ADVERTISEMENT

ಮಳೆಯಿಂದ ನಿಂತ ಪಂದ್ಯ; ಶುರುವಾದರೆ 20 ಓವರ್‌ಗಳಲ್ಲಿ ಭಾರತ‌ಕ್ಕೆ148 ರನ್‌ ಗುರಿ? 

ವಿಶ್ವಕಪ್‌ ಕ್ರಿಕೆಟ್‌: ಪ್ರತಿ 4 ನಿಮಿಷಕ್ಕೆ ಓವರ್ ಕಡಿತ

​ಪ್ರಜಾವಾಣಿ ವಾರ್ತೆ
Published 9 ಜುಲೈ 2019, 16:18 IST
Last Updated 9 ಜುಲೈ 2019, 16:18 IST
   

ಮ್ಯಾನ್‌ಚೆಸ್ಟರ್‌: ಭಾರತ–ನ್ಯೂಜಿಲೆಂಡ್‌ ಪಂದ್ಯಕ್ಕೆ ಮಳೆ ಅಡ್ಡಿಯಾಗಿದ್ದು, ಪಂದ್ಯ ಮುಂದುವರಿಸುವ ಬಗ್ಗೆ ಅಂಪೈರ್‌ ತೀರ್ಮಾನ ಅಂತಿಮವಾಗಿರಲಿದೆ. ಮಳೆ ನಿಂತರೆ ಓವರ್‌ ಕಡಿತಗೊಳಿಸಿ ಪಂದ್ಯ ಮುಂದುವರಿಯಲಿದೆ, ಇಲ್ಲವಾದರೆ ನಾಳೆಗೆ ಮುಂದೂಡಿಕೆಯಾಗುತ್ತದೆ.

ಕ್ಷಣಕ್ಷಣದ ಸ್ಕೋರ್‌:https://bit.ly/2Jp8izr

ನ್ಯೂಜಿಲೆಂಡ್‌ 46.1 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 211 ರನ್‌ ಕಲೆ ಹಾಕಿದೆ. ಮಳೆ ಪ್ರಾರಂಭವಾಗಿ ಈಗಾಗಲೇ 120 ನಿಮಿಷ ಕಳೆದಿರುವುದರಿಂದ ಪ್ರತಿ 4 ನಿಮಿಷಗಳಿಗೆ ಒಂದು ಓವರ್‌ ಕಡಿತಗೊಳಿಸುವ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ. ನಿಯಮಗಳ ಪ್ರಕಾರ, ಮಳೆ ಬಂದು ಪಂದ್ಯ ರದ್ದಾದರೆಗರಿಷ್ಠ 2 ಗಂಟೆಗಳ ಕಾಯುವಿಕೆಅವಧಿ ಇದೆ.ಮಳೆ ಪ್ರಮಾಣ ಕಡಿಮೆಯಾದರೆ, ಭಾರತಕ್ಕೆ ಕನಿಷ್ಠ 20 ಓವರ್‌ಗಳ ಬ್ಯಾಟಿಂಗ್‌ ಅವಕಾಶ ಸಿಗಲಿದೆ. ಗಳಿಸಬೇಕಾದ ರನ್‌ ಗುರಿ 148 ಆಗಿರಲಿದೆ.

ADVERTISEMENT

ಅಂಪೈರ್‌ಗಳು ಇಂದೇ ಪಂದ್ಯ ಪೂರ್ಣಗೊಳಿಸುವ ಎಲ್ಲ ಪ್ರಯತ್ನ ನಡೆಸಲಿದ್ದು, ಭಾರತಕ್ಕೆ 148 ರನ್‌ ಗುರಿ ನೀಡುವುದು ಖಚಿತ. ಮಳೆಯ ಕಾರಣದಿಂದಾಗಿ ಮೈದಾನದಲ್ಲಿ ತೇವಾಂಶ ಹೆಚ್ಚಿದೆ. ಇಂಥ ಸ್ಥಿತಿಯಲ್ಲಿ ರನ್‌ ಹೊಳೆ ಹರಿಸುವುದು ಟೀಂ ಇಂಡಿಯಾ ಪಾಲಿಗೆ ಸವಾಲಾಗಬಹುದಾಗಿದೆ.

ಇಂದು(ಜು.9) ಪಂದ್ಯ ಮುಂದುವರಿಸುವುದು ಅಸಾಧ್ಯವಾದರೆ, ಕಾಯ್ದಿರಿಸಿದ ದಿನವಾದ ನಾಳೆ(ಜು.10) ಪಂದ್ಯ ಮುಂದುವರಿಸಲಿದೆ. ನಾಳಿನ ಪಂದ್ಯ ಮೊದಲಿನಿಂದ ಆರಂಭಗೊಳ್ಳುವುದಿಲ್ಲ. ಇಂದಿನ ಪಂದ್ಯದ ಮುಂದುವರಿದ ಭಾಗ ನಾಳೆ ನಡೆಯಲಿದೆ. ಅಂದರೆ, ನ್ಯೂಜಿಲೆಂಡ್‌ 46ನೇ ಓವರ್‌ನಿಂದ ಆಟ ಮುಂದುವರಿಸುತ್ತದೆ. ಪಂದ್ಯದ ರನ್‌ ಗಳಿಕೆಯಲ್ಲಿ ಸಮಬಲ ಸಾಧಿಸಿದರೆ(ಟೈ), ಸೂಪರ್‌ ಓವರ್‌ ನಿರ್ಣಾಯಕ ಪಾತ್ರವಹಿಸಲಿದೆ.

ಅಕಸ್ಮಾತ್‌ ನಾಳೆಯೂ ಪಂದ್ಯದ ಫಲಿತಾಂಶ ಸಾಧ್ಯವಾಗದಿದ್ದರೆ, ಟೂರ್ನಿಯ ರೌಂಡ್‌ರಾಬಿನ್‌ ಹಂತದಲ್ಲಿ ಗಳಿಸಿರುವ ಪಾಯಿಂಟ್‌ ಆಧಾರದ ಮೇಲೆ ಭಾರತ ಫೈನಲ್‌ ಪ್ರವೇಶಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.