
ವೈಭವ್ ಸೂರ್ಯವಂಶಿ, ಆಯುಷ್ ಮ್ಹಾತ್ರೆ
ನವದೆಹಲಿ: ಮುಂಬರುವ 19 ವರ್ಷದೊಳಗಿನವರ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗಾಗಿ 15 ಸದಸ್ಯರ ಭಾರತ ತಂಡವನ್ನು ಘೋಷಣೆ ಮಾಡಲಾಗಿದೆ. ತಂಡವನ್ನು ಚೆನ್ನೈ ಸೂಪರ್ ಕಿಂಗ್ಸ್ ಆರಂಭಿಕ ಬ್ಯಾಟರ್ ಆಯುಷ್ ಮ್ಹಾತ್ರೆ ಮುನ್ನಡೆಸಲಿದ್ದು, ವೈಭವ್ ಸೂರ್ಯವಂಶಿ ಸ್ಥಾನ ಪಡೆದಿದ್ದಾರೆ.
19 ವರ್ಷದೊಳಗಿನ ಏಷ್ಯಾಕಪ್ ಟೂರ್ನಿ ಡಿಸೆಂಬರ್ 12ರಿಂದ 21ರವರೆಗೆ ಏಕದಿನ ಮಾದರಿಯಲ್ಲಿ ನಡೆಯಲಿದೆ. ಇದಕ್ಕೂ ಮುನ್ನ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ವಿವಿಧ ಮಾದರಿಯ ಟೂರ್ನಿಯನ್ನು ಮ್ಹಾತ್ರೆ ತಂಡವನ್ನು ಮುನ್ನಡೆಸಿದ್ದರು.
ಮುಂದಿನ ವರ್ಷ ಜನವರಿ–ಫೆಬ್ರವರಿ ತಿಂಗಳಿನಲ್ಲಿ ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ನಡೆಯಲಿರುವ 19 ವರ್ಷದೊಳಗಿನವರ ವಿಶ್ವಕಪ್ ಟೂರ್ನಿಗೆ ತಂಡವನ್ನು ಸಿದ್ಧಪಡಿಸುವ ದೃಷ್ಟಿಯಿಂದ ಏಷ್ಯಾಕಪ್ ಅತ್ಯಂತ ಪ್ರಮುಖವಾಗಿರಲಿದೆ. ಆ ನಿಟ್ಟಿನಲ್ಲಿ ಯೋಜನೆ ರೂಪಿಸಿರುವ ಆಯ್ಕೆದಾರರು ವಿಹಾನ್ ಮಲ್ಹೋತ್ರಾ ಅವರಿಗೆ ಉಪನಾಯಕನ ಜವಾಬ್ದಾರಿ ನೀಡಿದ್ದಾರೆ.
14 ವರ್ಷದ ವೈಭವ್ ಸೂರ್ಯವಂಶಿ ಇತ್ತೀಚೆಗೆ ನಡೆದ ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್ನಲ್ಲಿ ಯುಎಇ ವಿರುದ್ಧದ ಪಂದ್ಯದಲ್ಲಿ 32 ಎಸೆತಗಳಲ್ಲಿ ಶತಕ ಬಾರಿಸಿ ದಾಖಲೆ ಬರೆದಿದ್ದರು.
19 ವರ್ಷದೊಳಗಿನ ಏಷ್ಯಾಕಪ್ನಲ್ಲಿ ಭಾರತ ತಂಡ ಇನ್ನೂ ಯಾರೆಂದು ಅಂತಿಮಗೊಳ್ಳದ ಎದುರಾಳಿ ವಿರುದ್ಧ ಡಿಸೆಂಬರ್ 12ರಂದು ಅಭಿಯಾನ ಆರಂಭಿಸಲಿದೆ. ಡಿಸೆಂಬರ್ 14ರಂದು ಪಾಕಿಸ್ತಾನದ ವಿರುದ್ಧ ಆಡಲಿದೆ. ಡಿಸೆಂಬರ್ 16ರಂದು ಅರ್ಹತಾ ಸುತ್ತಿನಿಂದ ಬಂದ ತಂಡವನ್ನು ಎದುರಿಸಲಿದೆ.
ಡಿಸೆಂಬರ್ 19ರಂದು ಸೆಮಿಫೈನಲ್ ಪಂದ್ಯಗಳು ನಡೆಯಲಿದ್ದು, ಡಿಸೆಂಬರ್ 21ರಂದು ಫೈನಲ್ ಪಂದ್ಯ ನಡೆಯಲಿದೆ.
ಭಾರತ ಅಂಡರ್–19 ತಂಡ: ಆಯುಷ್ ಮ್ಹಾತ್ರೆ (ನಾಯಕ), ವೈಭವ್ ಸೂರ್ಯವಂಶಿ, ವಿಹಾನ್ ಮಲ್ಹೋತ್ರಾ (ಉಪನಾಯಕ), ವೇದಾಂತ್ ತ್ರಿವೇದಿ, ಅಭಿಜ್ಞಾನ್ ಕುಂದು (ವಿಕೆಟ್ ಕೀಪರ್), ಹರ್ವಂಶ್ ಸಿಂಗ್ (ವಿಕೆಟ್ ಕೀಪರ್), ಯುವರಾಜ್ ಗೋಹಿಲ್, ಕನಿಷ್ಕ್ ಚೌಹಾಣ್, ಖಿಲನ್ ಎ. ಪಟೇಲ್, ನಮನ್ ಪುಷ್ಪಕ್, ಡಿ. ದೀಪೇಶ್, ಹೆನಿಲ್ ಪಟೇಲ್, ಕಿಶನ್ ಕುಮಾರ್ ಸಿಂಗ್, ಉಧವ್ ಮೋಹನ್, ಆ್ಯರನ್ ಜಾರ್ಜ್ ತಂಡದಲ್ಲಿದ್ದಾರೆ.
ಸ್ಟ್ಯಾಂಡ್ ಬೈ ಆಟಗಾರರು: ರಾಹುಲ್ ಕುಮಾರ್, ಜೆ. ಹೇಮಚುದೇಶನ್, ಬಿ.ಕೆ. ಕಿಶೋರ್, ಆದಿತ್ಯ ರಾವತ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.