
ಬೆಂಗಳೂರು: ಮೂರನೇ ಕ್ರಮಾಂಕದ ಆಟಗಾರ ಟಿ.ಹರ್ಷ ಸಾಯಿ ಸಾತ್ವಿಕ್ (133) ಮತ್ತು ನಾಯಕ ಕೆ.ಭಾನು ಶ್ರೀಹರ್ಷ (174) ಅವರ ಅಮೋಘ ಶತಕಗಳ ನೆರವಿನಿಂದ ಆಂಧ್ರ ಪ್ರದೇಶದ ತಂಡ ವಿಜಯ್ ಮರ್ಚೆಂಟ್ ಟ್ರೋಫಿ (16 ವರ್ಷದೊಳಗಿನವರ) ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕ ತಂಡದ ಎದುರು ಹೋರಾಟ ತೋರಿತು.
ಆದರೆ ಛತ್ತೀಸಗಢದ ಭಿಲಾಯಿಯಲ್ಲಿ ‘ಡ್ರಾ’ ಆದ ಈ ಮೂರು ದಿನಗಳ ಪಂದ್ಯದಲ್ಲಿ ಕರ್ನಾಟಕ 64 ರನ್ಗಳ ಮೊದಲ ಇನಿಂಗ್ಸ್ ಮುನ್ನಡೆ ಪಡೆದು ಮೂರು ಪಾಯಿಂಟ್ಸ್ ಪಡೆಯಿತು. ಆಂಧ್ರ ಒಂದು ಪಾಯಿಂಟ್ ಗಳಿಸಿತು.
ಕರ್ನಾಟಕ ಮೊದಲ ಇನಿಂಗ್ಸ್ನಲ್ಲಿ 9 ವಿಕೆಟ್ಗೆ 473 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು. ಇದಕ್ಕೆ ಉತ್ತರವಾಗಿ ಬುಧವಾರ ಎರಡನೇ ದಿನದಾಟದ ಕೊನೆಗೆ 2 ವಿಕೆಟ್ಗೆ 189 ರನ್ ಗಳಿಸಿದ್ದ ಆಂಧ್ರ ಮೊದಲ ಇನಿಂಗ್ಸ್ನಲ್ಲಿ 409 ರನ್ ಗಳಿಸಿತು.
ಹರ್ಷ ಸಾಯಿ ಮತ್ತು ಭಾನು ಶ್ರೀಹರ್ಷ ಅವರು ಮೂರನೆ ವಿಕೆಟ್ಗೆ 273 ರನ್ ಸೇರಿಸಿದ್ದರಿಂದ ಕರ್ನಾಟಕದ ಗೆಲುವಿನಾಸೆ ಮೊದಲ ಅವಧಿಯಲ್ಲೇ ಕರಗಿತು. ಟಿ.ಹರ್ಷ ಸಾಯಿ 217 ಎಸೆತಗಳನ್ನೆದುರಿಸಿ ಒಂದು ಸಿಕ್ಸರ್, 11 ಬೌಂಡರಿ ಬಾರಿಸಿದರು. ಕೆ.ಭಾನು 223 ಎಸೆತಗಳನ್ನು ಆಡಿ 16 ಬೌಂಡರಿ, ಆರು ಸಿಕ್ಸರ್ಗಳನ್ನು ಹೊಡೆದರು.
ಕರ್ನಾಟಕದ ಕಡೆ ಲೆಗ್ ಬ್ರೇಕ್ ಬೌಲರ್ ಸಮರ್ಥ ಕುಲಕರ್ಣಿ ಮತ್ತು ಎಡಗೈ ಸ್ಪಿನ್ನರ್ ಸುವಿಕ್ ಗಿಲ್ ತಲಾ ಮೂರು ವಿಕೆಟ್ಗಳನ್ನು ಪಡೆದರು.
ಸಂಕ್ಷಿಪ್ತ ಸ್ಕೋರು
ಮೊದಲ ಇನಿಂಗ್ಸ್: ಕರ್ನಾಟಕ: 9 ವಿಕೆಟ್ಗೆ 473 ಡಿ
ಆಂಧ್ರ: 132.3 ಓವರುಗಳಲ್ಲಿ 409 (ಟಿ.ಹರ್ಷ ಸಾಯಿ ಸಾತ್ವಿಕ್ 133, ಕೆ.ಭಾನು ಶ್ರೀಹರ್ಷ 174, ರಿಶಿಕ ಕುಮಾರ್ ರೆಡ್ಡಿ ಔಟಾಗದೇ 26; ಸಮರ್ಥ ಕುಲಕರ್ಣಿ 64ಕ್ಕೆ3, ಸುವಿಕ್ ಗಿಲ್ 91ಕ್ಕೆ3).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.