿರಲಿಲ್ಲ. 31 ವರ್ಷ ವಯಸ್ಸಿನ ಪಾಟೀದಾರ್ ಅವರಿಗೆ ಮೊದಲ ಬಾರಿ ನಾಯಕರಾಗಿದ್ದಾರೆ.
17 ವರ್ಷಗಳ ಹಿಂದೆ ಐಪಿಎಲ್ನ ಮೊದಲ ಪಂದ್ಯ ಈ ಎರಡು ತಂಡಗಳ ನಡುವೆ ಇದೇ ಕ್ರೀಡಾಂಗಣದಲ್ಲಿ ನಡೆದಿತ್ತು. ಆ ಪಂದ್ಯದಲ್ಲಿ ಕೆಕೆಆರ್ ತಂಡಕ್ಕೆ ಬ್ರೆಂಡನ್ ಮೆಕ್ಕಲಂ 158 ರನ್ ಗಳಿಸಿ ಕಾವೇರಿಸಿದ್ದರು. ಆದರೆ ಆ ಬಳಿಕ ಹೂಗ್ಲಿ ನದಿಯಲ್ಲಿ ಸಾಕಷ್ಟು ನೀರು ಹರಿದುಹೋಗಿದೆ. ಕೋಲ್ಕತ್ತ ಮೂರು ಬಾರಿ ಚಾಂಪಿಯನ್ ಆಗಿದೆ. ಈ ಸಲ ಕಪ್ ನಮ್ದೇ ಎಂಬ ಟ್ಯಾಗ್ಲೈನ್ ಸವಕಲಾಗಿದ್ದು ಆರ್ಸಿಬಿಗೆ ಪ್ರಶಸ್ತಿ ಇನ್ನೂ ಕೈಗೆಟುಕಿಲ್ಲ.
ಕೆಕೆಆರ್ ತಂಡದಲ್ಲಿ ನಾಯಕತ್ವ ಬದಲಾವಣೆಯಾಗಿದ್ದು, ದಾಖಲೆ ಮೊತ್ತಕ್ಕೆ ಪಂಜಾಬ್ ಕಿಂಗ್ಸ್ ಪಾಲಾಗಿರುವ ಶ್ರೇಯಸ್ ಅಯ್ಯರ್ ಸ್ಥಾನದಲ್ಲಿ ಅಜಿಂಕ್ಯ ರಹಾನೆ ಸಾರಥ್ಯ ವಹಿಸಿದ್ದಾರೆ.
ಇತ್ತೀಚಿನ ಚಾಂಪಿಯನ್ ಟ್ರೋಫಿಯಲ್ಲಿ ಭಾರತ ತಂಡದ ಗೆಲುವಿನಲ್ಲಿ ಕಂಗೊಳಿಸಿದ್ದ ವರುಣ್ ಚಕ್ರವರ್ತಿ ಅವರು ಅನುಭವಿ ವಿರಾಟ್ ಕೊಹ್ಲಿ ಅವರನ್ನು ಹೇಗೆ ಕಟ್ಟಿಹಾಕಲ್ಲರು ಎಂಬುದರ ಮೇಲೆ ಎಲ್ಲರ ಗಮನವಿದೆ. ನೆಟ್ಸ್ನಲ್ಲಿ ಕೊಹ್ಲಿ ಅವರು ಸ್ಪಿನ್ ದಾಳಿಯನ್ನು ಎದುರಿಸುವ ಕಡೆಗೇ ಹೆಚ್ಚು ಲಕ್ಷ್ಯ ನೀಡಿದರು.
ವೆಸ್ಟ್ ಇಂಡೀಸಿನ 36 ವರ್ಷ ವಯಸ್ಸಿನ ಆಲ್ರೌಂಡರ್ ಸುನೀಲ್ ನಾರಾಯಣ್ ಅವರು ಕೋಲ್ಕತ್ತದ ಪ್ರಮುಖ ಆಟಗಾರ. ಇಲ್ಲಿನ ಸ್ಪಿನ್ ಸ್ನೇಹಿ ಪಿಚ್ನಲ್ಲಿ ಚಕ್ರವರ್ತಿ ಅವರ ಜೊತೆ ನಾರಾಯಣ್ ಅಪಾಯಕಾರಿ ಸಂಯೋಜನೆ ಆಗಬಲ್ಲರು.
