ದುಬೈ: ತಿಲಕ್ ವರ್ಮಾ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ 2025ನೇ ಸಾಲಿನ ಏಷ್ಯಾ ಕಪ್ ಫೈನಲ್ನಲ್ಲಿ ರೋಚಕ ಗೆಲುವು ಸಾಧಿಸಿತು. ತಿಲಕ್ ಬ್ಯಾಟ್ ಮಾಡಲು ಕ್ರೀಸ್ಗೆ ಬಂದಾಗ ಪಾಕಿಸ್ತಾನದ ಆಟಗಾರರು ಅವರ ಕುರಿತು ಸಾಕಷ್ಟು ಹೇಳಿಕೆ ನೀಡಿದರು. ಆದರೆ, ತಾವು ಮಾತ್ರ ಯಾವುದೇ ಪ್ರತಿಕ್ರಿಯೆ ನೀಡದೆ ಬ್ಯಾಟ್ ಮೂಲಕ ಉತ್ತರ ಕೊಡಬೇಕು ಎಂದುಕೊಂಡಿದ್ದಾಗಿ ಅವರು ಹೇಳಿಕೊಂಡಿದ್ದಾರೆ.
ಟೀಂ ಇಂಡಿಯಾ ಟಾಪ್ ಆರ್ಡರ್ ಬ್ಯಾಟರ್ಗಳ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ತಿಲಕ್ ಬ್ಯಾಟಿಂಗ್ಗೆ ಬರುತ್ತಾರೆ. ಆಗ ತಂಡ ಕೂಡ ಸಂಕಷ್ಟದಲ್ಲಿರುತ್ತದೆ. ಆ ಸಂದರ್ಭದಲ್ಲಿ ಉಭಯ ತಂಡಗಳ ನಡುವಿನ ಉದ್ವಿಗ್ನತೆಯನ್ನು ಇಟ್ಟುಕೊಂಡು ಪಾಕ್ ಆಟಗಾರರು ತಿಲಕ್ ಬಗ್ಗೆಯೂ ಸಾಕಷ್ಟು ಮಾತುಗಳನ್ನು ಹೇಳುತ್ತಾರೆ. ಆದರೆ, ಒತ್ತಡದ ನಡುವೆಯೂ ತಿಲಕ್ ಪಾಕ್ ಬೌಲರ್ಗಳ ಮೇಲೆ ಹಿಡಿತ ಸಾಧಿಸಿದರು.
ಈ ಕುರಿತು ಪ್ರತಿಕ್ರಿಯೆ ನೀಡಿದ ತಿಲಕ್, ‘ಅವರು ಅನೇಕ ವಿಷಯಗಳನ್ನು ಇಟ್ಟುಕೊಂಡು ನನ್ನನ್ನು ಗುರಿಯಾಗಿಸಿಕೊಂಡು ಹೇಳುತ್ತಿದ್ದರು. ಆದರೆ ನಾನು ಮಾತ್ರ ನನ್ನ ಬ್ಯಾಟ್ ಮೂಲಕ ಪ್ರತಿಕ್ರಿಯೆ ಕೊಡಬೇಕೆಂದು ಬಯಸಿದ್ದೆ, ನನ್ನ ಆಟದ ಬಳಿಕ ಅವರು ನನ್ನ ಹತ್ತಿರವೂ ಸುಳಿಯಲಿಲ್ಲ‘ ಎಂದು ಸಹ ಆಟಗಾರ ಶಿವಂ ದುಬೆ ಅವರೊಂದಿಗಿನ ಚಿಟ್ ಚಾಟ್ನಲ್ಲಿ ಹೇಳಿದರು.
ಸಂಕಷ್ಟದ ಸಂದರ್ಭದಲ್ಲಿ ದುಬೆ ಮತ್ತು ತಿಲಕ್ ನಡುವಿನ 60 ರನ್ಗಳ ಜೊತೆಯಾಟವು ಭಾರತ ಏಷ್ಯಾ ಕಪ್ ಗೆಲ್ಲಲು ನೆರವಾಯಿತು. ಅದರಲ್ಲೂ ವಿಶೇಷವಾಗಿ ತಿಲಕ್ ವರ್ಮಾ ಅವರು 53 ಎಸೆತಗಳಲ್ಲಿ 69 ರನ್ ಗಳಿಸಿ ಅಜೇಯರಾಗಿ ಉಳಿದು ಪಂದ್ಯ ಗೆಲ್ಲಿಸಿದರು.
‘ಸ್ಟ್ಯಾಂಡ್ನಲ್ಲಿ ವಂದೇ ಮಾತರಂ ಘೋಷಣೆ ಕೇಳಿದ್ದು, ನನ್ನ ಮೈ ನವಿರೇಳುವಂತೆ ಮಾಡಿತು. ನಾನು ಕೂಡ ಭಾರತ್ ಮಾತಾ ಕಿ ಜೈ ಎಂದು ಹೇಳಲು ಬಯಸುತ್ತೇನೆ‘ ಎಂದು ತಿಲಕ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.