ಬಾಲಿ: ವೀರೋಚಿತ ಹೋರಾಟ ತೋರಿದ ಭಾರತದ ಲಕ್ಷ್ಯ ಸೇನ್ ಅವರು ಇಂಡೊನೇಷ್ಯಾ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಿಯ ಮೊದಲ ಸುತ್ತಿನಲ್ಲೇ ಸೋಲು ಅನುಭವಿಸಿದರು. ಪರುಪಳ್ಳಿ ಕಶ್ಯಪ್ ಅವರಿಗೂ ಮೊದಲ ಸುತ್ತಿನ ತಡೆ ದಾಟಲು ಸಾಧ್ಯವಾಗಲಿಲ್ಲ.
ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಹಣಾಹಣಿಯಲ್ಲಿ 21 ವರ್ಷದ ಲಕ್ಷ್ಯ 21-23, 15-21ರಿಂದ ಅಗ್ರಶ್ರೇಯಾಂಕದ ಆಟಗಾರ, ಜಪಾನ್ನ ಕೆಂಟೊ ಮೊಮೊಟಾ ಎದುರು ಮಣಿದರು.
ಎರಡು ಬಾರಿಯ ವಿಶ್ವ ಚಾಂಪಿಯನ್ ಮೊಮೊಟಾ 53 ನಿಮಿಷಗಳಲ್ಲಿ ಪಂದ್ಯವನ್ನು ತಮ್ಮದಾಗಿಸಿಕೊಂಡರು.
ಮೊದಲ ಸುತ್ತಿನ ಇನ್ನೊಂದು ಸೆಣಸಾಟದಲ್ಲಿ ಪರುಪಳ್ಳಿ ಕಶ್ಯಪ್ 11-21, 14-21ರಿಂದ ಸಿಂಗಪುರದ ಲೋಹ್ ಕೀನ್ ಯಿವ್ ಎದುರು ಎಡವಿದರು.
ಪುರುಷರ ಡಬಲ್ಸ್ ವಿಭಾಗದಲ್ಲಿ ಎಂ.ಆರ್. ಅರ್ಜುನ್– ಧೃವ ಕಪಿಲ ಜೋಡಿಯೂ ನಿರಾಸೆ ಅನುಭವಿಸಿದರು. ಮೊದಲ ಸುತ್ತಿನ ಹಣಾಹಣಿಯಲ್ಲಿ ಇವರು 20-22, 13-21ರಿಂದ ಕೊರಿಯಾದ ಸೋಲ್ಗಿವ್ ಮತ್ತು ಕಿಮ್ ವೊನ್ಹೊ ಎದುರು ಸೋತರು. ಮಿಶ್ರ ಡಬಲ್ಸ್ನಲ್ಲಿ ವೆಂಕಟ್ ಗೌರವ್ ಪ್ರಸಾದ್– ಜೂಹಿ ದೇವಾಂಗನ್ ಜೋಡಿಯು 12-21, 4-21ರಿಂದ ಜರ್ಮನಿಯ ಜೋನ್ಸ್ ರಾಲ್ಫಿ ಜಾನ್ಸನ್– ಲಿಂಡಾ ಎಫ್ಲರ್ ಎದುರು ಸೋಲನುಭವಿಸಿತು.
ಬಿಡಬ್ಲ್ಯುಎಫ್ ಅಥ್ಲೀಟ್ಗಳ ಸಮಿತಿ ಚುನಾವಣೆಗೆ ಸಿಂಧು ಸ್ಪರ್ಧೆ
ನವದೆಹಲಿ: ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಅವರು ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ (ಬಿಡಬ್ಲ್ಯುಎಫ್) ಅಥ್ಲೀಟ್ಗಳ ಸಮಿತಿಯ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.
ಸ್ಪೇನ್ನಲ್ಲಿ ನಡೆಯುವ ವಿಶ್ವಚಾಂಪಿಯನ್ಷಿಪ್ ವೇಳೆ ಡಿಸೆಂಬರ್ 17ರಂದು ಈ ಚುನಾವಣೆ ನಡೆಯಲಿದೆ. ಸದ್ಯ ಇಂಡೊನೇಷ್ಯಾದ ಬಾಲಿಯಲ್ಲಿ ನಡೆಯುತ್ತಿರುವ ಸೂಪರ್ 1000 ಟೂರ್ನಿಯಲ್ಲಿ ಸಿಂಧು ಆಡುತ್ತಿದ್ದಾರೆ.
ಆರು ಸ್ಥಾನಗಳಿಗಾಗಿ ಒಂಬತ್ತು ಮಂದಿ ನಾಮಪತ್ರ ಸಲ್ಲಿಸಿದ್ದು, ಅದರಲ್ಲಿ ಸಿಂಧು ಕೂಡ ಒಬ್ಬರಾಗಿದ್ದಾರೆ.
2017ರಲ್ಲಿ ಮೊದಲ ಬಾರಿಗೆ ಆಯ್ಕೆಯಾಗಿದ್ದ ಸಿಂಧು, ಎರಡನೇ ಬಾರಿ ಚುನಾವಣೆಗೆ ಸ್ಪರ್ಧಿಸಿರುವ ಅಥ್ಲೀಟ್ಗಳ ಸಮಿತಿಯ ಏಕೈಕ ಸದಸ್ಯೆಯಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.