ಹೆಡಿಂಗ್ಲೆ, ಲೀಡ್ಸ್: ಎರಡು ತಿಂಗಳುಗಳ ಹಿಂದಿನ ಮಾತು. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಫೈನಲ್ನಲ್ಲಿ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಜಯಿಸಲು ಶ್ರೀಲಂಕಾದ ಲಸಿತ್ ಮಾಲಿಂಗ ಹಾಕಿದ್ದ ಕೊನೆಯ ಓವರ್ ಕಾರಣವಾಗಿತ್ತು.
ಶನಿವಾರ ಇವರಿಬ್ಬರೂ ಇಲ್ಲಿ ಮುಖಾಮುಖಿಯಾಗಲಿದ್ದಾರೆ. ಲಸಿತ್ ಮಾಲಿಂಗ ಅವರ ಯಾರ್ಕರ್ಗಳನ್ನು ಬೌಂಡರಿಗೆರೆಯಾಚೆ ಕಳಿಸಲು ರೋಹಿತ್ ಸಿದ್ಧವಾಗಿದ್ದಾರೆ. ಎರಡೂ ತಂಡಗಳಿಗೆ ಈ ವಿಶ್ವಕಪ್ ಟೂರ್ನಿಯ ರೌಂಡ್ ರಾಬಿನ್ ಲೀಗ್ನ ಕೊನೆಯ ಪಂದ್ಯ ಇದಾಗಿದೆ. ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಈಗಾಗಲೇ ಸೆಮಿಫೈನಲ್ ಪ್ರವೇಶಿಸಿದೆ. ಈ ಪಂದ್ಯದಲ್ಲಿ ಗೆದ್ದು ಪಾಯಿಂಟ್ ಪಟ್ಟಿಯ ಅಗ್ರಸ್ಥಾನಕ್ಕೆ ಏರಲು ಹಾತೊರೆದಿದೆ.
ದಿಮುತ್ ಕರುಣಾರತ್ನೆ ನೇತೃತ್ವದ ಲಂಕಾ ಬಳಗವು ಟೂರ್ನಿಯಿಂದ ಈಗಾಗಲೇ ಹೊರಬಿದ್ದಿದೆ. ಆದ್ದರಿಂದ ಗೆದ್ದರೆ ಎರಡು ಪಾಯಿಂಟ್ಸ್ ಮತ್ತು ಭಾರತ ತಂಡವನ್ನು ಸೋಲಿಸಿದ ಸಮಾಧಾನಭಾವ ಲಭಿಸಲಿವೆ. ಆದರೆ, ಜಯದ ಲಯವನ್ನು ಮುಂದುವರಿಸಿ ಆತ್ಮವಿಶ್ವಾಸವನ್ನು ಕಾಪಾಡಿಕೊಳ್ಳುವತ್ತ ವಿರಾಟ್ ಬಳಗದ ಚಿತ್ತವಿದೆ. ಟೂರ್ನಿಯಲ್ಲಿ ನಾಲ್ಕು ಶತಕ ಹೊಡೆದು ದಾಖಲೆ ಮಾಡಿರುವ ರೋಹಿತ್, ಅದಕ್ಕೆ ಮತ್ತೊಂದು ಶತಕ ಸೇರಿಸಲು ಸಿದ್ಧರಾಗಿದ್ದಾರೆ. ಬಾಂಗ್ಲಾದೇಶ ತಂಡದ ವಿರುದ್ಧ 28 ರನ್ಗಳಿಂದ ಗೆದ್ದಿದ್ದ ಭಾರತ ತಂಡವು ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿತ್ತು. ಸೆಮಿಯಲ್ಲಿ ಆತಿಥೇಯ ಇಂಗ್ಲೆಂಡ್ ತಂಡವನ್ನು ಎದುರಿಸಲು ಬೇಕಾದ ತಾಲೀಮು ಮಾಡಲು ಕೂಡ ಭಾರತಕ್ಕೆ ಈ ಪಂದ್ಯವು ವೇದಿಕೆಯಾಗಲಿದೆ.
ಸತತ ಎಂಟು ಪಂದ್ಯಗಳಲ್ಲಿ ಆಡಿರುವ ಕೆಲವರಿಗೆ ವಿಶ್ರಾಂತಿ ನೀಡಿದರೂ ಅಚ್ಚರಿಯಿಲ್ಲ. ಹೋದ ಪಂದ್ಯದಲ್ಲಿ ಮೂವರು ವಿಕೆಟ್ಕೀಪರ್ಗಳನ್ನು ಕಣಕ್ಕಿಳಿಸಲಾಗಿತ್ತು. ಮಹೇಂದ್ರಸಿಂಗ್ ಧೋನಿ, ದಿನೇಶ್ ಕಾರ್ತಿಕ್ ಮತ್ತು ರಿಷಭ್ ಪಂತ್ ಆಡಿದ್ದರು. ಕೇದಾರ್ ಜಾಧವ್ ಮತ್ತು ಕುಲದೀಪ್ ಯಾದವ್ಗೆ ವಿಶ್ರಾಂತಿ ನೀಡಲಾಗಿತ್ತು. ರಿಷಭ್ ನಾಲ್ಕನೇ ಕ್ರಮಾಂಕದಲ್ಲಿ ಉತ್ತಮ ಆಟ ಆಡಿದ್ದರು. ಧೋನಿ ಕೂಡ ತಮ್ಮ ಹೊಣೆ ನಿಭಾಯಿಸಿದ್ದರು. ದಿನೇಶ್ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು.
