ADVERTISEMENT

ಖೇಲೊ ಇಂಡಿಯ ಬೀಚ್‌ ಗೇಮ್ಸ್‌ಗೆ ಚಾಲನೆ: ದಿಯು ಘೋಘ್ಲಾ ಬೀಚ್‌ನಲ್ಲಿ ಕ್ರೀಡೋತ್ಸವ

ಮೊದಲ ದಿನ ಕರ್ನಾಟಕದ ಕ್ರೀಡಾಪಟುಗಳಿಗೆ ನಿರಾಸೆ

ಪ್ರದೀಶ್ ಎಚ್.ಮರೋಡಿ
Published 6 ಜನವರಿ 2026, 23:42 IST
Last Updated 6 ಜನವರಿ 2026, 23:42 IST
<div class="paragraphs"><p>ಕೂಟದಲ್ಲಿ ಪಾಲ್ಗೊಂಡ ಕರ್ನಾಟಕದ ಕ್ರೀಡಾಪಟುಗಳು</p></div>

ಕೂಟದಲ್ಲಿ ಪಾಲ್ಗೊಂಡ ಕರ್ನಾಟಕದ ಕ್ರೀಡಾಪಟುಗಳು

   

ದಿಯು: ಕೇಂದ್ರಾಡಳಿತ ಪ್ರದೇಶವಾಗಿರುವ ದಿಯುವಿನ ಘೋಘ್ಲಾ ಕಡಲ ಕಿನಾರೆ ಪ್ರವಾಸಿಗಳ ಆಕರ್ಷಣೆಯ ಕೇಂದ್ರ. ಈ ಬ್ಲ್ಯೂಫ್ಲ್ಯಾಗ್ ಮಾನ್ಯತೆಯ ಕಡಲ ಕಿನಾರೆಯಲ್ಲಿ ಎರಡನೇ ಆವೃತ್ತಿಯ ಖೇಲೊ ಇಂಡಿಯ ಬೀಚ್‌ ಗೇಮ್ಸ್‌ಗೆ ಮಂಗಳವಾರ ಬೆಳಗಿನ ಜಾವ ಕೊರೆಯುವ ಚಳಿಯ ನಡುವೆ  ಚಾಲನೆ ದೊರೆಯಿತು.

ದೇಶದಾದ್ಯಂತ 1400ಕ್ಕೂ ಹೆಚ್ಚು ಕ್ರೀಡಾಪಟುಗಳು ಈ ಕೂಟದಲ್ಲಿ ಪಾಲ್ಗೊಂಡಿದ್ದಾರೆ. 2025ರ ಆವೃತ್ತಿಯಲ್ಲಿ ಪಾರಮ್ಯ ಮೆರೆದಿದ್ದ ಈಶಾನ್ಯ ರಾಜ್ಯಗಳ ಕ್ರೀಡಾಪಟುಗಳು ಈ ಬಾರಿಯೂ ಮೇಲುಗೈ ಸಾಧಿಸುವ ಸಂಕೇತಗಳು ಕಾಣಿಸಿದವು. ಆದರೆ, ಮೊದಲ ದಿನ ಕರ್ನಾಟಕದ ಕ್ರೀಡಾಪಟುಗಳು ನಿರಾಸೆ ಮೂಡಿಸಿದರು. 

ADVERTISEMENT

ಸೂರ್ಯ ನೆತ್ತಿ ಮೇಲೇರುತ್ತಿದ್ದಂತೆ ಸ್ಪರ್ಧೆಗೆ ಎರಡು ಗಂಟೆ ವಿರಾಮ ನೀಡಲಾಯಿತು. ಉಳಿದಂತೆ ದಿನವಿಡೀ ನಡೆದ ಬೀಚ್‌ ಸಾಕರ್, ಬೀಚ್ ವಾಲಿಬಾಲ್, ಬೀಚ್ ಸೆಪಕ್ ಟಕ್ರಾ, ಬೀಚ್ ಕಬಡ್ಡಿ, ಪೆಂಕಾಕ್‌ ಸಿಲಾಟ್ ಸ್ಪರ್ಧೆಗಳ ಜೊತೆಗೆ ಪ್ರದರ್ಶನ ಕ್ರೀಡೆ ಮಲ್ಲಕಂಬ ಪ್ರೇಕ್ಷಕರಿಗೆ ರಸದೌತಣ ನೀಡಿದವು. 

ಚೊಚ್ಚಲ ಆವೃತ್ತಿಯಲ್ಲಿ ಎರಡು ಚಿನ್ನ ಸೇರಿದಂತೆ ಒಟ್ಟು ನಾಲ್ಕು ಪದಕಗಳನ್ನು ಗೆದ್ದಿದ್ದ ಕರ್ನಾಟಕ ತಂಡವು ಈ ಬಾರಿ ಹೆಚ್ಚಿನ ಪದಕಗಳ ನಿರೀಕ್ಷೆಯೊಂದಿಗೆ ಕಣಕ್ಕಿಳಿದಿದೆ. ಬೀಚ್‌ ಸಾಕರ್‌ನಲ್ಲಿ 12 ಮಂದಿ, ಪೆಂಕಾಟ್‌ ಸಿಲಾಟ್‌ನಲ್ಲಿ ಏಳು ಮಂದಿ ಮತ್ತು ಓಪನ್‌ ವಾಟರ್‌ ಈಜು ಸ್ಪರ್ಧೆಯಲ್ಲಿ ಎಂಟು ಮಂದಿ ಸೇರಿದಂತೆ 27 ಕ್ರೀಡಾಪಟುಗಳು ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದಾರೆ.

