ಮುಂಬೈ: ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳುವ ಭಾರತ ಕ್ರಿಕೆಟ್ ತಂಡದ ತಂಡದ ಆಯ್ಕೆ ಈ ವಾರದಲ್ಲಿ ನಡೆಯಲಿದ್ದು ವಿರಾಟ್ ಕೊಹ್ಲಿ ಅವರ ಏಕದಿನ ತಂಡದ ನಾಯಕತ್ವದ ಅಳಿವು ಮತ್ತು ಉಳಿವು ನಿರ್ಧಾರವಾಗಲಿದೆ.
ಮುಂದಿನ ವರ್ಷ ಟ್ವೆಂಟಿ20 ವಿಶ್ವಕಪ್ ಟೂರ್ನಿ ನಡೆಯಲಿರುವುದರಿಂದ ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿ ಚುಟುಕು ಕ್ರಿಕೆಟ್ ಮೇಲೆ ಹೆಚ್ಚು ಗಮನ ಹರಿಸಿದೆ. ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ಪ್ರವಾಸದ ಸಂದರ್ಭದಲ್ಲಿ ಆಡುವ ಒಟ್ಟು ಆರು ಪಂದ್ಯ ಸೇರಿದಂತೆ ಮುಂದಿನ ಏಳು ತಿಂಗಳಲ್ಲಿ ಒಂಬತ್ತು ಏಕದಿನ ಪಂದ್ಯಗಳನ್ನು ಮಾತ್ರ ಭಾರತ ಆಡಲಿದೆ.
ದಕ್ಷಿಣ ಆಫ್ರಿಕಾದಲ್ಲಿ ಏಕೈಕ ಬಯೊಬಬಲ್ ಇರುವುದರಿಂದ 20ರಿಂದ 23 ಮಂದಿಯ ತಂಡವನ್ನು ಕಳುಹಿಸುವ ಸಾಧ್ಯತೆ ಇದೆ. ಆದ್ದರಿಂದ ಟ್ವೆಂಟಿ20 ತಂಡದ ನಾಯಕನಿಗೇ ಏಕದಿನ ತಂಡವನ್ನೂ ಮುನ್ನಡೆಸುವ ಹೊಣೆ ನೀಡುವ ಚಿಂತನೆ ಇದೆ. ಹೀಗಾಗಿ ಕೊಹ್ಲಿ ಅವರನ್ನು ನಾಯಕತ್ವದಿಂದ ಬಿಡಬೇಕೇ ಅಥವಾ ಉಳಿಸಿಕೊಳ್ಳಬೇಕೇ ಎಂಬುದರ ಬಗ್ಗೆ ಚರ್ಚೆಗಳು ನಡೆದಿವೆ.
ಭಾರತ–ನ್ಯೂಜಿಲೆಂಡ್ ಅಭ್ಯಾಸ ರದ್ದು
ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಎರಡನೇ ಮತ್ತು ಅಂತಿಮ ಟೆಸ್ಟ್ ಪಂದ್ಯ ಇದೇ ಮೂರರಿಂದ ಮುಂಬೈಯಲ್ಲಿ ನಡೆಯಲಿದೆ. ದಿನವಿಡೀ ಮಳೆ ಸುರಿದ ಕಾರಣ ಬುಧವಾರ ಎರಡೂ ತಂಡಗಳು ಅಭ್ಯಾಸವನ್ನು ರದ್ದು ಮಾಡಿದ್ದವು. ಪಂದ್ಯಕ್ಕೂ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ವಿಶ್ರಾಂತಿಯಲ್ಲಿದ್ದ ವಿರಾಟ್ ಕೊಹ್ಲಿ ತಂಡಕ್ಕೆ ಮರಳುವುದರಿಂದ ಮಯಂಕ್ ಅಗರವಾಲ್ ಅವರ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆ ಇದೆ ಎನ್ನಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.