
ಪ್ರಶಸ್ತಿ ಗೆದ್ದ ಮರಿಯನ್ಸ್ ಬಿ.ಸಿ ಚಿಕ್ಕಮಗಳೂರು ತಂಡ. (ನಿಂತವರು) ಎಡದಿಂದ; ಓಂ ಶೆಟ್ಟಿ, ವಿನೋದ್ ಗೌಡ, ಕೋಚ್ ಅಶ್ವಿನ್ ಕುಮಾರ್, ನವೀನ್ ಚಾರ್ಲ್ಸ್, ದಿಲೀಪ್ ಕುಮಾರ್. (ಮಂಡಿಯೂರಿದವರು) ರಿಷಬ್ ಕುಮಾರ್, ಸುಜೋಯ್ ದಾಸ್, ಭರತ್ ಕುಮಾರ್ ಬಿ. ಮತ್ತು ದರ್ಶನ್ ದಾಂಡೇವಾಲೆ.
ಚಿತ್ರ: ಪುಷ್ಕರ್ ವಿ.
ಬೆಂಗಳೂರು: ಓಂ ಶೆಟ್ಟಿ ಮತ್ತು ರಿಷಬ್ ಕುಮಾರ್ ಅವರ ಅಮೋಘ ಆಟದ ನೆರವಿನಿಂದ ಮರಿಯನ್ಸ್ ಬಿ.ಸಿ ಚಿಕ್ಕಮಗಳೂರು ತಂಡವು ಕರ್ನಾಟಕ ಗ್ರಾಮೀಣ ಲೀಗ್ ಪುರುಷರ ಬ್ಯಾಸ್ಕೆಟ್ ಬಾಲ್ ಚಾಂಪಿಯನ್ಷಿಪ್ನ 7ನೇ ಆವೃತ್ತಿಯ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ಕಂಠೀರವ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಫೈನಲ್ ಪಂದ್ಯದಲ್ಲಿ ಮರಿಯನ್ಸ್ ತಂಡವು 85–65ರಿಂದ ನ್ಯಾಷನಲ್ ಎಸ್ಸಿ ಮೈಸೂರು ತಂಡವನ್ನು ಮಣಿಸಿತು. ಮಧ್ಯಂತರದ ವೇಳೆಗೆ 11 (44–33) ಅಂಕಗಳಿಂದ ಮುನ್ನಡೆಯಲ್ಲಿದ್ದ ಮೇರಿಯಲ್ಸ್ ತಂಡವು ನಂತರದಲ್ಲೂ ಪ್ರಾಬಲ್ಯ ಸಾಧಿಸಿತು. ಓಂ ಮತ್ತು ರಿಷಬ್ ಕ್ರಮವಾಗಿ 20 ಮತ್ತು 19 ಅಂಕ ಗಳಿಸಿದರು. ನ್ಯಾಷನಲ್ಸ್ ಪರ ರೋನಕ್ 24 ಮತ್ತು ಶ್ಲೋಕ್ 17 ಪಾಯಿಂಟ್ಸ್ ತಂದಿತ್ತರು.
ಚಾಂಪಿಯನ್ ಮರಿಯನ್ಸ್ ತಂಡವು ₹75 ಸಾವಿರ ಮತ್ತು ರನ್ನರ್ಸ್ ಅಪ್ ನ್ಯಾಷನಲ್ ತಂಡವು ₹50 ಸಾವಿರ ಬಹುಮಾನ ತನ್ನದಾಗಿಸಿಕೊಂಡಿತು.
ಮೂರನೇ ಸ್ಥಾನಕ್ಕಾಗಿ ನಡೆದ ರೋಚಕ ಪಂದ್ಯದಲ್ಲಿ ಮಂಗಳೂರು ಬಿ.ಸಿ 79–77ರಿಂದ ಪ್ರೊಟೆಕ್ ಅಸೋಸಿ ಯೇಷನ್ ಮೈಸೂರು ತಂಡವನ್ನು ಮಣಿಸಿತು. ಮಂಗಳೂರು ತಂಡವು ₹25 ಸಾವಿರ ಬಹುಮಾನ ಪಡೆಯಿತು.
ಚಾಂಪಿಯನ್ಷಿಪ್ನ ಉತ್ತಮ ಆಟಗಾರನಾಗಿ ನ್ಯಾಷನಲ್ಸ್ ತಂಡದ ರೋನಕ್ ಮತ್ತು ಭರವಸೆಯ ಆಟಗಾರನಾಗಿ ಪ್ರೊಟೆಕ್ ತಂಡದ ಕೇಶವ್ ಹೊರಹೊಮ್ಮಿದರು.
ವಿಜೇತ ತಂಡಕ್ಕೆ ರಾಜ್ಯ ಒಲಿಂಪಿಕ್ ಸಂಸ್ಥೆ ಅಧ್ಯಕ್ಷ ಕೆ.ಗೋವಿಂದರಾಜ್, ಕರ್ನಾಟಕ ರಾಜ್ಯ ಬ್ಯಾಸ್ಕೆಟ್ಬಾಲ್ ಸಂಸ್ಥೆ ಉಪಾಧ್ಯಕ್ಷ ರಾಜನ್, ಸಹ ಕಾರ್ಯದರ್ಶಿ ಆರ್.ಪ್ರಕಾಶ್ ಬಹುಮಾನ ವಿತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.