ನವದೆಹಲಿ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಎದುರಾದ ಸೋಲಿನ ಬಳಿಕ ಭಾರಿ ಟೀಕೆಗೆ ಒಳಗಾಗಿರುವ ಮೊಹಮ್ಮದ್ ಶಮಿ ಅವರಿಗೆ ಭಾರತದ ಮಾಜಿ ಕ್ರಿಕೆಟಿಗ ಹಾಗೂ ಸಂಸದ ಗೌತಮ್ ಗಂಭೀರ್ ಬೆಂಬಲಿಸಿದ್ದಾರೆ.
ಕಿಡಿಗೇಡಿಗಳು ಮೊಹಮ್ಮದ್ ಶಮಿ ಅವರನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಧರ್ಮದ ಹೆಸರಿನಲ್ಲಿ ಅವಾಚ್ಯ ಪದಗಳಿಂದ ನಿಂದಿಸಿದ್ದರು.
ಈ ಕುರಿತು 'ಟೈಮ್ಸ್ ಆಫ್ ಇಂಡಿಯಾ' ಅಂಕಣದಲ್ಲಿ ಪ್ರತಿಕ್ರಿಯಿಸಿರುವ ಗಂಭೀರ್, 'ಪಾಕಿಸ್ತಾನ ವಿರುದ್ಧ ಭಾರತ ಸೋಲು ಅನುಭವಿಸಿದೆ. ಅದಾದ ನಂತರ ತಂಡದ ಹಾಗೂ ದೇಶದ ಮೇಲಿನ ಶಮಿ ನಿಯತ್ತನ್ನು ಪ್ರಶ್ನಿಸಲಾಗಿದೆ. ಎಷ್ಟು ಅಪಹಾಸ್ಯಕರ? ಒಂದು ನಿರ್ದಿಷ್ಟ ಧರ್ಮಕ್ಕೆ ಸೇರಿದ ಕಾರಣಕ್ಕೆ ಜಸ್ಪ್ರೀತ್ ಬೂಮ್ರಾ ಹಾಗೂ ಭುವನೇಶ್ವರ್ ಕುಮಾರ್ ಹೆಚ್ಚು ಬದ್ಧರಾಗಿದ್ದರು ಎಂದು ಹೇಳಬೇಕೇ? ನಾವು ಎತ್ತ ಸಾಗುತ್ತಿದ್ದೇವೆ?' ಎಂದು ಹೇಳಿದ್ದಾರೆ.
'ನನಗೆ ಶಮಿ ಚೆನ್ನಾಗಿ ಗೊತ್ತು, ನಾನು ಕೆಕೆಆರ್ ತಂಡದಲ್ಲಿ ಅವರನ್ನು ಮುನ್ನಡೆಸಿದ್ದೇನೆ. ಅವರು ಕಠಿಣ ಪರಿಶ್ರಮಿ ಹಾಗೂ ಬದ್ಧ ವೇಗದ ಬೌಲರ್ ಆಗಿದ್ದಾರೆ. ಅವರ ಪಾಲಿಗೆ ಕೆಟ್ಟ ದಿನವಾಗಿತ್ತು. ದುರದೃಷ್ಟವಶಾತ್ ಪಾಕಿಸ್ತಾನ ವಿರುದ್ಧ ಕೆಟ್ಟ ಪ್ರದರ್ಶನ ನೀಡಿದ್ದಾರೆ. ಆದರೆ ಯಾರಿಗೇ ಆದರೂ ಹೀಗೆ ಸಂಭವಿಸಬಹುದು. ನಾವು ಹೀಗೆ ಯಾಕೆ ಹೇಳಬಾರದು? ವೆಲ್ ಡನ್ ಪಾಕಿಸ್ತಾನ ಮತ್ತು ವಿಷಯವನ್ನು ಅಲ್ಲಿಗೆ ಮುಗಿಸಬೇಕು' ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.