ನವದೆಹಲಿ: ಕಿಂಗ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ 23 ಸದಸ್ಯರ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಅನುಭವಿ ಸ್ಟ್ರೈಕರ್ ಸುನಿಲ್ ಚೆಟ್ರಿ ಅವರಿಗೆ ವಿಶ್ರಾಂತಿ ನೀಡಲಾಗಿದೆ.
ನಾಲ್ಕು ರಾಷ್ಟ್ರಗಳ ಟೂರ್ನಿ ಸೆ.7 ರಿಂದ 10ರ ವರೆಗೆ ಥಾಯ್ಲೆಂಡ್ನ ಚಿಯಾಂಗ್ ಮಾಯ್ ನಗರದಲ್ಲಿ ನಡೆಯಲಿದೆ. 49ನೇ ಆವೃತ್ತಿಯ ಟೂರ್ನಿಗೆ ಭಾರತ ತಂಡವನ್ನು ಕೋಚ್ ಇಗೋರ್ ಸ್ಟಿಮ್ಯಾಚ್ ಅವರು ಮಂಗಳವಾರ ಪ್ರಕಟಿಸಿದರು.
ಚೆಟ್ರಿ ಅನುಪಸ್ಥಿತಿಯಲ್ಲಿ ಮನ್ವೀರ್ ಸಿಂಗ್ ಅವರು ಫಾರ್ವಡ್ ವಿಭಾಗವನ್ನು ಮುನ್ನಡೆಸಲಿದ್ದಾರೆ. ಅವರಿಗೆ ರಹೀಂ ಅಲಿ ಮತ್ತು ಕೆ.ಪಿ.ರಾಹುಲ್ ಸಾಥ್ ನೀಡಲಿದ್ದಾರೆ. ಸುರೇಶ್ ಸಿಂಗ್ ವಾಂಗ್ಜಮ್ ಮತ್ತು ಬ್ರೆಂಡನ್ ಫೆರ್ನಾಂಡಿಸ್ ಅವರು ತಂಡಕ್ಕೆ ಮರಳಿದ್ದಾರೆ.
ಫಿಫಾ ರ್ಯಾಂಕಿಂಗ್ನಲ್ಲಿ 99ನೇ ಸ್ಥಾನದಲ್ಲಿರುವ ಭಾರತ, ಸೆ.7 ರಂದು ನಡೆಯಲಿರುವ ಸೆಮಿಫೈನಲ್ನಲ್ಲಿ ಇರಾಕ್ (70ನೇ ರ್ಯಾಂಕ್) ವಿರುದ್ಧ ಪೈಪೋಟಿ ನಡೆಸಲಿದೆ. ಇನ್ನೊಂದು ಸೆಮಿಯಲ್ಲಿ ಥಾಯ್ಲೆಂಡ್ (113) ಮತ್ತು ಲೆಬನಾನ್ (100) ಎದುರಾಗಲಿವೆ. ಫೈನಲ್ ಪಂದ್ಯ ಸೆ.10 ರಂದು ನಡೆಯಲಿದೆ. ಭಾರತ ತಂಡ 2019 ರಲ್ಲಿ ಈ ಟೂರ್ನಿಯಲ್ಲಿ ಕಂಚು ಜಯಿಸಿತ್ತು.
ಭಾರತ ತಂಡ
ಗೋಲ್ಕೀಪರ್ಸ್: ಗುರುಪ್ರೀತ್ ಸಿಂಗ್ ಸಂಧು, ಅಮರಿಂದರ್ ಸಿಂಗ್, ಗುರ್ಮೀತ್ ಸಿಂಗ್
ಡಿಫೆಂಡರ್ಸ್: ಆಶಿಶ್ ರೈ, ನಿಖಿಲ್ ಪೂಜಾರಿ, ಸಂದೇಶ್ ಜಿಂಗನ್, ಅನ್ವರ್ ಅಲಿ, ಮೆಹ್ತಾಬ್ ಸಿಂಗ್, ಲಾಲ್ಚುಂಗ್ನುಂಗಾ, ಆಕಾಶ್ ಮಿಶ್ರಾ, ಸುಭಾಶಿಷ್ ಬೋಸ್
ಮಿಡ್ಫೀಲ್ಡರ್ಸ್: ಜೀಕ್ಸನ್ ಸಿಂಗ್, ಸುರೇಶ್ ಸಿಂಗ್ ವಾಂಗ್ಜಮ್, ಬ್ರೆಂಡನ್ ಫೆರ್ನಾಂಡಿಸ್, ಸಹಲ್ ಅಬ್ದುಲ್ ಸಮದ್, ಅನಿರುದ್ಧ್ ಥಾಪಾ, ರೋಹಿತ್ ಕುಮಾರ್, ಆಶಿಕ್ ಕುರುಣಿಯನ್, ನೊರೆಮ್ ಮಹೇಶ್ ಸಿಂಗ್, ಲಾಲ್ಲಿಯಾನ್ಜುವಾಲ ಚಾಂಗ್ಟೆ,
ಫಾರ್ವರ್ಡ್ಸ್: ಮನ್ವೀರ್ ಸಿಂಗ್, ರಹೀಂ ಅಲಿ, ಕೆ.ಪಿ.ರಾಹುಲ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.