ಮೆಲ್ಬರ್ನ್: ಐಸಿಸಿ ಟ್ವೆಂಟಿ-20 ಕ್ರಿಕೆಟ್ ವಿಶ್ವಕಪ್ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯಕ್ಕೆ ಮತ್ತೆ ವೇದಿಕೆ ಸಿದ್ಧಗೊಂಡಿದೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಸೇರಿದಂತೆ ಕ್ರಿಕೆಟ್ ವಲಯದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ. ಅಭಿಮಾನಿಗಳು ಸಹ ಕಾತರದಿಂದ ಕಾಯುತ್ತಿದ್ದಾರೆ. ಆದರೆ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ, ಈ ಬಗ್ಗೆ ಹೆಚ್ಚು ಚಿಂತಿತರಾಗಿಲ್ಲ.
ಟೂರ್ನಿಗೂ ಮುನ್ನ ನಡೆದ ಎಲ್ಲ ತಂಡಗಳ ನಾಯಕರ ಮಾಧ್ಯಮ ಸಂವಾದದಲ್ಲಿ ಪ್ರತಿಕ್ರಿಯಿಸಿರುವ ರೋಹಿತ್, ಈ ಪಂದ್ಯದ ಮಹತ್ವವನ್ನು ನಾವು ಅರಿತುಕೊಂಡಿದ್ದೇವೆ. ಆದರೆ ಪ್ರತಿ ಬಾರಿಯೂ ಅದನ್ನೇ ಮಾತನಾಡುವ ಅಗತ್ಯವಿಲ್ಲ. ಅದು ನಿಮ್ಮೊಳಗೆ ಒತ್ತಡವನ್ನು ಸೃಷ್ಟಿಸುತ್ತದೆ ಎಂದು ಹೇಳಿದರು.
ಇದನ್ನೂ ಓದಿ:ಮಹಿಳೆಯರ ಏಷ್ಯಾ ಕಪ್: ಲಂಕಾ ಮಣಿಸಿದ ಭಾರತ ಚಾಂಪಿಯನ್
ಏಷ್ಯಾ ಕಪ್ ಆಗಲೀ ಅಥವಾ ಈಗ ಇಲ್ಲಿ ಪಾಕಿಸ್ತಾನ ತಂಡದ ಆಟಗಾರರನ್ನು ಭೇಟಿಯಾದಗೆಲ್ಲಾ ನಾವು ಕ್ರಿಕೆಟೇತರ ವಿಷಯಗಳ ಬಗ್ಗೆ ಚರ್ಚಿಸುತ್ತೇವೆ. ಕುಟುಂಬದ ಯೋಗಕ್ಷೇಮವನ್ನು ವಿಚಾರಿಸುತ್ತೇವೆ ಎಂದು ಹೇಳಿದರು.
ನಮ್ಮ ಹಿಂದಿನ ತಲೆಮಾರಿನ ಕ್ರಿಕೆಟಿಗರು ಅದನ್ನೇ ಹೇಳುತ್ತಿದ್ದರು. ಜೀವನ ಹೇಗೆ ಸಾಗುತ್ತಿದೆ? ಯಾವ ಕಾರು ಖರೀದಿಸಿದ್ದೀರಿ? ಹೊಸ ಕಾರು ಖರೀದಿಸುತ್ತೀರಾ ? ಎಂದು ರೋಹಿತ್ ವಿವರಿಸಿದರು.
ಪಾಕಿಸ್ತಾನದ ನಾಯಕ ಬಾಬರ್ ಆಜಂ ಕೂಡ ಇದಕ್ಕೆ ಸಮಾನವಾದ ಹೇಳಿಕೆ ನೀಡಿದ್ದು, ನಾವು ಭೇಟಿಯಾದ್ದಗೆಲ್ಲ ಕ್ರಿಕೆಟ್ ಬಗ್ಗೆ ಚರ್ಚಿಸುವುದಿಲ್ಲ ಎಂದು ಹೇಳಿದರು.
ರೋಹಿತ್ ನನಗಿಂತಲೂ ಹಿರಿಯರು. ಭಾರತವನ್ನು ಇಷ್ಟು ವರ್ಷಗಳಿಂದ ಪ್ರತಿನಿಧಿಸಿರುವ ಅವರ ಅನುಭವದಿಂದ ಕಲಿಯಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.
ಏತನ್ಮಧ್ಯೆ ಜಸ್ಪ್ರೀತ್ ಬೂಮ್ರಾ ಗಾಯದ ಸಮಸ್ಯೆ ಬಗ್ಗೆ ಮಾತನಾಡಿರುವ ರೋಹಿತ್, ಗಾಯಾಳುಗಳ ಸ್ಥಾನ ತುಂಬಬಲ್ಲ ಆಟಗಾರರು ತಂಡದಲ್ಲಿದ್ದಾರೆ. ಬೂಮ್ರಾ ವೃತ್ತಿ ಜೀವನದಲ್ಲಿ ಸಾಕಷ್ಟು ಕ್ರಿಕೆಟ್ ಬಾಕಿ ಉಳಿದಿದ್ದು, ಹಾಗಾಗಿ ಅಪಾಯ ಆಹ್ವಾನಿಸಲು ನಾವು ಸಿದ್ದರಿಲ್ಲ ಎಂದು ಹೇಳಿದ್ದಾರೆ.
ಆಸ್ಟ್ರೇಲಿಯಾ ಆತಿಥ್ಯ ವಹಿಸುತ್ತಿರುವ ಐಸಿಸಿ ಟ್ವೆಂಟಿ-20 ವಿಶ್ವಕಪ್ ಭಾನುವಾರದಿಂದ ಆರಂಭವಾಗಲಿದೆ. ಅಕ್ಟೋಬರ್ 23ರಂದು ಭಾರತ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ಸವಾಲನ್ನು ಎದುರಿಸಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.