ಐಸಿಸಿಯ ಎಲೈಟ್ ಪ್ಯಾನೆಲ್ಗೆ ಇತ್ತೀಚೆಗಷ್ಟೇ ಪ್ರವೇಶ ಪಡೆದಿರುವ ಅಂಪೈರ್ ನಿತಿನ್ ಮೆನನ್ ಅವರ ಒಂದು ತೀರ್ಪು ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ ಪಂದ್ಯದ ಫಲಿತಾಂಶದ ಮೇಲೆ ಪರಿಣಾಮ ಬೀರಿತು. ಅಂತಿಮವಾಗಿ ಸೂಪರ್ ಓವರ್ನಲ್ಲೇ ಜಯದ ತೀರ್ಮಾನ ಮಾಡಬೇಕಾದ ಸನ್ನಿವೇಶ ಸೃಷ್ಟಿ ಮಾಡಿತು.
ಉಭಯ ತಂಡಗಳು 8 ವಿಕೆಟ್ ನಷ್ಟದೊಂದಿಗೆ 157 ರನ್ಗಳಿಸಿ ಪಂದ್ಯವನ್ನು ಸಮಗೊಳಿಸಿದವು. ಸೂಪರ್ ಓವರ್ನಲ್ಲಿ ಪಂದ್ಯದ ಫಲಿತಾಂಶ ನಿರ್ಧಾರ ಮಾಡಬೇಕಾದ ಸಂದರ್ಭ ಬಂದಾಗ ಕಗಿಸೊ ರಬಾಡಾ ಅವರ ಅದ್ಭುತ ಬೌಲಿಂಗ್ನ ನೆರವಿನೊಂದಿಗೆ ದೆಹಲಿ ಕ್ಯಾಪಿಟಲ್ಸ್ ಜಯಭೇರಿ ಬಾರಿಸಿತು.
ಪಂದ್ಯ ಸೂಪರ್ ಓವರ್ ತಲುಪುವುದಕ್ಕೂ ಮೊದಲು ಕ್ರಿಸ್ ಜೋರ್ಡಾನ್ 19ನೇ ಓವರ್ನಲ್ಲಿ ರಬಾಡಾ ಬೌಲಿಂಗ್ ವೇಳೆ ಎರಡು ರನ್ ಗಳಿಸಲು ಯತ್ನಿಸಿದರು. ಆದರೆ, ಸ್ಕ್ವೇರ್ ಲೆಗ್ ಅಂಪೈರ್ ಮೆನನ್ ಜೋರ್ಡಾನ್ ಓಟವನ್ನು ‘ಶಾರ್ಟ್ ರನ್’ ಎಂದು ಘೋಷಿಸಿದರು.
ಆದರೆ, ಜೋರ್ಡಾನ್ ಮೊದಲ ಓಟವನ್ನು ಸರಿಯಾಗಿಯೇ ಪೂರ್ಣಗೊಳಿಸಿದ್ದರು. ಬ್ಯಾಟ್ ಕ್ರೀಸ್ನಲ್ಲಿತ್ತು ಎಂಬುದು ಟಿವಿ ದೃಶ್ಯಾವಳಿಗಳಲ್ಲೂ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಆದರೆ, ಕಿಂಗ್ಸ್ ಇಲೆವೆನ್ ಪಂದ್ಯದ ದುರದೃಷ್ಟವೋ ಏನೋ ಜೋರ್ಡಾನ್ ಅವರ ಓಟವನ್ನು ‘ಶಾರ್ಟ್ ರನ್’ ಎಂದು ಅಂಪೈರ್ ಘೋಷಿಸಿದ್ದರು.
ಆ ರನ್ ಏನಾದರೂ ಕಿಂಗ್ಸ್ ಇಲೆವೆನ್ ಪಂಜಾಬ್ಗೆ ಲಭಿಸಿದ್ದಿದ್ದರೆ, ತಂಡ ಗೆಲುವು ಸಾಧಿಸಿರುತ್ತಿತ್ತು. ಇದೇ ರೀತಿಯ ಅಭಿಪ್ರಾಯ ಹಿರಿಯ ಆಟಗಾರರಿಂದಲೂ ವ್ಯಕ್ತವಾಗಿದೆ.
ಅಂಪೈರ್ ಮ್ಯಾನ್ ಆಫ್ ದಿ ಮ್ಯಾಚ್!
ಈ ಕುರಿತು ಟ್ವೀಟ್ ಮಾಡಿರುವ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್, ‘ಮ್ಯಾನ್ ಆಫ್ ದಿ ಮ್ಯಾಚ್ ಆಯ್ಕೆಯನ್ನು ನಾನು ಒಪ್ಪುವುದಿಲ್ಲ. ಶಾರ್ಟ್ ರನ್ ನೀಡಿದ ಅಂಪೈರ್ ನಿನ್ನೆಯ ಮ್ಯಾನ್ ಆಫ್ ದಿ ಮ್ಯಾಚ್. ಅದು ಶಾರ್ಟ್ ರನ್ ಆಗಿರಲಿಲ್ಲ,’ ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.