ADVERTISEMENT

ತಂಡದಿಂದ ಕೈಬಿಟ್ಟಾಗ ‘ನಿಮ್ಮ ಕೆಲಸ ಮುಗಿದಿದೆ, ಹೊರಡಿ’ ಎಂದಂತಾಗಿತ್ತು: ಹರ್ಭಜನ್

ನಾನು, ಯುವಿ, ವೀರೂ, ಗೌತಿ 2015ರ ವಿಶ್ವಕಪ್‌ನಲ್ಲಿ ಆಡಬಹುದಿತ್ತು ಎಂದ ಮಾಜಿ ಕ್ರಿಕೆಟಿಗ

ಏಜೆನ್ಸೀಸ್
Published 19 ಡಿಸೆಂಬರ್ 2019, 5:23 IST
Last Updated 19 ಡಿಸೆಂಬರ್ 2019, 5:23 IST
   

ನವದೆಹಲಿ: ‘2015ರ ವಿಶ್ವಕಪ್‌ ತಂಡದಿಂದ ನಮ್ಮನ್ನು ಕೈಬಿಟ್ಟದ್ದು ಹೇಗಿತ್ತು ಎಂದರೆ, ‘ನಿಮ್ಮ ಕೆಲಸ ಇಲ್ಲಿಗೆ ಮುಗಿದಿದೆ ನೀವಿನ್ನು ಹೊರಡಬಹುದು. ನಾವು ಹೊಸ ತಂಡವನ್ನು ಕಟ್ಟುತ್ತೇವೆ. ಹೊಸ ತಂಡಕ್ಕೆ ನಿಮ್ಮಿಂದ ಏನಾಗಬೇಕು? ನೀವು ಬೇಕಿರುವುದು ತಂಡ ಗೆಲ್ಲದಿದ್ದಾಗ ಮಾತ್ರ. ನಾವೀಗ ವಿಶ್ವಕಪ್‌ ಗೆದ್ದಾಗಿದೆ’ ಎನ್ನುತ್ತಿದ್ದಾರೆ ಎನಿಸಿತ್ತು’ ಎಂದು ಮಾಜಿ ಕ್ರಿಕೆಟಿಗ ಹರ್ಭಜನ್‌ ಸಿಂಗ್‌ ಬೇಸರ ವ್ಯಕ್ತಪಡಿಸಿದ್ದಾರೆ.

ಹಿಂದಿಯ ಸುದ್ದಿ ವಾಹಿನಿಯೊಂದರ ಜೊತೆ ನಡೆಸಿದ ಮಾತುಕತೆ ವೇಳೆ ಹರ್ಭಜನ್‌,2007ರಲ್ಲಿ ಟಿ20 ಹಾಗೂ 2011 ಏಕದಿನ ವಿಶ್ವಕಪ್‌ ಗೆದ್ದ ಭಾರತ ತಂಡದ ಭಾಗವಾಗಿದ್ದ ಹಲವು ಆಟಗಾರರು, ನ್ಯೂಜಿಲೆಂಡ್‌–ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆದ 2015ರ ವಿಶ್ವಕಪ್‌ನಲ್ಲಿಯೂ ಆಡಬಹುದಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

‘2011ರ ವಿಶ್ವಕಪ್‌ನಲ್ಲಿ ಆಡಿದ ಹಲವು ಆಟಗಾರರು ಮುಂದಿನ ವಿಶ್ವಕಪ್‌ನಲ್ಲಿಯೂ ಆಟಬಹುದಿತ್ತು. ನಾನು, ವೀರೇಂದ್ರ ಸೆಹ್ವಾಗ್‌, ಯುವರಾಜ್‌ ಸಿಂಗ್‌, ಗೌತಮ್‌ ಗಂಭೀರ್‌ 2015ರ ವಿಶ್ವಕಪ್‌ನಲ್ಲಿಯೂ ಆಡಬಹುದಿತ್ತು. ಆದರೆ, ನಮ್ಮನ್ನು ಕೈಬಿಡಲಾಗಿತ್ತು. ನಮ್ಮನ್ನು ಕೈಬಿಟ್ಟಿದ್ದರ ಹಿಂದಿನ ಉದ್ದೇಶ ಏನಾಗಿತ್ತು ಎಂಬುದು ಗೊತ್ತಿಲ್ಲ’ ಎಂದು ಹೇಳಿದ್ದಾರೆ.

ADVERTISEMENT

2015ರ ವಿಶ್ವಕಪ್‌ ಸೆಮಿಫೈನಲ್‌ ಪಂದ್ಯದಲ್ಲಿ ಆತೀಥೇಯ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿದ್ದ ಭಾರತ ಟೂರ್ನಿಯಿಂದ ಹೊರಬಿದ್ದಿತ್ತು.

39 ವರ್ಷದ ಹರ್ಭಜನ್‌ ಭಾರತ ಪರ 236 ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 269 ವಿಕೆಟ್‌ ಕಬಳಿಸಿದ್ದಾರೆ. 103 ಟೆಸ್ಟ್‌ ಪಂದ್ಯಗಳ 190 ಇನಿಂಗ್ಸ್‌ಗಳಿಂದ 417 ವಿಕೆಟ್‌ ಗಳಿಸಿದ್ದಾರೆ. 28 ಟಿ20 ಪಂದ್ಯಗಳಲ್ಲಿ 25 ವಿಕೆಟ್‌ ಉರುಳಿಸಿದ್ದಾರೆ. ಕೆಲವೊಮ್ಮೆ ಬ್ಯಾಟಿಂಗ್‌ ಮೂಲಕವೂ ಮಿಂಚಿ ಕೆಲವು ಪಂದ್ಯಗಳನ್ನು ಗೆದ್ದುಕೊಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.