ADVERTISEMENT

ಕೋಚ್ ಹುದ್ದೆಗೆ ರವಿಶಾಸ್ತ್ರಿ ಗುಡ್‌ಬೈ? ದ್ರಾವಿಡ್‌ರತ್ತ ಎಲ್ಲರ ಚಿತ್ತ!?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಆಗಸ್ಟ್ 2021, 6:29 IST
Last Updated 11 ಆಗಸ್ಟ್ 2021, 6:29 IST
ರಾಹುಲ್ ದ್ರಾವಿಡ್ ಹಾಗೂ ರವಿಶಾಸ್ತ್ರಿ
ರಾಹುಲ್ ದ್ರಾವಿಡ್ ಹಾಗೂ ರವಿಶಾಸ್ತ್ರಿ   

ನವದೆಹಲಿ: ಯುಎಇನಲ್ಲಿ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್ ಬಳಿಕ ಟೀಮ್ ಇಂಡಿಯಾ ಮುಖ್ಯ ತರಬೇತುದಾರನ ಸ್ಥಾನವನ್ನು ರವಿಶಾಸ್ತ್ರಿ ತೊರೆಯಲಿದ್ದಾರೆ ಎಂದು ವರದಿಯಾಗಿದೆ.

ಎಎನ್‌ಐ ಸುದ್ದಿ ಸಂಸ್ಥೆ ವರದಿಯ ಪ್ರಕಾರ, ಈಗಲೇ ಎಲ್ಲವನ್ನೂ ಖಚಿತವಾಗಿ ನಿರ್ಧರಿಸಲಾಗದು. ಆದರೆ ಮುಂಬರುವ ಟಿ20 ವಿಶ್ವಕಪ್ ಬಳಿಕ ಕೋಚಿಂಗ್ ಪ್ಯಾನೆಲ್‌ನಲ್ಲಿ ಮುಂದುವರಿಯಲು ರವಿಶಾಸ್ತ್ರಿ ಹಾಗೂ ಇತರೆ ಸಹಾಯಕ ತರಬೇತುದಾರರು ಆಸಕ್ತಿ ತೋರಿಲ್ಲ ಎಂದು ವರದಿಯಾಗಿವೆ.

ಕೋಚ್ ಸ್ಥಾನದಲ್ಲಿ ಮುಂದುವರಿಯಲು ಆಸಕ್ತಿ ತೋರದ ಶಾಸ್ತ್ರಿ?
ಎಎನ್‌ಐಗೆ ಪ್ರತಿಕ್ರಿಯಿಸಿರುವ ಬಿಸಿಸಿಐ ಮೂಲಗಳು, ಭಾರತ ಹಾಗೂ ಇಂಗ್ಲೆಂಡ್ ನಡುವಣ ಲಾರ್ಡ್ಸ್ ಟೆಸ್ಟ್ ಸಮಯದಲ್ಲಿ ಮಂಡಳಿ ಅಧಿಕಾರಿಗಳು, ರವಿಶಾಸ್ತ್ರಿ ಹಾಗೂ ಕೋಚಿಂಗ್ ಪ್ಯಾನೆಲ್ ಜೊತೆಗೆ ಮಾತುಕತೆ ನಡೆಸಲಿದ್ದಾರೆ. ತರಬೇತುದಾರರು ಕೋಚಿಂಗ್ ಪ್ಯಾನೆಲ್‌ನಲ್ಲಿ ಮುಂದುವರಿಯಲು ಆಸಕ್ತಿ ತೋರದಿದ್ದರೆ ಆ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ತಿಳಿಸಿದೆ.

ನಿಮಗೆ ತಿಳಿದಿರುವಂತೆಯೇ ಬಿಸಿಸಿಐ ಅಧ್ಯಕ್ಷ, ಕಾರ್ಯದರ್ಶಿ, ಖಜಾಂಜಿ ಮತ್ತು ಉಪಾಧ್ಯಕ್ಷರು ಇಂದು ಲಂಡನ್‌ಗೆ ಬಂದಿಳಿಯುತ್ತಾರೆ. ಅವರು ಶಾಸ್ತ್ರಿ ತಂಡದೊಂದಿಗೆ ಸಂವಾದ ನಡೆಸಲಿದ್ದು, ಟೀಮ್ ಇಂಡಿಯಾ ಭವಿಷ್ಯ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ. ಕೋಚ್ ಸ್ಥಾನದಲ್ಲಿ ಮುಂದುವರಿಯಲು ರವಿಶಾಸ್ತ್ರಿ ಆಸಕ್ತಿ ತೋರದಿದ್ದರೆ ಆ ಬಗ್ಗೆಯೂ ಚರ್ಚೆ ನಡೆಯಲಿದೆ. ಆದರೆ ಈಗಲೇ ಖಚಿತವಾಗಿ ನಿರ್ಧರಿಸಲಾಗದು ಎಂದಿದೆ.

ದ್ರಾವಿಡ್ ಮುಂದಿನ ಕೋಚ್..?
ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (ಎನ್‌ಸಿಎ) ಮುಖ್ಯಸ್ಥ ಹುದ್ದೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಮಂಗಳವಾರದಂದು ಅರ್ಜಿ ಆಹ್ವಾನಿಸಿದೆ. ಅದೇ ವೇಳೆ ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್‌ಗೆ ಮತ್ತಷ್ಟು ದೊಡ್ಡ ಹುದ್ದೆಯನ್ನು ನೀಡುವ ಇರಾದೆಯನ್ನು ಮಂಡಳಿ ಹೊಂದಿದೆ ಎಂಬುದು ತಿಳಿದು ಬಂದಿದೆ.

ಒಂದು ವೇಳೆ ರವಿಶಾಸ್ತ್ರಿ ನಿರ್ಗಮಿಸಲು ಬಯಸಿದರೆ ನೂತನ ಕೋಚ್ ಆಯ್ಕೆಯಲ್ಲಿ ರಾಹುಲ್ ದ್ರಾವಿಡ್ ಮುಂಚೂಣಿಯಲ್ಲಿ ಗುರುತಿಸಿದ್ದಾರೆ. ಆದರೆ ಇತ್ತೀಚಿನ ಶ್ರೀಲಂಕಾ ಪ್ರವಾಸದ ವೇಳೆ ಪೂರ್ಣಾವಧಿಗೆ ಕೋಚ್ ಆಗುವ ಬಗ್ಗೆ ಯೋಚಿಸಿಲ್ಲ ಎಂದು ದ್ರಾವಿಡ್ ಹೇಳಿಕೆ ನೀಡಿದ್ದರು. ಒಟ್ಟಿನಲ್ಲಿ ಮುಂಬರುವ ಬೆಳವಣಿಗೆಗಳು ಹೆಚ್ಚಿನ ಕುತೂಹಲ ಕೆರಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.