ಬೀಚ್‌ ಸಾಕರ್‌ (ಇದನ್ನು ಬೀಚ್ ಫುಟ್‌ಬಾಲ್ ಎಂದೂ ಕರೆಯುತ್ತಾರೆ) ಗುಂಪು ಹಂತದ ‍ಪಂದ್ಯದಲ್ಲಿ ರಾಜ್ಯದ ಪುರುಷರ ತಂಡವು 2–15 ಗೋಲುಗಳಿಂದ ಕೇರಳಕ್ಕೆ ಮಣಿಯಿತು. ಕರ್ನಾಟಕದ ಪರ ಮೊಹಮ್ಮದ್‌ ಸುಫೀನ್‌ (26ನೇ) ಮತ್ತು ನಾಯಕ ಮೊಹಮ್ಮದ್‌ ಖಾಸೀಫ್‌ (27ನೇ ನಿಮಿಷ) ತಲಾ ಒಂದು ಗೋಲು ಗಳಿಸಲಷ್ಟೇ ಶಕ್ತವಾದರು. ಕರ್ನಾಟಕ ತಂಡವು ಬುಧವಾರ ಎರಡನೇ ಪಂದ್ಯದಲ್ಲಿ ಹಿಮಾಚಲ ಪ್ರದೇಶ ತಂಡವನ್ನು ಎದುರಿಸಲಿದೆ.

ಪೆಂಕಾಟ್‌ ಸಿಲಾಟ್‌ನ ತುಂಗಲ್‌ ವೈಯಕ್ತಿಕ ಸ್ಪರ್ಧೆಯಲ್ಲಿ ಕರ್ನಾಟಕದ ಅನುಭವಿ ಆಟಗಾರ ಆಕಾಶ್‌ ದೊಡ್ಡವಾಡ ಕೂದಲೆಳೆ ಅಂತರದಲ್ಲಿ ಪದಕದ ಅವಕಾಶ ತಪ್ಪಿಸಿಕೊಂಡರು. 2024ರ ಫೆಡರೇಷನ್‌ ಕಪ್‌ ಚಾಂಪಿಯನ್‌ ಆಕಾಶ್‌ ಅವರು ಕ್ವಾರ್ಟರ್‌ ಫೈನಲ್‌ನಲ್ಲಿ ತಮಿಳುನಾಡಿನ ಶ್ರೀಕಾಂತ್‌ ಅವರಿಗೆ ಶರಣಾದರು. ಮಹಿಳೆಯರ ಸ್ಪರ್ಧೆಯಲ್ಲಿ ರಿಷಿತಾ ಅವರು ಮಹಾರಾಷ್ಟ್ರದ ಕಿರಣಾಕ್ಷಿ ಅವರಿಗೆ ಮಣಿದರು.

‘ಈ ಬಾರಿ ಪದಕದ ನಿರೀಕ್ಷೆಯೊಂದಿಗೆ ಸ್ಪರ್ಧಾ ಕಣಕ್ಕೆ ಇಳಿದಿದ್ದೆ. ಎದುರಾಳಿಯ ವಿರುದ್ಧ ಆರಂಭದಲ್ಲಿ ನಾನೇ ಮೇಲುಗೈ ಸಾಧಿಸಿದ್ದೆ. ಆದರೆ, ಕೊನೆಯ ಕ್ಷಣದಲ್ಲಿ ಬಲಗಾಲು ಉಳುಕಿ ನಿಯಂತ್ರಣ ತಪ್ಪಿತು. ಈ ಪಂದ್ಯ ಗೆದ್ದು ಸೆಮಿಫೈನಲ್‌ ಪ್ರವೇಶಿಸಿದ್ದರೆ ಕನಿಷ್ಠ ಕಂಚಿನ ಪದಕ ಖಚಿತವಾಗುತ್ತಿತ್ತು’ ಎಂದು 2022ರಲ್ಲಿ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಆಕಾಶ್‌ ಹೇಳಿದರು.

‘ಕಳೆದ ಆವೃತ್ತಿಯಲ್ಲಿ ಓಪನ್‌ ವಾಟರ್‌ ಈಜಿನಲ್ಲಿ ಎರಡು ಚಿನ್ನ, ಪೆಂಕಾಟ್‌ ಸಿಲಾಟ್‌ ಎರಡು ಕಂಚಿನ ಪದಕ ಕರ್ನಾಟಕ ಗೆದ್ದಿತ್ತು. ಈ ಬಾರಿ ರಾಜ್ಯದ ಕ್ರೀಡಾಪಟುಗಳು ಅದಕ್ಕಿಂತ ಉತ್ತಮ ಸಾಧನೆ ಮಾಡುವ ನಿರೀಕ್ಷೆಯಿದೆ’ ಎಂದು ಕರ್ನಾಟಕದ ತಂಡದ ನೋಡೆಲ್‌ ಅಧಿಕಾರಿ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕ ಶ್ರೀನಿವಾಸ ಬಿ. ಪ್ರತಿಕ್ರಿಯಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.