ರಾಜ್ಯ ಯುವ ಬ್ಯಾಸ್ಕೆಟ್ಬಾಲ್ ಚಾಂಪಿಯನ್ಷಿಪ್ನ ಬಾಲಕಿರ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಡಿವೈಇಎಸ್ ವಿದ್ಯಾನಗರ ತಂಡ.
–ಪ್ರಜಾವಾಣಿ ಚಿತ್ರ:ಎಸ್.ಕೆ. ದಿನೇಶ್
ಬೆಂಗಳೂರು: ಎಚ್ಬಿಆರ್ ಬಿ.ಸಿ ಮತ್ತು ಡಿವೈಇಎಸ್ ವಿದ್ಯಾನಗರ ತಂಡಗಳು ರಾಜ್ಯ ಯುವ ಬ್ಯಾಸ್ಕೆಟ್ಬಾಲ್ ಚಾಂಪಿಯನ್ಷಿಪ್ನಲ್ಲಿ ಕ್ರಮವಾಗಿ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡವು.
ಬಸವನಗುಡಿಯ ಎಂಎನ್ಕೆ ಪಾರ್ಕ್ ಬ್ಯಾಸ್ಕೆಟ್ಬಾಲ್ ಕೋರ್ಟ್ನಲ್ಲಿ ಶನಿವಾರ ನಡೆದ ಫೈನಲ್ನಲ್ಲಿ ರಿಷಿತ್ ಭೂಸೇರಿ (29) ಅವರ ಅಮೋಘ ಆಟದ ಬಲದಿಂದ ಎಚ್ಬಿಆರ್ ತಂಡವು 53–43ರಿಂದ ಆತಿಥೇ ಎಂಎನ್ಕೆ ಪಾರ್ಕ್ ತಂಡವನ್ನು ಮಣಿಸಿತು. ಎಂಎನ್ಕೆ ತಂಡದ ವಶಿಷ್ಠ 15 ಮತ್ತು ಉಜ್ವಲ್ ಜಾಧವ್ 13 ಅಂಕ ಗಳಿಸಿದರು.
ಬಾಲಕಿಯರ ಫೈನಲ್ನ ರೋಚಕ ಪಂದ್ಯದಲ್ಲಿ ವಿದ್ಯಾನಗರ ತಂಡವು 66–65ರಿಂದ ಮೈಸೂರು ಜಿಲ್ಲೆ ಎ ತಂಡವನ್ನು ಸೋಲಿಸಿತು. ವಿದ್ಯಾನಗರ ಪರ ಇಶಿತಾ 29 ಮತ್ತು ನಿರೇಕ್ಷಾ 16 ಅಂಕ ಗಳಿಸಿದರು. ಮೈಸೂರು ತಂಡದ ಪರ ಶರ್ವಾನಿ ಎಸ್. ಮತ್ತು ಆಂಚಲ್ ಕ್ರಮವಾಗಿ 32 ಮತ್ತು 16 ಅಂಕ ಗಳಿಸಿದರು.
ಬಾಲಕರ ವಿಭಾಗದಲ್ಲಿ ಬೀಗಲ್ಸ್ ಮತ್ತು ಪಿಪಿಸಿ ತಂಡಗಳು ಕ್ರಮವಾಗಿ ಮೂರನೇ ಮತ್ತು ನಾಲ್ಕನೇ ಸ್ಥಾನ ಪಡೆದವು. ಬಾಲಕಿಯರಲ್ಲಿ ಪಿಪಿಸಿ ತೃತೀಯ ಮತ್ತು ಎಂಸಿಎಚ್ಎಸ್ ಚತುರ್ಥ ಸ್ಥಾನ ಗಳಿಸಿದವು. ವಿಜೇತ ತಂಡಕ್ಕೆ ₹30 ಸಾವಿರ, ರನ್ನರ್ಸ್ ಅಪ್ ತಂಡಕ್ಕೆ ₹20 ಸಾವಿರ ಮತ್ತು ಮೂರನೇ ಸ್ಥಾನ ಪಡೆದ ತಂಡಕ್ಕೆ ₹10 ಸಾವಿರ ನಗದು ಬಹುಮಾನ ನೀಡಲಾಯಿತು.
ಸಮಾರೋಪ ಸಮಾರಂಭದಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಫಿಬಾ ಏಷ್ಯಾ ಅಧ್ಯಕ್ಷ ಕೆ.ಗೋವಿಂದರಾಜ್, ಕೆಎಸ್ಬಿಬಿಎ ಉಪಾಧ್ಯಕ್ಷ ಆರ್.ರಾಜನ್, ಮಾಜಿ ಒಲಿಂಪಿಯನ್ ಜಿ.ದಿಲೀಪ್, ಎಂಎನ್ಕೆ ರಾವ್ ಪಾರ್ಕ್ ಕ್ಲಬ್ನ ಖಜಾಂಚಿ ಹಿತೇಶ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.