ಆರ್ಸಿಬಿ ಈ ಬಾರಿ ಹೊಸ ಸಂಯೋಜನೆಯೊಡನೆ ಕಣಕ್ಕಿಳಿಯುವುದು ಖಚಿತ. ಕೊಹ್ಲಿ ಅವರೊಂದಿಗೆ ಆಸ್ಟ್ರೇಲಿಯಾದ ಆಕ್ರಮಣಕಾರಿ ಆಟಗಾರ ಫಿಲ್ ಸಾಲ್ಟ್ ಆಡಲು ಇಳಿಯಲಿದ್ದಾರೆ. ತಂಡದಲ್ಲಿ ಲಿಯಾಮ್ ಲಿವಿಂಗ್ಸ್ಟೋನ್, ಟಿಮ್ ಡೇವಿಡ್, ಜಿತೇಶ್ ಶರ್ಮಾ ಅಂಥ ನುರಿತ ಫಿನಿಷರ್ಗಳಿದ್ದಾರೆ.
ಮೊಹಮ್ಮದ್ ಸಿರಾಜ್ ಅನುಪಸ್ಥಿತಿಯಲ್ಲಿ ವೇಗದ ಬೌಲಿಂಗ್ ಹೊಣೆ ಜೋಶ್ ಹ್ಯಾಜಲ್ವುಡ್ ಮತ್ತು ಅನುಭವಿ ಭುವನೇಶ್ವರ ಕುಮಾರ್ ಹೆಗಲೇರಲಿದೆ. ಕೃಣಾಲ್ ಪಾಂಡ್ಯ, ರೊಮಾರಿಯೊ ಶೆಫರ್ಡ್ ಅಂಥ ಆಲ್ರೌಂಡರ್ಗಳೂ ತಂಡದಲ್ಲಿದ್ದಾರೆ.
ಹೆಚ್ಚಿನ ತಂಡಗಳಿಗೆ ಹೊಸ ನಾಯಕರು, ಕೆಲವು ಹೊಸ ನಿಯಮಗಳು– ಇವುಗಳ ಮಧ್ಯೆ ತನ್ನ ಎಂದಿನ ಆಕರ್ಷಣೆಯೊಡನೆ ಇಂಡಿಯನ್ ಪ್ರೀಮಿಯರ್ ಲೀಗ್ 18ನೇ ಆವೃತ್ತಿಗೆ ಶನಿವಾರ ಚಾಲನೆ ದೊರೆಯಲಿದೆ.
ಬದಲಾದ ನಿಯಮಗಳಲ್ಲಿ ಪ್ರಮುಖವಾಗಿರುವುದು ಚೆಂಡಿಗೆ ಹೊಳಪು ನೀಡಲು ಬೌಲರ್ಗಳಿಗೆ ಎಂಜಲು ಬಳಕೆಗೆ ಇದ್ದ ನಿಷೇಧ ತೆಗೆದುಹಾಕಿರುವುದು. ಕೋವಿಡ್ ಸಾಂಕ್ರಾಮಿಕದ ವೇಳೆ ಈ ನಿಷೇಧ ಹೇರಲಾಗಿತ್ತು. 2022ರಲ್ಲಿ ಐಸಿಸಿ ಈ ನಿಯಮವನ್ನು ಕಾಯಂಗೊಳಿಸಿತ್ತು. ಐಪಿಎಲ್ ನಾಯಕರ ಸಭೆಯಲ್ಲಿ ಹೊಸ ನಿಯಮಕ್ಕೆ ಒಪ್ಪಿಗೆ ನೀಡಲಾಗಿದೆ.
ಇಬ್ಬನಿ ಪರಿಣಾಮ ತಡೆಯಲು, 11ನೇ ಓವರಿನಲ್ಲಿ ಆನ್ಫೀಲ್ಡ್ ಅಂಪೈರ್ ವಿವೇಚನೆಯೊಡನೆ ಬಳಸಿದ ಚೆಂಡು ಬದಲಾಯಿಸಲು ಅವಕಾಶ ನೀಡಲಾಗಿದೆ. ಹೈಸ್ಕೋರಿಂಗ್ ಪಂದ್ಯಗಳಲ್ಲಿ ಇಬ್ಬನಿ ಪ್ರಮುಖ ಪಾತ್ರ ವಹಿಸುತಿತ್ತು. ಮಧ್ಯಾಹ್ನದ ಪಂದ್ಯಗಳಿಗೆ ಇದು ಅನ್ವಯಿಸುವುದಿಲ್ಲ.
ಚೆಂಡು ಪುಟಿತದ ಎತ್ತರ, ಆಫ್ಸೈಡ್ ವೈಡ್ ಘೋಷಣೆ ವೇಳೆ ತೀರ್ಪು ಮರುಪರಿಶೀಲನೆ (ಡಿಆರ್ಎಸ್) ಅನ್ವಯಿಸಲು ಈ ಐಪಿಎಲ್ನಲ್ಲಿ ಅವಕಾಶ ನೀಡಲಾಗಿದೆ.
ಸಾಕಷ್ಟು ಚರ್ಚೆಗೊಳಗಾದರೂ ಇಂಪ್ಯಾಕ್ಟ್ ಪ್ಲೇಯರ್ ನಿಯಮ ಉಳಿದುಕೊಂಡಿದೆ.
