ADVERTISEMENT

ಹಾಫ್‌ ಮ್ಯಾರಥಾನ್‌ ರಾಮಚಂದ್ರ ಪ್ರಥಮ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2019, 20:00 IST
Last Updated 4 ಆಗಸ್ಟ್ 2019, 20:00 IST
ವಿಜಯಪುರದಲ್ಲಿ ಭಾನುವಾರ ನಡೆದ ಸ್ಪರ್ಧೆಯ ನೋಟ
ವಿಜಯಪುರದಲ್ಲಿ ಭಾನುವಾರ ನಡೆದ ಸ್ಪರ್ಧೆಯ ನೋಟ   

ವಿಜಯಪುರ: ಪುಣೆಯ ಮಿಲಿಟರಿ ಬೆಟಾ ಲಿನ್‌ನಲ್ಲಿ ತರಬೇತಿ ಪಡೆಯುತ್ತಿರುವ ರಾಮಚಂದ್ರ ಮತ್ತು ಕೀನ್ಯಾದ ಹನ್ನಹ ವಾಂಜಿರು ಗೆತೆರು ಅವರು ಭಾನುವಾರ ಇಲ್ಲಿ ನಡೆದ ‘ಗೋಳಗುಮ್ಮಟ ಹಾಫ್‌ ಮ್ಯಾರಥಾನ್‌’ನಲ್ಲಿ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದರು.

ವೃಕ್ಷ ಅಭಿಯಾನ ಟ್ರಸ್ಟ್‌ ಆಯೋ ಜಿಸಿದ್ದ ಸ್ಪರ್ಧೆಯಲ್ಲಿ 12 ಸಾವಿರ ಓಟ ಗಾರರು ಪಾಲ್ಗೊಂಡಿದ್ದರು. ಒಟ್ಟು ಐದು ವಿಭಾಗಗಳಲ್ಲಿ ಸ್ಪರ್ಧೆಗಳ ಜರುಗಿದವು.

21 ಕಿ.ಮೀ. ದೂರದ ಗುರಿಯನ್ನು ರಾಮಚಂದ್ರ ಒಂದು ಗಂಟೆ 15 ನಿಮಿಷ 16 ಸೆಕೆಂಡ್‌ಗಳಲ್ಲಿ ಮುಟ್ಟಿದರೆ, ಕೀನ್ಯಾದ ಹೆನ್ರಿ ಕಿಪರೊನೊ (‌ಕಾಲ: 1ಗಂಟೆ,15ನಿ,55ಸೆ.) ದ್ವಿತೀಯ ಸ್ಥಾನ ಗಳಿಸಿದರು. ಮೂರನೇ ಸ್ಥಾನ ಭಾರತೀಯ ಸೇನೆಯಲ್ಲಿರುವ ತೀರ್ಥ ಪೂರ್ಣ (1:16.05ಸೆ.) ಪಾಲಾಯಿತು.

ADVERTISEMENT

ಮಹಿಳೆಯರ ವಿಭಾಗದಲ್ಲಿ ವಾಂಜಿರು ಒಂದು ಗಂಟೆ 28 ನಿಮಿಷ 40 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ದ್ವಿತೀಯ ಸ್ಥಾನ ಮುಂಬೈನ ಸಾಯಿಗೀತಾ ವಿಷ್ಣು ನಾಯಕ (1:32.25ಸೆ.) ಮತ್ತು ತೃತೀಯ ಸ್ಥಾನ ಇಥಿಯೋಪಿಯಾದ ಮೆಲ್ಕಂ ಮೆಕ್ಯುನೆನ್‌ (1:34.55ಸೆ.) ಪಡೆದರು. ಮೊದಲ ಮೂರು ಸ್ಥಾನ ಪಡೆದವರಿಗೆ ಕ್ರಮವಾಗಿ ₹ 1 ಲಕ್ಷ, ₹ 75 ಸಾವಿರ ಮತ್ತು ₹ 50 ಸಾವಿರ ಬಹುಮಾನ ನೀಡಲಾಯಿತು.

ಪುರುಷರ 10 ಕಿ.ಮೀ. ವಿಭಾಗದ ಸ್ಪರ್ಧೆಯಲ್ಲಿ ವಿರಾಜಪೇಟೆ ತಾಲ್ಲೂಕಿನ ಟಿ. ಶೆಟ್ಟಿಹಳ್ಳಿ ಗ್ರಾಮದ ಎ.ಬಿ. ಬೆಳ್ಳಿಯಪ್ಪ 28 ನಿಮಿಷ 01 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಪ್ರಥಮ ಸ್ಥಾನ ಗಳಿಸಿದರು. ಇಥಿಯೋಪಿಯಾದ ಮಿಕಿಯಾಸ್‌ ಯೆಮಲೆಮು (ಕಾಲ: 28.39ಸೆ.) ದ್ವಿತೀಯ ಮತ್ತು ಭಾರತೀಯ ಸೇನೆಯ ಉದ್ಯೋಗಿ ವಿನೀತ್‌ ಮಲೀಕ್‌ (28.54ಸೆ.) ತೃತೀಯ ಸ್ಥಾನ ಗಳಿಸಿದರು.

ಮಹಿಳೆಯರ ವಿಭಾಗದಲ್ಲಿ ಆಳ್ವಾಸ್‌ ಮೂಡಬಿದಿರೆ ಕಾಲೇಜಿನ ಚೈತ್ರಾ ದೇವಾಡಿಗ 35 ನಿಮಿಷ 31 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಪ್ರಥಮ ಸ್ಥಾನ ಪಡೆದರು.

ಮೈಸೂರಿನ ತಿಪ್ಪವ್ವ ಸಣ್ಣಕ್ಕಿ (ಕಾಲ: 36.56ಸೆ.) ದ್ವಿತೀಯ, ಬೆಂಗಳೂರಿನ ಜೆಪಿಎನ್‌ ಕ್ರೀಡಾ ವಸತಿ ಶಾಲೆಯ ಮಲ್ಲೇಶ್ವರಿ ರಾಮು ರಾಠೋಡ (36.58ಸೆ.) ತೃತೀಯ ಸ್ಥಾನ ಗಳಿಸಿದರು. ಇವರು ಮೂವರಿಗೆ ಕ್ರಮವಾಗಿ ₹ 50 ಸಾವಿರ, ₹ 25 ಸಾವಿರ ಮತ್ತು ₹ 10 ಸಾವಿರ ಬಹುಮಾನ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.