ಉಡುಪಿ: ಅಗ್ರ ಶ್ರೇಯಾಂಕದ ಅನ್ಷ್ ನೇಗಿ (ಉತ್ತರ ಪ್ರದೇಶ) 21–11, 21–16 ರಿಂದ ಶ್ರೇಯಾಂಕರಹಿತ ಆಟಗಾರ ಅವಿ ಬಸಕ್ (ಕರ್ನಾಟಕ) ವಿರುದ್ಧ ಜಯಗಳಿಸಿ, ಅಖಿಲ ಭಾರತ ಸಬ್ ಜೂನಿಯರ್ (13 ವರ್ಷದೊಳಗಿನವರ) ರ್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯ ಬಾಲಕರ ಸಿಂಗಲ್ಸ್ ಕ್ವಾರ್ಟರ್ಫೈನಲ್ ಪ್ರವೇಶಿಸಿದ.
ಬಾಲಕಿಯರ ಸಿಂಗಲ್ಸ್ನಲ್ಲಿ ಕರ್ನಾಟಕದ ಅನುಷ್ಕಾ ಬರಾಯ್ ಮೂರು ಸೆಟ್ಗಳ ಹೋರಾಟದಲ್ಲಿ ನಾಲ್ಕನೇ ಶ್ರೇಯಾಂಕದ ಅನುಷ್ಕಾ ಜುಯಲ್ ಹಿಮ್ಮೆಟ್ಟಿಸಿ ಎಂಟರ ಘಟ್ಟ ಪ್ರವೇಶಿಸಿದರೆ, ರುಜುಲಾ ರಾಮು ಮತ್ತು ಮೌನಿತಾ ಎ.ಎಸ್. ನಿರ್ಗಮಿಸಿದರು.
ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಟೂರ್ನಿಯಲ್ಲಿ ಶುಕ್ರವಾರ, ಎರಡನೇ ಶ್ರೇಯಾಂಕದ ಪ್ರಣವ್ ರಾಮ್ ಎನ್. (ತೆಲಂಗಾಣ), ನಾಲ್ಕನೇ ಶ್ರೇಯಾಂಕದ ಕುನಾಲ್ ಚೌಧರಿ (ರಾಜಸ್ಥಾನ) ಕೂಡ ಎಂಟರ ಘಟ್ಟಕ್ಕೆ ಮುನ್ನಡೆದರು. ಪ್ರಣವ್ 21–14, 21–16ರಲ್ಲಿ ಆರಾಧ್ಯ ಶರ್ಮ ವಿರುದ್ಧ, ಕುನಾಲ್ 21–7, 21–18ರಲ್ಲಿ ಹತ್ತನೇ ಶ್ರೇಯಾಂಕದ ಕೇಶ್ರಿ ನೀರಜ್ (ಜಾರ್ಖಂಡ್) ವಿರುದ್ಧ ಜಯಗಳಿಸಿದರು.
16ನೆ ಶ್ರೇಯಾಂಕದ ಆದಿತ್ಯಮ್ ಜೋಶಿ (ಮಧ್ಯಪ್ರದೇಶ) 19–21, 21–10, 21–12ರಲ್ಲಿ ಏಳನೇ ಶ್ರೇಯಾಂಕದ ಭಾರ್ಗವ್ ರಾಮ್ ಅರಿಗೇಲ ವಿರುದ್ಧ ಜಯಗಳಿಸಿದ. ಆಂಧ್ರದ ವಿಶ್ವತೇಜ್ ಗೊಬ್ಬೂರು, ಧಾರ್ಮಿಕ್ ಶ್ರೀಕುಮಾರ್ (ಕೇರಳ), ಓಂಕರಣ್ ಶರ್ಮಾ (ಹರಿಯಾಣ), ಜೆ. ಜೈಸನ್ (ಕೇರಳ) ಕೂಡ ಎಂಟರ ಘಟ್ಟ ಪ್ರವೇಶಿಸಿದರು.
ಇದಕ್ಕೆ ಮೊದಲು ಕರ್ನಾಟಕದ ಓಂ ಮಾಕಾ, ಪ್ರೀಕ್ವಾರ್ಟರ್ಫೈನಲ್ನಲ್ಲಿ 21–19, 17–21, 21–23ರಲ್ಲಿ ಕೇಶರ್ರೀ ನೀರಜ್ಗೆ ಮಣಿದಿದ್ದ.
ಅನುಷ್ಕಾ ಬರಾಯ್ ಪ್ರೀಕ್ವಾರ್ಟರ್ಫೈನಲ್ನಲ್ಲಿ22–20, 12–21, 21–13 ರಲ್ಲಿ ಉತ್ತರಪ್ರದೇಶದ ಅನುಷ್ಕಾ ಜುಯಲ್ ವಿರುದ್ಧ ಜಯಗಳಿಸಿದಳು. ಇತರ ಪಂದ್ಯಗಳಲ್ಲಿ ಆರನೇ ಶ್ರೇಯಾಂಕದ ಮಾನಸಾ ರಾವತ್ 21–7, 21–13ರಲ್ಲಿ ಕರ್ನಾಟಕದ ರುಜುಲಾ ವಿರುದ್ಧ, 12ನೇ ಶ್ರೇಯಾಂಕದ ರಕ್ಷಾ ಕಂದಸಂಇ (ಮಹಾರಾಷ್ಟ್ರ) 21–10, 21–14ರಲ್ಲಿ ಕರ್ನಾಟಕದ ಮೌನಿತಾ ವಿರುದ್ಧ ಜಯಗಳಿಸಿದರು.
ಅಗ್ರರ ಶ್ರೇಯಾಂಕದ ನವ್ಯಾ ಕಂಡೇರಿ (ಆಂಧ್ರ ಪ್ರದೇಶ), ಎರಡನೇ ಶ್ರೇಯಾಂಕದ ಉನ್ನತಿ ಹೂಡಾ (ಹರಿಯಾಣ), ಮೂರನೇ ಶ್ರೇಯಾಂಕದ ಶ್ರೀಯಾನ್ಷಿ ವಲಿಶೆಟ್ಟಿ, ಐದನೇ ಶ್ರೇಯಾಂಕದ ಏಷಾ ಗಾಂಧಿ, ತಮಿಳುನಾಡಿನ ರಕ್ಷಿತಾಶ್ರೀ ಕೂಡ ಎಂಟರ ಘಟ್ಟ ಪ್ರವೇಶಿಸಿದರು. ಇವರಲ್ಲಿ ಶ್ರೇಯಾಂಕರಹಿತ ಆಟಗಾರ್ತಿ ರಕ್ಷಿತಾಶ್ರೀ 21–18, 21–13ರಲ್ಲಿ ಎಂಟನೇ ಶ್ರೇಯಾಂಕದ ಆದ್ಯಾ ಸಿಂಗ್ (ಜಾರ್ಖಂಡ್) ವಿರುದ್ಧ ಜಯಗಳಿಸಿದ್ದು ಗಮನಸೆಳೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.