ಬೆಂಗಳೂರಿನ ಕೆಎಸ್ಸಿಎ ಸಭಾಂಗಣದಲ್ಲಿ ಭಾನುವಾರ ನಡೆದ ಸೈಯದ್ ಕಿರ್ಮಾನಿ ಅವರ ಆತ್ಮಚರಿತ್ರೆಯ ಬಿಡುಗಡೆಯ ಸಮಾರಂಭದಲ್ಲಿ ಎರ್ರಪಳ್ಳಿ ಪ್ರಸನ್ನ, ಸೈಯದ್ ಕಿರ್ಮಾನಿ, ಡಿ ಕೆ ಶಿವಕುಮಾರ್, ಕಪಿಲ್ದೇವ್, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಹಾಜರಿದ್ದರು
–ಪ್ರಜಾವಾಣಿ ಚಿತ್ರ/ಕೃಷ್ಣ ಕುಮಾರ್ ಪಿ.ಎಸ್.
ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಸಭಾಭವನದಲ್ಲಿ ಭಾನುವಾರ ಬೆಳಿಗ್ಗೆಯೇ ಕ್ರಿಕೆಟ್ ತಾರೆಗಳ ಹೊಳಪು ಚೆಲ್ಲಿತ್ತು. ಸುಮಾರು ಐದು ದಶಕಗಳಲ್ಲಿ ಭಾರತ ಕ್ರಿಕೆಟ್ ರಂಗವನ್ನು ಶ್ರೀಮಂತ ಗೊಳಿಸಿದ ದಿಗ್ಗಜರು ಅಲ್ಲಿದ್ದರು.
ಅವರೆಲ್ಲರನ್ನೂ ಒಂದೇ ಸೂರಿನಡಿ ಸೇರುವಂತೆ ಮಾಡಿದ್ದು ವಿಕೆಟ್ಕೀಪಿಂಗ್ ದಂತಕಥೆ ಸೈಯದ್ ಮುಜ್ತಾಬಾ ಹುಸೇನ್ ಕಿರ್ಮಾನಿ. ಅವರ ಆತ್ಮಚರಿತ್ರೆ ‘ಸ್ಟಂಪ್ಡ್ –ಲೈಫ್ ಬಿಹ್ಯಾಂಡ್ ಅ್ಯಂಡ್ ಬಿಯಾಂಡ್ ದ 22 ಯಾರ್ಡ್ಸ್’ ಬಿಡುಗಡೆ ಸಮಾರಂಭದಲ್ಲಿ ಅವರೆಲ್ಲರೂ ಸೇರಿದ್ದರು. ಭಾನುವಾರ ಕಿರ್ಮಾನಿ ಅವರು 75ನೇ ವಸಂತಕ್ಕೂ ಕಾಲಿರಿಸಿದರು.
1983ರ ವಿಶ್ವಕಪ್ ವಿಜೇತ ಭಾರತ ತಂಡದ ನಾಯಕ ಕಪಿಲ್ ದೇವ್ ಅವರು ಕೃತಿಯನ್ನು ಬಿಡುಗಡೆ ಮಾಡಿದರು. ಅವರೊಂದಿಗೆ ಸ್ಪಿನ್ ದಿಗ್ಗಜರಾದ ಎರ್ರಪಳ್ಳಿ ಪ್ರಸನ್ನ, ಬಿ.ಎಸ್. ಚಂದ್ರಶೇಖರ್, ಅನಿಲ್ ಕುಂಬ್ಳೆ, ಬ್ರಿಜೇಶ್ ಪಟೇಲ್, ಬ್ಯಾಟಿಂಗ್ ಚಾಂಪಿಯನ್ ರಾಹುಲ್ ದ್ರಾವಿಡ್, ವಿ.ವಿ.ಎಸ್. ಲಕ್ಷ್ಮಣ್ ಅವರಿದ್ದರು. ಐಟಿ ಉದ್ಯಮದ ದಿಗ್ಗಜ, ಇನ್ಫೋಸಿಸ್ನ ಎನ್.ಆರ್. ನಾರಾಯಣ ಮೂರ್ತಿ ಅವರೂ ಹಾಜರಿದ್ದರು. ಡಿಸಿಎಂ ಡಿ.ಕೆ. ಶಿವಕುಮಾರ್ ಕೂಡ ಆಗಮಿಸಿದ್ದರು.
ಪುಸ್ತಕ ಬಿಡುಗಡೆ ಮಾಡಿದ ಕಪಿಲ್ ದೇವ್, ‘ಕಿರಿ ಭಾಯ್ (ಕಿರ್ಮಾನಿ) ನಮ್ಮೊಂದಿಗೆ ತಂಡದಲ್ಲಿದ್ದಾಗ ಮಿತಭಾಷಿಯಾಗಿದ್ದರು. ಶಾಂತಚಿತ್ತದಿಂದ ಇರುತ್ತಿದ್ದರು. ಆದರೆ ಅವರ ಶಿಸ್ತು, ಸಂಯಮವನ್ನು ನೋಡಿ ನಾವೂ ಬಹಳಷ್ಟು ಕಲಿತಿದ್ದೇವೆ’ ಎಂದರು.
ಎನ್.ಆರ್. ನಾರಾಯಣಮೂರ್ತಿ ಮಾತನಾಡಿ, ‘ಕರ್ನಾಟಕದ ಕ್ರಿಕೆಟಿಗರು ಸಭ್ಯ ಸಂಸ್ಕೃತಿಯವರು. ಆದ್ದರಿಂದ ಅವರು ಎಲ್ಲಿಯೇ ಹೋಗಲಿ ತಮ್ಮ ಉತ್ತಮ ಆಟದ ಜೊತೆಗೆ, ಸ್ವಭಾವದಿಂದಲೂ ಜನಮನ ಗೆಲ್ಲುತ್ತಾರೆ. ದೇಶಕ್ಕೆ, ರಾಜ್ಯಕ್ಕೆ ಕೀರ್ತಿ ತರುತ್ತಾರೆ. ಅಂತಹ ಗಣ್ಯರಲ್ಲಿ ಕಿರ್ಮಾನಿ ಕೂಡ ಅಗ್ರಮಾನ್ಯರು’ ಎಂದರು.
‘ನಾನು ಇಲ್ಲಿ ಉಪಮುಖ್ಯಮಂತ್ರಿಯಾಗಿ ಬಂದಿಲ್ಲ. ಕಿರ್ಮಾನಿಯವರ ಅಭಿಮಾನಿಯಾಗಿ ಬಂದಿರುವೆ’ ಎಂದು ಡಿ.ಕೆ. ಶಿವಕುಮಾರ್ ಹೇಳಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.