ಆದ್ದರಿಂದ ಶ್ರೀಲಂಕಾ ಎದುರು ಎಡಗೈ ಆಲ್ರೌಂಡರ್ ರವೀಂದ್ರ ಜಡೇಜ ಅವರಿಗೆ ಸ್ಥಾನ ನೀಡುವ ನಿರೀಕ್ಷೆ ಇದೆ. ದಿನೇಶ್ ಕಾರ್ತಿಕ್ ಅಥವಾ ಧೋನಿಗೆ ವಿಶ್ರಾಂತಿ ಕೊಡಬಹುದು.
ಬೌಲಿಂಗ್ ವಿಭಾಗದಲ್ಲಿ ಹೆಚ್ಚಿನ ಬದಲಾವಣೆಗಳಾಗುವ ಸಾಧ್ಯತೆ ಕಡಿಮೆ ಇದೆ. ಬೂಮ್ರಾ, ಭುವನೇಶ್ವರ್ ಮತ್ತು ಶಮಿ ತಮ್ಮ ಪಾರುಪತ್ಯ ಮುಂದುವರಿಸುವ ಸಾಧ್ಯತೆ ಹೆಚ್ಚಿದೆ. ಆದರೆ ಲೆಗ್ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರು ಸ್ಥಾನ ಉಳಿಸಿಕೊಳ್ಳುವುದು ಖಚಿತವಿಲ್ಲ.
ಲಂಕಾ ತಂಡವು ಬ್ಯಾಟಿಂಗ್ನಲ್ಲಿ ನಾಯಕ ದಿಮುತ ಕರುಣಾರತ್ನೆ, ಕುಶಾಲ ಪೆರೆರಾ ಮತ್ತು ಫರ್ನಾಂಡೊ ಮೇಲೆ ಹೆಚ್ಚು ಅವಲಂಬಿತವಾಗಿದೆ. ಆದರೆ ಇವರು ಎಲ್ಲ ಪಂದ್ಯಗಳಲ್ಲಿಯೂ ಸ್ಥಿರವಾದ ಆಟವನ್ನು ಆಡುತ್ತಿಲ್ಲ. ಕಳೆದ ಪಂದ್ಯದಲ್ಲಿ ಲಂಕಾ ತಂಡವು ವೆಸ್ಟ್ ಇಂಡೀಸ್ ಎದುರು 338 ರನ್ಗಳ ಮೊತ್ತ ಗಳಿಸಿತ್ತು. ಗುರಿ ಬೆನ್ನಟ್ಟಿದ್ದ ವಿಂಡೀಸ್ ತಂಡವನ್ನು ಲಸಿತ್ ಮಾಲಿಂಗ ಕಟ್ಟಿಹಾಕಿದ್ದರು. ಅವರು ಮೂರು ವಿಕೆಟ್ಗಳನ್ನು ಪಡೆದಿದ್ದರು. ಆದರೆ ಉಳಿದ ಬೌಲರ್ಗಳು ಕೂಡ ಸ್ಥಿರವಾದ ಪ್ರದರ್ಶನ ತೋರುತ್ತಿಲ್ಲ. ಭಾರತದ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕಲು ಲಸಿತ್ ಒಬ್ಬರೇ ಹೆಚ್ಚು ಶ್ರಮವಹಿಸಬೇಕಾದ ಅಗತ್ಯವು ಮೇಲ್ನೋಟಕ್ಕೆ ಕಾಣುತ್ತಿದೆ.
ತಂಡಗಳು
ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಕೆ.ಎಲ್. ರಾಹುಲ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ಮಹೇಂದ್ರಸಿಂಗ್ ಧೋನಿ (ವಿಕೆಟ್ಕೀಪರ್), ದಿನೇಶ್ ಕಾರ್ತಿಕ್, ಯಜುವೇಂದ್ರ ಚಾಹಲ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬೂಮ್ರಾ, ಭುವನೇಶ್ವರ್ ಕುಮಾರ್, ಕುಲದೀಪ್ ಯಾದವ್, ಮಯಂಕ್ ಅಗರವಾಲ್, ರವೀಂದ್ರ ಜಡೇಜ, ಕೇದಾರ್ ಜಾಧವ್.
ಶ್ರೀಲಂಕಾ: ದಿಮುತ್ ಕರುಣಾರತ್ನೆ (ನಾಯಕ), ಕುಶಾಲ ಮೆಂಡಿಸ್, ಕುಶಾಲ ಪೆರೆರಾ, ಲಾಹಿರು ತಿರಿಮನ್ನೆ, ಏಂಜೆಲೊ ಮ್ಯಾಥ್ಯೂಸ್, ಲಸಿತ್ ಮಾಲಿಂಗ, ಜೀವನ್ ಮೆಂಡಿಸ್, ಧನಂಜಯ ಡಿಸಿಲ್ವಾ, ಕಸುನ ರಜಿತಾ, ಇಸುರು ಉಡಾನ, ಸುರಂಗಾ ಲಕ್ಮಲ್, ಮಿಲಿಂದ ಸಿರಿವರ್ಧನೆ, ಜೆಫ್ರಿ ವಾಂಡರ್ಸೆ, ತಿಸಾರ ಪೆರೆರಾ, ಅವಿಷ್ಕಾ ಫರ್ನಾಂಡೊ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.