ನವದೆಹಲಿ: ಲಾಕ್ಡೌನ್ನಿಂದಾಗಿ ಗುರುಗ್ರಾಮದಲ್ಲಿ ಸಿಕ್ಕಿಹಾಕಿಕೊಂಡಿದ್ದ ತಮ್ಮ ಗಾಯಾಳು ತಂದೆಯನ್ನು ಸೈಕಲ್ ಮೇಲೆ ಕೂರಿಸಿಕೊಂಡು 1,200 ಕಿಲೋಮೀಟರ್ ದೂರದ ಬಿಹಾರದಲ್ಲಿರುವ ಸ್ವಗ್ರಾಮಕ್ಕೆ ಕರೆತಂದಿದ್ದ ಬಾಲಕಿ ಜ್ಯೋತಿಕುಮಾರಿಗೆ ಸೈಕ್ಲಿಂಗ್ಫೆಡರೇಷನ್ ಟ್ರಯಲ್ಸ್ನಲ್ಲಿ ಭಾಗವಹಿಸಲು ಆಹ್ವಾನಿಸಿದೆ.
ಏಳು ದಿನಗಳವರೆಗೆ ಬೈಸಿಕಲ್ ಮೇಲೆ ಪ್ರಯಾಣ ಮಾಡಿದ್ದ, 15 ವರ್ಷದ ಜ್ಯೋತಿಕುಮಾರಿ ಪ್ರತಿಭೆಗೆ ಪ್ರೋತ್ಸಾಹ ನೀಡಲು ಸಿದ್ಧವಾಗಿದೆ.
‘ಇವತ್ತು ಬೆಳಿಗ್ಗೆ ಜ್ಯೋತಿ ಜೊತೆ ಮಾತನಾಡಿದೆ. ಮುಂದಿನ ತಿಂಗಳಲ್ಲಿ ದೆಹಲಿಗೆ ಬರಬೇಕೆಂದು ಆಮಂತ್ರಣ ನೀಡಿದ್ದೇವೆ. ಲಾಕ್ಡೌನ್ ತೆರವುಗೊಳಿಸಿದ ನಂತರ ದೆಹಲಿಯ ಇಂದಿರಾಗಾಂಧಿ ಸೈಕ್ಲಿಂಗ್ ಅಕಾಡೆಮಿಯಲ್ಲಿ ಟ್ರಯಲ್ಸ್ ನೀಡಲು ವ್ಯವಸ್ಥೆ ಮಾಡಲಿದ್ದೇವೆ. ಅವರಿಗೆ ತಮ್ಮ ಗ್ರಾಮದಿಂದ ಬರಲು ಎಲ್ಲ ವ್ಯವಸ್ಥೆಯನ್ನೂ ನಾವೇ ಮಾಡಿಕೊಡುತ್ತೇವೆ. ವೆಚ್ಚವನ್ನೂ ನಮ್ಮ ಸಂಸ್ಥೆಯೇ ಭರಿಸಲಿದೆ’ ಎಂದು ಸಂಸ್ಥೆಯ ಮುಖ್ಯಸ್ಥ ಓಂಕಾರ್ ಸಿಂಗ್ ತಿಳಿಸಿದ್ದಾರೆ.
‘ಆ ಬಾಲಕಿಯಲ್ಲಿ ಉತ್ತಮ ಸಾಮರ್ಥ್ಯ ಇದೆ. ಅದೇನೋ ವಿಶೇಷ ಪ್ರತಿಭೆ ಇದೆ ಎನಿಸುತ್ತಿದೆ. 1,200 ಕಿ.ಮೀ ಸೈಕಲ್ ಹೊಡೆಯುವುದು ಸುಲಭದ ಮಾತಲ್ಲ. ಆಕೆಯ ದೈಹಿಕ ಕ್ಷಮತೆಯ ಪರೀಕ್ಷೆ ಮಾಡುತ್ತೇವೆ. ನಮ್ಮ ಅಕಾಡೆಮಿಯಲ್ಲಿರುವ ಕಂಪ್ಯೂಟರೀಕೃತ ಸೈಕಲ್ ಮೇಲೆ ಪರೀಕ್ಷೆ ನೀಡಲು ಅವಕಾಶ ಕೊಡುತ್ತೇವೆ. ಏಳೆಂಟು ಮಾನದಂಡಗಳನ್ನು ನಿಗದಿ ಮಾಡಿದ್ದೇವೆ. ಅವುಗಳಲ್ಲಿ ಅವರು ಉತ್ತೀರ್ಣರಾದರೆ 15 ವರ್ಷದೊಳಗಿನವರ ಟ್ರೇನಿಗಳಲ್ಲಿ ಸ್ಥಾನ ಪಡೆಯುವರು. ಅಕಾಡೆಮಿಯಲ್ಲಿ ಈಗಾಗಲೇ 10 ಮಂದಿ ಸೈಕ್ಲಿಸ್ಟ್ಗಳು ಇದ್ದಾರೆ’ ಎಂದು ಸಿಂಗ್ ತಿಳಿಸಿದರು.
ಜ್ಯೋತಿಯ ತಂದೆ ಮೋಹನ್ ಪಾಸ್ವಾನ್ ಅವರು ಗುರುಗ್ರಾಮದಲ್ಲಿ ರಿಕ್ಷಾ ಚಾಲಕರಾಗಿದ್ದರು. ಅಪಘಾತದಲ್ಲಿ ಗಾಯಗೊಂಡಿದ್ದರು. ಅದೇ ಸಂದರ್ಭದಲ್ಲಿ ಲಾಕ್ಡೌನ್ ಇತ್ತು. ಅವರು ಚಾಲನೆ ಮಾಡುತ್ತಿದ್ದ ರಿಕ್ಷಾವನ್ನು ಮಾಲೀಕರು ತೆಗೆದುಕೊಂಡು ಹೋದರು. ಅದರಿಂದಾಗಿ ಮೋಹನ್ ತಮ್ಮ ಗ್ರಾಮಕ್ಕೆ ಹೋಗಲು ಸಾಧ್ಯವಾಗದೇ ಸಂಕಷ್ಟದಲ್ಲಿದ್ದರು. ಮೇ 10ರಂದು ಜ್ಯೋತಿ ತಮ್ಮ ಸೈಕಲ್ನ ಹಿಂಬದಿಯಲ್ಲಿ ಅಪ್ಪನನ್ನು ಕೂರಿಸಿಕೊಂಡು ಗ್ರಾಮಕ್ಕೆ ತೆರಳಿದ್ದರು. 16ರಂದು ತಲುಪಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.