ಟೋಕಿಯೊ (ಪಿಟಿಐ): ನಾಲ್ಕು ದಶಕಗಳ ನಂತರ ಪದಕ ಜಯಿಸುವ ಅವಕಾಶವೊಂದು ಭಾರತದ ಪುರುಷರ ಹಾಕಿ ತಂಡದ ಮುಂದೆ ಈಗ ಇದೆ.
ಗುರುವಾರ ಮೂರನೇ ಸ್ಥಾನಕ್ಕಾಗಿ ನಡೆಯಲಿರುವ ಪಂದ್ಯದಲ್ಲಿ ಭಾರತವು ಜರ್ಮನಿಯ ವಿರುದ್ಧ ಜಯಿಸಿದರೆ ಕಂಚಿನ ಪದಕ ಕೊರಳಿಗೇರಿಸಿಕೊಳ್ಳಬಹುದು.
ಸೆಮಿಫೈನಲ್ನಲ್ಲಿ ಭಾರತವು ಬೆಲ್ಜಿಯಂ ವಿರುದ್ಧ ಸೋತಿತ್ತು. ಎರಡನೇ ಸೆಮಿಯಲ್ಲಿ ಜರ್ಮನಿ ತಂಡವು ಆಸ್ಟ್ರೇಲಿಯಾ ಎದುರು ಮಣಿದಿತ್ತು.
ಜರ್ಮನಿ ತಂಡವು ರಿಯೊ ಒಲಿಂಪಿಕ್ಸ್ನಲ್ಲಿ ಕಂಚು ಗೆದ್ದಿತ್ತು. ಮನಪ್ರೀತ್ ಸಿಂಗ್ ನಾಯಕತ್ವ ತಂಡವು ರಕ್ಷಣಾ ತಂತ್ರಗಳಲ್ಲಿ ಮೇಲುಗೈ ಸಾಧಿಸಿದರೆ ಪಂದ್ಯ ಜಯಿಸುವುದು ಸುಲಭವಾಗಲಿದೆ. ನಾಲ್ಕರ ಘಟ್ಟದ ಕೊನೆಯ ಕ್ವಾರ್ಟರ್ನಲ್ಲಿ ಬಹಳಷ್ಟು ಪೆನಾಲ್ಟಿ ಕಾರ್ನರ್ಗಳನ್ನು ಬಿಟ್ಟಿದ್ದ ಭಾರತ ಸೋಲಿನ ಕಹಿ ಅನುಭವಿಸಿತ್ತು. ಆ ಲೋಪವನ್ನು ಇಲ್ಲಿ ತಿದ್ದಿಕೊಳ್ಳುವ ಅನಿವಾರ್ಯತೆ ಇದೆ.
ಗುಂಪು ಹಂತದಲ್ಲಿ ಅಮೋಘ ಆಡಿರುವ ಹಾರ್ದಿಕ್ ಸಿಂಗ್, ರೂಪಿಂದರ್ ಪಾಲ್ ಸಿಂಗ್, ಗುರ್ಜಂತ್ ಸಿಂಗ್ ಅವರು ತಮ್ಮ ಗೋಲು ಗಳಿಕೆಯನ್ನು ಮುಂದುವರಿಸುವ ನಿರೀಕ್ಷೆ ಇದೆ. ಗೋಲ್ಕೀಪರ್ ಪಿ.ಆರ್. ಶ್ರೀಜೇಶ್ ಅವರು ತಮ್ಮ ಗಟ್ಟಿತನವನ್ನು ಎಲ್ಲ ಪಂದ್ಯಗಳಲ್ಲಿಯೂ ತೋರಿಸಿದ್ದಾರೆ. ಅವರಿಗೆ ರಕ್ಷಣಾ ವಿಭಾಗದ ಉತ್ತಮ ಜೊತೆ ದೊರೆತರೆ ಎದುರಾಳಿ ತಂಡವು ಪರದಾಡುವುದು ಖಚಿತ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.