
ಮನ್ಸುಖ್ ಮಾಂಡವೀಯ
–ಎಕ್ಸ್ ಚಿತ್ರ
ನವದೆಹಲಿ: ಬೆಂಗಳೂರಿನಲ್ಲಿರುವ ಭಾರತ ಕ್ರೀಡಾ ಪ್ರಾಧಿಕಾರದ ನೇತಾಜಿ ಸುಭಾಷ್ ದಕ್ಷಿಣ ಪ್ರಾದೇಶಿಕ ಕೇಂದ್ರದಲ್ಲಿ (ಸಾಯ್ ಎನ್ಎಸ್ಎಸ್ಸಿ) ನಿರ್ಮಾಣವಾಗಲಿರುವ ಅತ್ಯಾಧುನಿಕ ಉನ್ನತ ಕಾರ್ಯಕ್ಷಮತೆ ಕೇಂದ್ರಕ್ಕೆ (ಎಚ್ಪಿಸಿ) ಬುಧವಾರ ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಅವರು ವರ್ಚುವಲ್ ಮೂಲಕ ಶಿಲಾನ್ಯಾಸ ನೆರವೇರಿಸಿದರು.
ಅತ್ಯಾಧುನಿಕ ಉನ್ನತ ಕಾರ್ಯಕ್ಷಮತೆ ಕೇಂದ್ರಕ್ಕೆ ₹75 ಕೋಟಿ ವೆಚ್ಚವಾಗಲಿದೆ. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ನ (ಎಚ್ಎಎಲ್) ಸಾಮಾಜಿಕ ಹೊಣೆಗಾರಿಕೆ ನಿಧಿಯ (ಸಿಎಸ್ಆರ್) ಬೆಂಬಲದೊಂದಿಗೆ ಅಭಿವೃದ್ಧಿಪಡಿಸಲಾಗುವುದು. ಈ ಯೋಜನೆಗೆ ಎಚ್ಎಎಲ್ ₹ 60 ಕೋಟಿ ಕೊಡುಗೆ ನೀಡಲಿದೆ. ಮುಂದಿನ 12 ತಿಂಗಳಲ್ಲಿ ಕೇಂದ್ರವು ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ ಎಂದು ಸಾಯ್ ಮೂಲಗಳು ತಿಳಿಸಿವೆ.
ಉನ್ನತ ಕಾರ್ಯಕ್ಷಮತೆ ಕೇಂದ್ರದಲ್ಲಿ ಅತ್ಯಾಧುನಿಕ ಕ್ರೀಡಾ ವಿಜ್ಞಾನ ವ್ಯವಸ್ಥೆ, ಕ್ರೀಡಾ ಔಷಧ, ಪುನಃಶ್ಚೇತನಕ್ಕೆ ಅಗತ್ಯ ಸೌಲಭ್ಯ, ಬಯೋಮೆಕಾನಿಕ್ಸ್, ಶರೀರಶಾಸ್ತ್ರ, ಮನೋವಿಜ್ಞಾನ, ಪೋಷಕಾಂಶ, ಕಾರ್ಯಕ್ಷಮತೆ ವಿಶ್ಲೇಷಣೆ ಮತ್ತು ಹೈಡ್ರೋಥೆರಪಿ ಮುಂತಾದ ಸುಧಾರಿತ ಸೌಲಭ್ಯಗಳು ಒಳಗೊಂಡಿರಲಿದೆ.
ಬೆಂಗಳೂರಿನ ಸಾಯ್ ಎನ್ಎಸ್ಎಸ್ಸಿ ದೇಶದ ಪ್ರಮುಖ ಕ್ರೀಡಾ ಕೇಂದ್ರಗಳಲ್ಲಿ ಒಂದಾಗಿದೆ. ಇಲ್ಲಿ ರಾಷ್ಟ್ರೀಯ ಶ್ರೇಷ್ಠತಾ ಕೇಂದ್ರಗಳು, ಕೋಚಿಂಗ್ ಶಿಬಿರಗಳು ಮತ್ತು ಅಥ್ಲೀಟ್ಗಳಿಗೆ ಮತ್ತು ಹಾಕಿ ತಂಡಕ್ಕೆ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿವೆ.
ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಸಾಯ್ ಕಾರ್ಯದರ್ಶಿ ವಿಷ್ಣುಕಾಂತ್ ತಿವಾರಿ ಮತ್ತು ಎಚ್ಎಎಲ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ.ಡಿ.ಕೆ. ಸುನಿಲ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.