ಉತ್ತರ ಪ್ರದೇಶ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯಕ್ಕೂ ಮುನ್ನ ನಾಣ್ಯ (ಟಾಸ್) ಚಿಮ್ಮಿಸಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ
ಕೃಪೆ: ಪಿಟಿಐ
ಲಖನೌ: ಉತ್ತರ ಪ್ರದೇಶ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯ ಫೈನಲ್ನಲ್ಲಿ ಮೀರತ್ ಮಾವೆರಿಕ್ಸ್ ವಿರುದ್ಧ 8 ವಿಕೆಟ್ಗಳ ಜಯ ಸಾಧಿಸಿದ ಕಾಶಿ ರುದ್ರಾಸ್ ತಂಡ ಎರಡನೇ ಸಲ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
ಲಖನೌನಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯಕ್ಕೆ ನಾಣ್ಯ ಚಿಮ್ಮಿಸುವ (ಟಾಸ್) ಮೂಲಕ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಚಾಲನೆ ನೀಡಿದರು.
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಮೀರತ್, ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ಗೆ 144 ರನ್ ಗಳಿಸಿತು. ಎದುರಾಳಿ ತಂಡದ ಶಿಸ್ತಿನ ದಾಳಿ ಎದುರು ಮಧ್ಯಮ ಕ್ರಮಾಂಕದ ಪ್ರಶಾಂತ್ ಚೌಧರಿ (37 ರನ್) ಹೊರತುಪಡಿಸಿ ಉಳಿದವರಿಂದ ಉತ್ತಮ ಪ್ರದರ್ಶನ ಮೂಡಿಬರಲಿಲ್ಲ.
ಕಾಶಿ ಪರ ಶಿವಂ ಮಾವಿ, ಕಾರ್ತಿಕ್ ಯಾದವ್ ಮತ್ತು ಸುನಿಲ್ ಕುಮಾರ್ ತಲಾ ಎರಡು ವಿಕೆಟ್ ಪಡೆದದು ಮಿಂಚಿದರು. ಹೀಗಾಗಿ, ಮೀರತ್ ಬಳಗದ ಇನಿಂಗ್ಸ್ ಸಾಧಾರಣ ಮೊತ್ತಕ್ಕೆ ಮುಗಿಯಿತು.
ಬಳಿಕ ಬ್ಯಾಟಿಂಗ್ ಮಾಡಿದ 'ಕಾಶಿ'ಗೆ ಈ ಗುರಿ ಸವಾಲೇ ಆಗಲಿಲ್ಲ. ಆರಂಭಿಕ ಬ್ಯಾಟರ್ಗಳಾದ ಅಭಿಷೇಕ್ ಗೋಸ್ವಾಮಿ (45 ಎಸೆತ, ಅಜೇಯ 61 ರನ್) ಮತ್ತು ನಾಯಕ ಕರಣ್ ಶರ್ಮಾ (31 ಎಸೆತ, 65 ರನ್) ಲೀಲಾಜಾಲವಾಗಿ ಬ್ಯಾಟ್ ಬೀಸಿದರು. ಮೊದಲ ವಿಕೆಟ್ಗೆ 9.4 ಓವರ್ಗಳಲ್ಲಿ 108 ರನ್ ಕೂಡಿಸುವ ಮೂಲಕ ಭದ್ರ ಅಡಿಪಾಯ ಹಾಕಿಕೊಟ್ಟರು.
ಹೀಗಾಗಿ, ಕೇವಲ 15.2 ಓವರ್ಗಳಲ್ಲೇ 148 ರನ್ ಬಾರಿಸಿದ ಕರಣ್ ಪಡೆ, ಸುಲಭ ಜಯ ಸಾಧಿಸಿತು. ಇದರೊಂದಿಗೆ, ಮತ್ತೊಮ್ಮೆ ಚಾಂಪಿಯನ್ ಎನಿಸಿಕೊಂಡಿತ್ತು.
ಲೀಗ್ನಲ್ಲಿ ಕಾಶಿ, ಮೀರತ್ ಪ್ರಾಬಲ್ಯ
ಉತ್ತರ ಪ್ರದೇಶ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಇದುವರೆಗೆ ಕಾಶಿ ಮತ್ತು ಮೀರತ್ ಪ್ರಾಬಲ್ಯ ಸಾಧಿಸಿವೆ.
ಮೀರತ್ ತಂಡ ಈವರೆಗೆ ನಡೆದಿರುವ ಮೂರೂ ಆವೃತ್ತಿಗಳಲ್ಲಿ ಅಂತಿಮ ಸುತ್ತಿಗೆ ಪ್ರವೇಶಿಸಿದೆ.
ಕಾಶಿ ಫೈನಲ್ ತಲುಪಿದ ಎರಡೂ ಸಲ (2023, 2025) ಪ್ರಶಸ್ತಿ ಗೆದ್ದುಕೊಂಡಿದೆ.
2024ರಲ್ಲಿ ಕಾನ್ಪುರ ಸೂಪರ್ಸ್ಟಾರ್ಸ್ ಮಣಿಸಿ ಮೀರತ್ ಟ್ರೋಫಿ ಜಯಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.