ADVERTISEMENT

ಕಂಚಿನ ಪದಕ ತೃಪ್ತಿ ತಂದಿಲ್ಲ: ಹಾಕಿ ತಂಡದ ನಾಯಕ ಪಿ.ಆರ್‌. ಶ್ರೀಜೇಶ್‌

ಪಿಟಿಐ
Published 3 ಸೆಪ್ಟೆಂಬರ್ 2018, 14:38 IST
Last Updated 3 ಸೆಪ್ಟೆಂಬರ್ 2018, 14:38 IST
ಪಿ. ಆರ್‌. ಶ್ರೀಜೇಶ್‌
ಪಿ. ಆರ್‌. ಶ್ರೀಜೇಶ್‌   

ನವದೆಹಲಿ: ‘ಏಷ್ಯನ್‌ ಕ್ರೀಡಾಕೂಟದಲ್ಲಿ ಗೆದ್ದ ಕಂಚಿನ ಪದಕ ತೃಪ್ತಿ ತಂದಿಲ್ಲ’ ಎಂದು ಭಾರತ ಹಾಕಿ ತಂಡದ ನಾಯಕ ಪಿ.ಆರ್‌. ಶ್ರೀಜೇಶ್‌ ಹೇಳಿದ್ದಾರೆ.

ಭಾನುವಾರ ಮುಕ್ತಾಯಗೊಂಡ ಏಷ್ಯನ್‌ ಕ್ರೀಡಾಕೂಟದ ಪುರುಷರ ವಿಭಾಗದಲ್ಲಿ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ತಾನ ತಂಡವನ್ನು ಮಣಿಸಿತ್ತು. ಇದರೊಂದಿಗೆ ಕಂಚಿನ ಪದಕ ತನ್ನದಾಗಿಸಿಕೊಂಡಿತ್ತು. ಅದಕ್ಕೂ ಮುನ್ನ ಸೆಮಿಫೈನಲ್‌ ಪಂದ್ಯದಲ್ಲಿ ಮಲೇಷ್ಯಾ ತಂಡದ ಎದುರು ಭಾರತ ಸೋಲು ಅನುಭವಿಸಿತ್ತು.

‘ವಿಶ್ವ ರ‍್ಯಾಂಕಿಂಗ್‌ನಲ್ಲಿ ನಾವು ಐದನೇ ಸ್ಥಾನದಲ್ಲಿದ್ದೇವೆ. ಹಿಂದಿನ ಬಾರಿ ಏಷ್ಯನ್‌ ಕ್ರೀಡಾಕೂಟದಲ್ಲಿ ಚಾಂಪಿಯನ್‌ ಆಗಿದ್ದೆವು. ಹೀಗಾಗಿ ನಮ್ಮ ಮೇಲೆ ನಿರೀಕ್ಷೆ ಹೆಚ್ಚಿತ್ತು. ಆದರೆ, ಸೆಮಿಫೈನಲ್‌ನಲ್ಲಿ ಆದ ಆಘಾತ ನಿಜಕ್ಕೂ ನೋವುಂಟು ಮಾಡಿದೆ. ಈ ವರ್ಷದಲ್ಲಿ ನಮ್ಮ ತಂಡ ಅತ್ಯುತ್ತಮ ಸಾಮರ್ಥ್ಯ ಮೆರೆದಿದೆ. ಕಂಚಿನ ಪದಕದಿಂದ ಸಮಾಧಾನವಿಲ್ಲ’ ಎಂದು ಶ್ರೀಜೇಶ್‌ ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

‘ಮಲೇಷ್ಯಾ ಎದುರಿನ ಪಂದ್ಯದ ಪ್ರಥಮಾರ್ಧದಲ್ಲಿ ನಾವು ಉತ್ತಮ ಆಟವಾಡಿದೆವು. ಆದರೆ, ದ್ವಿತೀಯಾರ್ಧದಲ್ಲಿ ರಕ್ಷಣಾತ್ಮಕ ಆಟದ ಮೊರೆ ಹೋದವು. ಎದುರಾಳಿ ತಂಡವು ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿತು’ ಎಂದು ಅವರು ತಿಳಿಸಿದ್ದಾರೆ.

‘ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಲು ವಿಫಲವಾಗಿದ್ದೇವೆ. ಆದರೆ, ಅದನ್ನು ಸಾಧಿಸಲು ನಮ್ಮ ಮುಂದೆ ಸಾಕಷ್ಟು ಅವಕಾಶಗಳಿವೆ. ಅವುಗಳಲ್ಲಿ ಯಶಸ್ವಿಯಾಗುವ ವಿಶ್ವಾಸವಿದೆ’ ಎಂದೂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.