ಈ ಬಾರಿಯ ಐಪಿಎಲ್ ಹೆಚ್ಚಿನ ಸಂಖ್ಯೆಯಲ್ಲಿ ಹೊಸ ನಾಯಕರನ್ನು ಕಾಣುತ್ತಿದೆ. ಜೊತೆಗೇ ಕೆಲವು ಆಟಗಾರರು ‘ಸ್ಟಾಪ್ಗ್ಯಾಪ್’ ಆಧಾರದಲ್ಲೂ ನಾಯಕರಾಗಿದ್ದಾರೆ.
ಭಾರತ ತಂಡದಲ್ಲಿ ಒಂದೂ ಟಿ20 ಪಂದ್ಯ ಆಡದ ರಜತ್ ಪಾಟೀದಾರ್, ವಿರಾಟ್ ಕೊಹ್ಲಿ ಅಂಥ ಅನುಭವಿಯಿದ್ದರೂ ಆರ್ಸಿಬಿ ತಂಡದ ನಾಯಕತ್ವ ವಹಿಸುತ್ತಿದ್ದಾರೆ. ಕೆ.ಎಲ್.ರಾಹುಲ್ ಅಂಥ ಆಟಗಾರ ಇದ್ದರೂ ಅಕ್ಷರ್ ಪಟೇಲ್ ಅವರಿಗೆ ಡೆಲ್ಲಿ ಕ್ಯಾಪಿಟಲ್ಸ್ ಸಾರಥ್ಯ ವಹಿಸಲಾಗಿದೆ.
ಈ ಹಿಂದಿನ ಋತುವಿನಲ್ಲಿ ಕೋಲ್ಕತ್ತ ತಂಡಕ್ಕೆ ನಾಯಕರಾಗಿದ್ದ ಶ್ರೇಯಸ್ ಅಯ್ಯರ್ ಈ ಬಾರಿ ಪಂಜಾಬ್ ಕಿಂಗ್ಸ್ ನಾಯಕ. ಅಜಿಂಕ್ಯ ರಹಾನೆ ಅವರು ಕೋಲ್ಕತ್ತ ನೈಟ್ ರೈಡರ್ಸ್ ಕಪ್ತಾನರಾಗಿದ್ದಾರೆ.
ಬೆರಳಿನ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಸಂಜು ಸ್ಯಾಮ್ಸನ್ ಬದಲು ಯುವ ಬ್ಯಾಟರ್ ರಿಯಾನ್ ಪರಾಗ್ ಮೊದಲ ಮೂರು ಪಂದ್ಯಗಳಿಗೆ ರಾಜಸ್ಥಾನ ರಾಯಲ್ಸ್ ನೇತೃತ್ವ ವಹಿಸುವರು.
ಹಾರ್ದಿಕ್ ಪಾಂಡ್ಯ ಅವರು ಒಂದು ಪಂದ್ಯದ ನಿಷೇಧ ಅನುಭವಿಸುತ್ತಿರುವ ಕಾರಣ ಮುಂಬೈ ಇಂಡಿಯನ್ಸ್ ನಾಯಕತ್ವ ಸೂರ್ಯಕುಮಾರ್ ಯಾದವ್ ಹೆಗಲೇರಿದೆ.
ಡೆಲ್ಲಿ ತಂಡದ ನಾಯಕರಾಗಿದ್ದ ರಿಷಭ್ ಪಂತ್ ಅವರು ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.
ಈ ಬಾರಿಯ ಹರಾಜಿನಲ್ಲಿ ಅತಿ ದುಬಾರಿ ₹27 ಕೋಟಿ ಮೊತ್ತ ಪಡೆದ ಆಟಗಾರ ಪಂತ್ ಅವರು ಟೀಕಾಕಾರರ ಬಾಯಿ ಮುಚ್ಚಿಸುವ ಸವಾಲು ಎದುರಿಸುತ್ತಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಅವರು ತಂಡದಲ್ಲಿದ್ದರೂ ಆಡುವ ಅವಕಾಶ ಪಡೆದುಕೊಂಡಿರಲಿಲ್ಲ. ಇಲ್ಲಿ ಉತ್ತಮವಾಗಿ ಆಡಿದಲ್ಲಿ ಅವರು ತಾವು ಚುಟುಕು ಮಾದರಿಯಲ್ಲಿ ಆಕ್ರಮಣದ ಆಟಕ್ಕೆ ಸೈ ಎಂದು ಸಾಬೀತುಪಡಿಸಿಕೊಳ್ಳಬಹುದು.
