
ರಾಜ್ಯ ಬ್ಯಾಸ್ಕೆಟ್ಬಾಲ್ ಸಂಸ್ಥೆಯ ‘ಎ’ ಡಿವಿಷನ್ ಲೀಗ್ ಬಾಸ್ಕೆಟ್ಬಾಲ್ ಚಾಂಪಿಯನ್ಷಿಪ್ನ ಪ್ರಶಸ್ತಿ ಗೆದ್ದ ಬ್ಯಾಂಕ್ ಆಫ್ ಬರೋಡಾ ತಂಡ.
–ಪ್ರಜಾವಾಣಿ ಚಿತ್ರ: ಬಿ.ಕೆ. ಜನಾರ್ದನ್
ಬೆಂಗಳೂರು: ಆರನ್ ಅವರ ಅಮೋಘ ಆಟದ ನೆರವಿನಿಂದ ಬ್ಯಾಂಕ್ ಆಫ್ ಬರೋಡಾ ತಂಡವು ಗುರುವಾರ ರಾಜ್ಯ ಬ್ಯಾಸ್ಕೆಟ್ಬಾಲ್ ಸಂಸ್ಥೆಯ ‘ಎ’ ಡಿವಿಷನ್ ಲೀಗ್ ಬಾಸ್ಕೆಟ್ಬಾಲ್ ಚಾಂಪಿಯನ್ಷಿಪ್ನ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಫೈನಲ್ನಲ್ಲಿ ಬರೋಡಾ ತಂಡವು 88–85ರಿಂದ ಯಂಗ್ ಓರಿಯನ್ಸ್ ಎಸ್.ಸಿ ತಂಡವನ್ನು ಮಣಿಸಿ, ಪ್ರೊ. ಎನ್.ಸಿ. ಪರಪ್ಪ ಸ್ಮಾರಕ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಚಾಂಪಿಯನ್ ತಂಡ ₹50 ಸಾವಿರ ಮತ್ತು ರನ್ನರ್ಸ್ ಅಪ್ ತಂಡ ₹25 ಸಾವಿರ ಬಹುಮಾನ ಪಡೆಯಿತು.
ಪಂದ್ಯದ ಮೊದಲಾರ್ಧದಲ್ಲಿ 41–49ರಿಂದ ಹಿನ್ನಡೆಯಲ್ಲಿದ್ದ ಬರೋಡಾ ಉತ್ತರಾರ್ಧದಲ್ಲಿ ಚುರುಕಿನ ಆಟ ಪ್ರದರ್ಶಿಸಿ ಮೇಲುಗೈ ಸಾಧಿಸಿತು. ಬರೋಡಾ ಪರ ಆರನ್ 23, ಕಾರ್ತಿಕೇಯನ್ ಮತ್ತು ಅನಿಲ್ ಕುಮಾರ್ ತಲಾ 17 ಅಂಕ ಕಲೆಹಾಕಿ ಗೆಲುವಿಗೆ ಉಪಯುಕ್ತ ಕಾಣಿಕೆ ನೀಡಿದರು. ಯಂಗ್ ಓರಿಯನ್ಸ್ ಪರ ಶಶಾಂಕ್ ರೈ 25, ಗೌತಮ್ 23 ಮತ್ತು ಅಭಿಷೇಕ್ ಗೌಡ 17 ಪಾಯಿಂಟ್ಸ್ ಗಳಿಸಿದರು.
ಜಿಎಸ್ಟಿ ಅಂಡ್ ಕಸ್ಟಮ್ಸ್ ತಂಡವು 72–57ರಿಂದ ಭಾರತ್ ಎಸ್.ಯು ತಂಡವನ್ನು ಮಣಿಸಿ ಎಂ.ಸಿ. ಶ್ರೀನಿವಾಸ ಸ್ಮಾರಕ ಟ್ರೋಫಿಗಾಗಿ ನಡೆದ ರಾಜ್ಯ ಬಿ ಡಿವಿಷನ್ ಲೀಗ್ನಲ್ಲಿ ಚಾಂಪಿಯನ್ ಆಯಿತು. ಫೈನಲ್ನಲ್ಲಿ ಜಿಎಸ್ಟಿ ತಂಡದ ಪರ ವಿಷ್ಣು (28) ಮತ್ತು ಭುವನ್ (21) ಮಿಂಚಿದರು. ಭಾರತ್ ತಂಡದ ಅಕ್ಷಯ್ 22 ಮತ್ತು ಕನಿಷ್ಕ 21 ಅಂಕ ಗಳಿಸಿದರು. ಚಾಂಪಿಯನ್ ತಂಡ ₹40 ಸಾವಿರ ಮತ್ತು ರನ್ನರ್ ಅಪ್ ತಂಡ ₹20 ಸಾವಿರ ಬಹುಮಾನ ಗಳಿಸಿತು.
ಎಂಇಜಿ ಅಂಡ್ ಸೆಂಟರ್ ತಂಡವು 90–82ರಿಂದ ಎಚ್ಬಿಆರ್ ಬಿ.ಸಿ ತಂಡವನ್ನು ಸೋಲಿಸಿ, ಎಸ್.ರಂಗರಾಜನ್ ಸ್ಮಾರಕ ಟ್ರೋಫಿಗಾಗಿ ನಡೆದ ರಾಜ್ಯ ಸಿ ಡಿವಿಷನ್ ಲೀಗ್ನ ಪ್ರಶಸ್ತಿ ಗೆದ್ದುಕೊಂಡಿತು. ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಎಂಇಜಿ ತಂಡದ ಪರ ಅಭಿಷೇಕ್ ವೈ.ಪಿ. 41 ಅಂಕ ಕಲೆಹಾಕಿ ಗೆಲುವಿನ ರೂವಾರಿಯಾದರು. ಎಚ್ಬಿಆರ್ ತಂಡದ ಶಶಿಧರ್ 26 ಪಾಯಿಂಟ್ಸ್ ಗಳಿಸಿದರು. ಎಂಇಜಿ ತಂಡ ₹30 ಸಾವಿರ ಮತ್ತು ಎಚ್ಬಿಆರ್ ತಂಡ ₹15 ಸಾವಿರ ಬಹುಮಾನ ಪಡೆಯಿತು.
ಬಹುಮಾನ ವಿತರಣಾ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ, ಫಿಬಾ ಏಷ್ಯಾ ಅಧ್ಯಕ್ಷ ಕೆ.ಗೋವಿಂದರಾಜ್, ಎಡಿಜಿಪಿ (ಆಡಳಿತ) ಸೌಮೇಂದು ಮುಖರ್ಜಿ, ಡಿವೈಇಎಸ್ ಆಯುಕ್ತ ಆರ್.ಚೇತನ್, ಕೆಎಸ್ಬಿಬಿಎ ಉಪಾಧ್ಯಕ್ಷ ಆರ್.ರಾಜನ್, ಸಹ ಕಾರ್ಯದರ್ಶಿ ಆರ್.ಪ್ರಕಾಶ್, ಮಾಜಿ ಒಲಿಂಪಿಯನ್ ಜಿ. ದಿಲೀಪ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.