ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಮಾಜಿ ಸ್ಫೋಟಕ ಬ್ಯಾಟ್ಸ್ಮನ್ ವೀರೇಂದ್ರ ಸೆಹ್ವಾಗ್ ಅವರು ದೇಶದ ಕ್ರಿಕೆಟ್ ಪಾಲಿಗೆ ದುರದೃಷ್ಟ ತರುವ ವ್ಯಕ್ತಿಗಳಾಗಿದ್ದು, ಈ ಇಬ್ಬರೂ ಐಸಿಸಿ ಟೂರ್ನಿಗಳಲ್ಲಿ ಟೀಂ ಇಂಡಿಯಾಕ್ಕೆ ಶುಭ ಹಾರೈಸಬಾರದು ಎಂಬ ಅಭಿಯಾನವೊಂದು ಆರಂಭವಾಗಿದೆ.
ಅಭಯ್ ಟಾಕೂರ್ ಎನ್ನುವವರು Change.org_indiaಹೆಸರಿನ ತಾಣದಲ್ಲಿ ಸಹಿ ಅಭಿಯಾನ ಆರಂಭಿಸಿದ್ದಾರೆ. ಆ ಮೂಲಕ, ಒಂದು ವೇಳೆಕೊಹ್ಲಿ ಮತ್ತು ಸೆಹ್ವಾಗ್ ಸಾಮಾಜಿಕ ತಾಣಗಳಲ್ಲಿ ಅಭಿನಂದನೆಯ ಸಂದೇಶಗಳನ್ನು ಹರಿಬಿಟ್ಟರೆ, ಅವರನ್ನು ನಿರ್ಬಂಧಿಸುವಂತೆ ಮನವಿ ಮಾಡಿದ್ದಾರೆ.
ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡ ಬಳಿಕಈ ಅಭಿಯಾನ ಆರಂಭಿಸಲಾಗಿದ್ದು, ಒಂದು ಸಾವಿರ ಜನರಿಂದ ಸಹಿ ಸಂಗ್ರಹಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಈಗಾಗಲೇ 770 ಜನರು ಸಹಿ ಮಾಡಿದ್ದಾರೆ.
ಟೂರ್ನಿಯುದ್ದಕ್ಕೂ ಅಜೇಯ ಜಯದ ಓಟ ಮುಂದುವರಿಸಿದ್ದ ಭಾರತ, ಫೈನಲ್ನಲ್ಲಿ ಆಸಿಸ್ ವಿರುದ್ಧ 85 ರನ್ಗಳ ಅಂತರದಿಂದ ಮುಗ್ಗರಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಆಸಿಸ್, 185 ರನ್ ಪೇರಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಟೀಂ ಇಂಡಿಯಾ ಕೇವಲ 99 ರನ್ಗಳಿಗೆ ಆಲೌಟ್ ಆಗಿತ್ತು.
ಲೀಗ್ ಹಂತದಲ್ಲಿ ಆಸ್ಟ್ರೇಲಿಯಾ ಎದುರು ಭಾರತ 17 ರನ್ ಅಂತರದಿಂದ ಗೆಲುವು ಸಾಧಿಸಿತ್ತು ಎಂಬುದು ವಿಶೇಷ.
ಅಭಿಯಾನ ಸಂಬಂಧ Change.org_india ತಾಣದಲ್ಲಿ, ‘ ವಿರಾಟ್ ಕೊಹ್ಲಿ ಮತ್ತು ಸೆಹ್ವಾಗ್, ಐಸಿಸಿ ಟೂರ್ನಿಗಳ ಸಂದರ್ಭದಲ್ಲಿ, ಅದರಲ್ಲೂ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳ ವೇಳೆ ಭಾರತ ತಂಡಕ್ಕೆ ಶುಭಕೋರುವುದನ್ನು ನಿಲ್ಲಿಸಬೇಕು. ಈ ಇಬ್ಬರೂ ನಮ್ಮ ಗೆಲುವುಗಳ ಪಾಲಿಗೆ ದುರದೃಷ್ಟದ ವ್ಯಕ್ತಿಗಳು.ಒಂದು ವೇಳೆ ಅವರು ಶುಭಕೋರುವುದನ್ನು ನಿಲ್ಲಿಸದಿದ್ದರೆ, ಅವರ ಖಾತೆಗಳನ್ನು ನಿರ್ಬಂಧಿಸಿ’ಎಂದು ಪ್ರಕಟಿಸಲಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಶಕ್ತಿ ದಯಾಳನ್ ಎನ್ನುವವರು, ‘ಈ ವ್ಯಕ್ತಿ (ಕೊಹ್ಲಿ) ಸಾಕಷ್ಟು ನಕಾರಾತ್ಮಕತೆಯನ್ನು ಹೊಂದಿದ್ದಾರೆ’ ಎಂದು ಕಾಮೆಂಟ್ ಮಾಡಿದ್ದಾರೆ.
ಆಸ್ಟ್ರೇಲಿಯಾದಲ್ಲಿ ನಡೆದ ಮಹಿಳಾ ವಿಶ್ವಕಪ್ನಲ್ಲಿಭಾರತ ಹಾಗೂ ಇಂಗ್ಲೆಂಡ್ ತಂಡಗಳು ಸೆಣಸಬೇಕಿದ್ದ ಸೆಮಿಫೈನಲ್ ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು. ಆದರೆ, ಗುಂಪು ಹಂತದಲ್ಲಿ ಹೆಚ್ಚು ಅಂಕಗಳನ್ನು ಹೊಂದಿದ್ದರಿಂದಾಗಿಭಾರತ ಫೈನಲ್ಗೆ ಪ್ರವೇಶ ಪಡೆದಿತ್ತು. ಅದಾದ ನಂತರ ಕೊಹ್ಲಿ ಮತ್ತು ಸೆಹ್ವಾಗ್ ಮಹಿಳಾ ತಂಡಕ್ಕೆ ಟ್ವಿಟರ್ನಲ್ಲಿ ಅಭಿನಂದನೆ ಸಲ್ಲಿಸಿ ಶುಭಕೋರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.