ADVERTISEMENT

226 ರನ್‌ಗಳ ಗುರಿ ನೀಡಿದ ಭಾರತ, ಈಡೇರುವುದೇ ಏಕದಿನ ಸರಣಿ ಕ್ಲೀನ್‌ಸ್ವೀಪ್‌ ಕನಸು?

​ಪ್ರಜಾವಾಣಿ ವಾರ್ತೆ
Published 23 ಜುಲೈ 2021, 14:59 IST
Last Updated 23 ಜುಲೈ 2021, 14:59 IST
225ರನ್‌ಗೆ ಭಾರತ ತಂಡವನ್ನು ಆಲೌಟ್‌ ಮಾಡಿದ ಸಂಭ್ರಮದಲ್ಲಿ ಶ್ರೀಲಂಕಾ ಆಟಗಾರರು.
225ರನ್‌ಗೆ ಭಾರತ ತಂಡವನ್ನು ಆಲೌಟ್‌ ಮಾಡಿದ ಸಂಭ್ರಮದಲ್ಲಿ ಶ್ರೀಲಂಕಾ ಆಟಗಾರರು.   

ಕೊಲಂಬೊ:ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ, ಶ್ರೀಲಂಕಾಗೆ 226 ರನ್ ಗುರಿ ನೀಡಿದೆ. ಮಳೆಯ ಅಡಚಣೆಯಿಂದಾಗಿ ಸೀಮಿತ 50 ಓವರ್‌ಗಳನ್ನು 47ಕ್ಕೆ ಇಳಿಸಲಾಯಿತು. ಬಳಿಕ ಬ್ಯಾಟಿಂಗ್‌ ಮುಂದುವರಿಸಿದ ಭಾರತ 43.1 ಓವರ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡು 225 ರನ್‌ ಕಲೆ ಹಾಕಿತು.

ಆರಂಭಿಕ ಆಟಗಾರ ಪೃಥ್ವಿ ಶಾ ಮತ್ತು ಸಂಜು ಸ್ಯಾಮ್ಸನ್‌ ಭರ್ಜರಿ ಆಟದಿಂದ ಭಾರತ ಭಾರಿ ಮೊತ್ತ ಕಲೆ ಹಾಕುವ ಮುನ್ಸೂಚನೆ ನೀಡಿತ್ತು. ಮಳೆಯಿಂದ ಪಂದ್ಯವನ್ನು ತಾತ್ಕಾಲಿಕವಾಗಿ ನಿಲ್ಲಿಸಿದಾಗ 3 ವಿಕೆಟ್‌ ಕಳೆದುಕೊಂಡು 147 ರನ್‌ಗಳನ್ನು ದಾಖಲಿಸಿತ್ತು. ಪೃಥ್ವಿ ಶಾ 1 ರನ್‌ನಿಂದ ಅರ್ಧ ಶತಕ ವಂಚಿತರಾದರೆ, ಸ್ಯಾಮ್ಸನ್‌ ಅರ್ಧ ಶತಕಕ್ಕೆ 4 ರನ್‌ಗಳು ಅಗತ್ಯವಿದ್ದಾಗ ಎಡವಿದರು.

ಮಳೆ ನಂತರ ಬ್ಯಾಟಿಂಗ್‌ ಮುಂದುವರಿಸಿದ ಭಾರತ ಕೇವಲ 78 ರನ್‌ಗಳಿಗೆ ಉಳಿದ 7 ವಿಕೆಟ್‌ಗಳನ್ನು ಕಳೆದುಕೊಂಡಿತು. ಭಾರತದ ಪರ ಸೂರ್ಯಕುಮಾರ್‌ ಯಾದವ್‌ ಹೊರತು ಪಡಿಸಿ ಇತರ ಆಟಗಾರರು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. ಶ್ರೀಲಂಕಾ ಪರ ಪ್ರವೀಣ್‌ ಜಯವಿಕ್ರಮ ಮತ್ತು ಅಖಿಲ ಧನಂಜಯ ಜಂಟಿ ದಾಳಿಗೆ ಟೀಮ್‌ ಇಂಡಿಯಾ ಬ್ಯಾಟ್ಸ್‌ಮನ್‌ಗಳು ಒಬ್ಬೊಬ್ಬರಾಗಿ ವಿಕೆಟ್‌ ಒಪ್ಪಿಸಿ ಮರಳಿದರು. ಜಯವಿಕ್ರಮ ಮತ್ತು ಧನಂಜಯ ತಲಾ 3 ವಿಕೆಟ್‌ ಪಡೆದು ಮಿಂಚಿದರು.

ADVERTISEMENT

ಮಧ್ಯಮ ಕ್ರಮಾಂಕದ ಆಟಗಾರ ಸೂರ್ಯಕುಮಾರ್‌ ಯಾದವ್‌ ಆಕರ್ಷಕ 40 ರನ್‌ಗಳನ್ನು ಕಾಣಿಕೆ ನೀಡಿದರು. ರಾಹುಲ್‌ ಚಹಾರ್‌ ಮತ್ತು ನವದೀಪ್‌ ಸೈನಿ ಕ್ರೀಸ್‌ನಲ್ಲಿ ಸ್ವಲ್ಪ ಹೊತ್ತು ಉಳಿಯುವ ಮೂಲಕ ಟೀಮ್‌ ಇಂಡಿಯಾ 200ರ ಒಳಗೆ ಆಲೌಟ್‌ ಆಗುವುದನ್ನು ತಪ್ಪಿಸಿದರು. ಇಬ್ಬರು ಕ್ರಮವಾಗಿ13, 15 ರನ್‌ ಗಳಿಸಿದರು. ಅಖಿಲ ಧನಂಜಯ ದಾಳಿಗೆ ನಿತೀಶ್‌ ರಾಣಾ ಮತ್ತು ಕೃಷ್ಣಪ್ಪ ಗೌತಮ್‌ ಒಬ್ಬರಾದ ಮೇಲೊಬ್ಬರು ವಿಕೆಟ್‌ ಚೆಲ್ಲಿದ್ದು ಭಾರತದ ರನ್‌ಗತಿಗೆ ಕಡಿವಾಣ ಹಾಕಿತು.

ಮೂರು ಪಂದ್ಯಗಳ ಸರಣಿಯಲ್ಲಿ ಎರಡು ಪಂದ್ಯಗಳನ್ನು ಈಗಾಗಲೇ ಜಯಿಸುವ ಮೂಲಕ ಭಾರತವು ಸರಣಿ ತನ್ನದಾಗಿಸಿಕೊಂಡಿದೆ. ಈ ಪಂದ್ಯವನ್ನೂ ಗೆಲ್ಲುವ ಮೂಲಕ ಸರಣಿ ಕ್ಲೀನ್‌ಸ್ವೀಪ್‌ ಮಾಡುವ ಭಾರತದ ಕನಸಿಗೆ ಸಾಧಾರಣ ಮೊತ್ತ ಅಡ್ಡಿಯಾದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.