ಕೊಲಂಬೊ: ಚೆಂಡಿನ ಹೊಳಪು ಉಳಿಸಿಕೊಳ್ಳಲು ಬೆವರು ಬಳಕೆಯು ಎಂಜಲಿನಷ್ಟು ಪರಿಣಾಮಕಾರಿಯಲ್ಲವೆಂದು ಶ್ರೀಲಂಕಾ ತಂಡದ ಬೌಲರ್ಗಳು ಮುಖ್ಯ ಕೋಚ್ ಮಿಕಿ ಆರ್ಥರ್ ಅವರಿಗೆ ತಿಳಿಸಿದ್ದಾರೆ.
ಕೊರೊನಾ ವೈರಸ್ ಸೋಂಕು ಪ್ರಸರಣ ತಡೆಗೆ ಚೆಂಡಿಗೆ ಎಂಜಲು ಲೇಪಿಸುವುದನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲು ಶಿಫಾರಸು ಮಾಡಿರುವ ಐಸಿಸಿ ಕ್ರಿಕೆಟ್ ಸಮಿತಿಯಲ್ಲಿ ಆರ್ಥರ್ ಸದಸ್ಯರಾಗಿದ್ದಾರೆ.
ಲಂಕಾ ತಂಡವು ಈಚೆಗಷ್ಟೇ ಅಭ್ಯಾಶ ಶಿಬಿರ ಆರಂಭಿಸಿದೆ. ಕ್ರಿಕೆಟಿಗರು ತಾಲೀಮು ನಡೆಸುತ್ತಿದ್ದಾರೆ.
‘ಬೆವರು ಬಳಕೆಯಿಂದ ಚೆಂಡು ತುಸು ಭಾರವಾಯಿತು ಎಂದು ಬೌಲರ್ಗಳು ಹೇಳಿದ್ದಾರೆ. ಆದರೆ ಸಲೈವಾದಷ್ಟು ಪರಿಣಾಮಕಾರಿಯಲ್ಲ ಎಂದಿದ್ದಾರೆ. ಚೆಂಡಿನ ಹೊಳಪು ಹೆಚ್ಚಿಸಲು ಎಂಜಲು ಬಳಕೆಯು ಇಲ್ಲಿಯವರೆಗೂ ರೂಢಿಗತವಾಗಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಈ ರೂಢಿಯನ್ನು ಬದಲಾಯಿಸಿಕೊಳ್ಳುವ ಅವಶ್ಯಕತೆ ಇದೆ’ ಎಂದು ಆರ್ಥರ್ ಹೇಳಿದ್ದಾರೆ.
‘ನಾನು ಐಸಿಸಿ ಕ್ರಿಕೆಟ್ ಸಮಿತಿಯಲ್ಲಿದ್ದೇನೆ. ಈ ಶಿಫಾರಸು ಮಾಡುವ ಮುನ್ನ ಏನೆಲ್ಲ ಚರ್ಚೆಗಳು ನಡೆದಿವೆ ಎಂಬುದು ಸ್ಪಷ್ಟವಾಗಿ ಗೊತ್ತಿದೆ. ಬೆವರಿನಿಂದ ಕೊರೊನಾ ಸೋಂಕು ಪ್ರಸರಣವಾಗುವುದಿಲ್ಲವೆಂಬುದು ಸಾಬೀತಾಗಿದೆ. ಅದ್ದರಿಂದ ಅದೊಂದಕ್ಕೆ ಅನುಮತಿ ನೀಡಲು ನಿರ್ಧರಿಸಲಾಗಿದೆ’ ಎಂದು ಆರ್ಥರ್ ಸ್ಪಷ್ಟಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.