
ಕೊಲಂಬೊ: ಆತಿಥೇಯ ಶ್ರೀಲಂಕಾ ತಂಡದ ಪಾಲಿಗೆ ಬುಧವಾರ ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಟಿ20 ವಿಶ್ವಕಪ್ ಸೂಪರ್ ಎಂಟರ ಹಂತದ ಪಂದ್ಯ ಮಾಡು– ಮಡಿ ರೀತಿಯಲ್ಲಿದೆ. ಮಳೆಯ ಸಾಧ್ಯತೆಯಿಲ್ಲದ ಕಾರಣ ಎರಡೂ ತಂಡಗಳು ಈ ಹಂತದಲ್ಲಿ ಮೊದಲ ಗೆಲುವಿನ ಯತ್ನದಲ್ಲಿವೆ.
ನಿಧಾನಗತಿಯ ಬೌಲರ್ಗಳೆದುರು ಶ್ರೀಲಂಕಾದ ಬ್ಯಾಟಿಂಗ್ ಸುಧಾರಿಸಿಕೊಳ್ಳಬೇಕಾದ ಅಗತ್ಯವಿದೆ. ಪಲ್ಲೆಕೆಲೆ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ 147 ರನ್ಗಳ ಸಾಧಾರಣ ಮೊತ್ತವನ್ನೂ ಬೆನ್ನಟ್ಟಲು ಲಂಕಾಕ್ಕೆ ಸಾಧ್ಯವಾಗಿರಲಿಲ್ಲ. ಭಾರತದ ಪಿಚ್ಗಳಿಗೆ ಹೋಲಿಸಿದರೆ ಲಂಕಾದ ಪಿಚ್ಗಳು ಬೌಲರ್ ಸ್ನೇಹಿಯಾಗಿವೆ. ಪ್ರೇಮದಾಸ ಕ್ರೀಡಾಂಗಣದ ಬೌಂಡರಿಗಳು ದೊಡ್ಡದಿರುವ ಕಾರಣ ಸಿಕ್ಸರ್, ಬೌಂಡರಿಗಳನ್ನು ಹೊಡೆಯುವುದು ಇಲ್ಲಿ ಪ್ರಯಾಸದ ಕೆಲಸ.
ಹೊಡೆತಗಳ ಆಯ್ಕೆಯಲ್ಲೂ ಲಂಕಾದ ಆಟಗಾರರು ಈ ಹಿಂದಿನ ತಪ್ಪುಗಳನ್ನು ತಿದ್ದಬೇಕಾಗಿದೆ. ಬೌಲಿಂಗ್ನಲ್ಲಿ ಎಡಗೈ ಸ್ಪಿನ್ನರ್ ದುನಿತ್ ವೆಲ್ಲಾಳಗೆ ಅವರು ಮಾತ್ರ ಪರಿಣಾಮಕಾರಿ ಎನಿಸಿದ್ದಾರೆ. ವೇಗದ ಬೌಲರ್ಗಳ ಪಾತ್ರವೂ ನಿರಾಶೆ ಮೂಡಿಸುವಂತೇನೂ ಇಲ್ಲ.
ಪಾಕಿಸ್ತಾನ ವಿರುದ್ಧ ಸೂಪರ್ ಎಂಟರ ಹಂತದ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ಮಳೆಯ ಕಾರಣ ಒಂದು ಪಾಯಿಂಟ್ ಮಾತ್ರ ಪಡೆದಿತ್ತು.
ಕಿವೀಸ್ ತಂಡದಲ್ಲಿ ನಾಯಕ ಮಿಚೆಲ್ ಸ್ಯಾಂಟ್ನರ್ ಸೇರಿದಂತೆ ಉತ್ತಮ ಸ್ಪಿನ್ನರ್ಗಳಿದ್ದಾರೆ. ನ್ಯೂಜಿಲೆಂಡ್ನ ಆರಂಭ ಆಟಗಾರರಾದ ಫಿನ್ ಅಲೆನ್ ಮತ್ತು ಟಿಮ್ ಸೀಫರ್ಟ್ ಉತ್ತಮ ಲಯದಲ್ಲಿದ್ದು, ಅದನ್ನು ಮುಂದುವರಿಸುವ ತವಕದಲ್ಲಿದ್ದಾರೆ. ರಚಿನ್ ರವೀಂದ್ರ ಅವರೂ ಮತ್ತೊಂದು ಉತ್ತಮ ಇನಿಂಗ್ಸ್ ನಿರೀಕ್ಷೆಯಲ್ಲಿದ್ದಾರೆ. ಕೆನಡಾ ವಿರುದ್ಧ ಈ ಹಿಂದಿನ ಪಂದ್ಯದಲ್ಲಿ ಅರ್ಧ ಶತಕ ಹೊಡೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.