ADVERTISEMENT

ಇಂಡಿಯಾ ಓಪನ್‌: ಕಿಡಂಬಿ ಸೇರಿದಂತೆ 7 ಮಂದಿಗೆ ಕೋವಿಡ್, ಟೂರ್ನಿಯಿಂದ ಹೊರಕ್ಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಜನವರಿ 2022, 8:11 IST
Last Updated 13 ಜನವರಿ 2022, 8:11 IST
ಕಿಡಂಬಿ ಶ್ರೀಕಾಂತ್
ಕಿಡಂಬಿ ಶ್ರೀಕಾಂತ್    

ನವದೆಹಲಿ: ಪ್ರತಿಷ್ಠಿತ ಇಂಡಿಯಾ ಓಪನ್ 2022 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾಗವಹಿಸಿದ ಭಾರತದ ಕಿಡಂಬಿ ಶ್ರೀಕಾಂತ್ ಸೇರಿದಂತೆ ಏಳು ಮಂದಿ ಆಟಗಾರರಿಗೆಕೋವಿಡ್ ದೃಢಪಟ್ಟಿವೆ. ಈ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಟೂರ್ನಿಯಿಂದಲೇ ನಿರ್ಗಮನದ ಹಾದಿ ಹಿಡಿದಿದ್ದಾರೆ.

ಡಬಲ್ಸ್ ಆಟಗಾರ್ತಿ ಅಶ್ವಿನಿ ಪೊನ್ನಪ್ಪ, ರಿತಿಕಾ ರಾಹುಲ್ ಥಕ್ಕರ್, ತ್ರಿಷಾ ಜೌಲಿ, ಮಿಥುನ್ ಮಂಜುನಾಥ್, ಸಿಮ್ರಾನ್ ಸಿಂಘಿ ಹಾಗೂ ಖುಷಿ ಗುಪ್ತಾ ಕೊರೊನಾ ಸೋಂಕು ತಗುಲಿದ ಇತರೆ ಬ್ಯಾಡ್ಮಿಂಟನ್ ಆಟಗಾರರಾಗಿದ್ದಾರೆ.

ಕೋವಿಡ್ ನಿಯಮಾವಳಿಯಂತೆ ಎಲ್ಲ ಆಟಗಾರರಲ್ಲೂ ಪ್ರತ್ಯೇಕವಾಸದಲ್ಲಿರುವಂತೆ ಸೂಚಿಸಲಾಗಿದೆ. ಆರ್‌ಟಿ-ಪಿಸಿಆರ್ ಪರೀಕ್ಷೆಯಲ್ಲಿ ನೆಗೆಟಿವ್ ಬಂದ ಬಳಿಕ ನವದೆಹಲಿಯಿಂದ ತಮ್ಮ ತಮ್ಮ ನಗರಗಳಿಗೆ ಹಿಂತಿರುಗಲು ಅನುಮತಿ ನೀಡಲಾಗುತ್ತದೆ.

ADVERTISEMENT

ಕ್ರೀಡಾಪಟುಗಳಲ್ಲಿ ಕೋವಿಡ್ ದೃಢಪಟ್ಟಿರುವ ಹೊರತಾಗಿಯೂ ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಸೂಪರ್ 500 ಚಾಂಪಿಯನ್‌ಷಿಪ್ ನಿಗದಿತ ವೇಳಾಪಟ್ಟಿಯಂತೆ ಮುಂದುವರಿಸಲು ಸಂಘಟಕರು ನಿರ್ಧರಿಸಿದ್ದಾರೆ.

ಅನಿವಾರ್ಯವಾಗಿ ಹಿಂದೆ ಸರಿದಿರುವ ಏಳು ಬ್ಯಾಡ್ಮಿಂಟನ್ ಆಟಗಾರರಿಗೆಬದಲಿ ಆಟಗಾರರನ್ನು ಘೋಷಿಸಲಾಗಿಲ್ಲ. ಅಲ್ಲದೆ ಅವರ ಎದುರಾಳಿಗಳಿಗೆ ಮುಂದಿನ ಸುತ್ತಿಗೆ ವಾಕ್ಓವರ್ ಲಭಿಸಿದೆ.

ಈ ಆಟಗಾರರೆಲ್ಲ ಮಂಗಳವಾರ ನಿಯಮಿತ ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದರು. ಗುರುವಾರ ಪರೀಕ್ಷಾ ವರದಿ ಪಾಸಿಟಿವ್ ಆಗಿದೆ.

28ರ ಹರೆಯದ ಶ್ರೀಕಾಂತ್ ಕಳೆದ ವರ್ಷಾಂತ್ಯದಲ್ಲಿ ನಡೆದ ಬಿಡಬ್ಲ್ಯುಎಫ್ ವರ್ಲ್ಡ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.