ಕೋಚ್ಗಳಲ್ಲೂ ಬದಲಾವಣೆಯಾಗಿದೆ. ರಿಕಿ ಪಾಂಟಿಂಗ್ ಡೆಲ್ಲಿ ಕ್ಯಾಪಿಟಲ್ಸ್ನಿಂದ ಪಂಜಾಬ್ ಕಿಂಗ್ಸ್ಗೆ ಕೋಚ್ ಆಗಿದ್ದಾರೆ. ಹೇಮಾಂಗ್ ಬದಾನಿ ಅವರು ಡೆಲ್ಲಿ ಕ್ಯಾಪಿಟಲ್ಸ್ ಹೆಡ್ ಕೋಚ್ ಆಗಿದ್ದಾರೆ.
ಬೂಮ್ರಾ ಅವರ ಫಿಟ್ನೆಸ್ ಕುರಿತು ಇನ್ನೂ ಸ್ಪಷ್ಟತೆ ಲಭಿಸಿಲ್ಲ. ಬೆಂಗಳೂರಿನ ಬಿಸಿಸಿಐ ಶ್ರೇಷ್ಠತಾ ಕೇಂದ್ರದಲ್ಲಿ ಅವರು ಆರೈಕೆಯಲ್ಲಿದ್ದು ತಮ್ಮ ಫಿಟ್ನೆಸ್ ಪರಿಶೀಲನೆಗೆ ಒಳಗಾಗಿದ್ದಾರೆ. ಮುಂಬೈ ಇಂಡಿಯನ್ಸ್ ತಂಡಕ್ಕೆ ಅವರು ಪ್ರಮುಖ ಅಸ್ತ್ರವಾಗಿದ್ದಾರೆ.
ಇದು ಮಹೇಂದ್ರ ಸಿಂಗ್ ಧೋನಿ ಅವರ ಕೊನೆಯ ಐಪಿಎಲ್ ಆಗಬಹುದು ಎಂಬ ಚರ್ಚೆಯೂ ನಡೆಯುತ್ತಿದೆ. 43 ವರ್ಷ ವಯಸ್ಸಿನ ಧೋನಿ 2020ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾಗಿದ್ದರೂ, ಐಪಿಎಲ್ನಲ್ಲಿ ಮುಂದುವರಿದಿದ್ದಾರೆ.
ಅಭಿಮಾನಿಗಳ ಪಾಲಿಗೆ ಮೆಚ್ಚಿನ ಆಟಗಾರರಾಗಿರುವ ಧೋನಿ ಈ ಹಿಂದಿನಂತೆ ಮ್ಯಾಚ್ ವಿನ್ನರ್ ಎನಿಸದಿದ್ದರೂ ಈ ಚಾಣಾಕ್ಷ ಆಟಗಾರನ ಉಪಸ್ಥಿತಿ ತಂಡದ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ. ಆಟದ ಸೂಕ್ಷ್ಮತೆ, ಕ್ಷೇತ್ರ ರಕ್ಷಣೆ ಸಂಯೋಜನೆ, ಆಟದ ಫಿನಿಷಿಂಗ್ನಲ್ಲಿ ಅವರ ಕೌಶಲ ಮಸುಕಾಗಿಲ್ಲ.
ಅವರಿಗಿಂತ ಸರಿಯಾಗಿ 30 ವರ್ಷ ಕಿರಿಯ ಆಟಗಾರ ವೈಭವ ಸೂರ್ಯವಂಶಿ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಆಡುತ್ತಿದ್ದಾರೆ. ಆದರೆ ಅವರಿಗೆ ಆಡುವ ಅವಕಾಶ ದೊರೆಯಲಿದೆಯೇ ಎಂಬ ಪ್ರಶ್ನೆಯಿದೆ.
2024ರಲ್ಲಿ ಚುಟುಕು ವಿಶ್ವಕಪ್ ಗೆದ್ದ ನಂತರ ಅಂತರಾಷ್ಟ್ರೀಯ ಟಿ20ಗೆ ವಿದಾಯ ಹೇಳಿದ್ದರೂ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ಐಪಿಎಲ್ನಲ್ಲಿ ಈಗಲೂ ಪ್ರಮುಖ ತಾರೆಗಳಾಗಿ ಉಳಿದಿದ್ದಾರೆ.
ಕೊಹ್ಲಿ, ಕಳೆದ ಸಾಲಿನಲ್ಲಿ 741 ರನ್ಗಳೊಡನೆ ಐಪಿಎಲ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದ ಗೌರವಕ್ಕೆ ಪಾತ್ರರಾಗಿದ್ದರು. ರೋಹಿತ್ ಅವರೂ ತಮ್ಮ ವೈಭವದ ಆಟಕ್ಕೆ ಮರಳಲು ತುದಿಗಾಲಲ್ಲಿ ನಿಂತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.