ADVERTISEMENT

ಪ್ರೊ ಕಬಡ್ಡಿ ಟೂರ್ನಿ: ಬೆಂಗಾಲ್‌ಗೆ ರೋಚಕ ಜಯ; ಬುಲ್ಸ್‌ಗೆ ನಿರಾಶೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2022, 19:30 IST
Last Updated 20 ಜನವರಿ 2022, 19:30 IST
   

ಬೆಂಗಳೂರು: ಪವನ್ ಶೆರಾವತ್ ಮತ್ತೆ ಮಿಂಚಿದರು. ಆದರೆ ಅವರ ಆಟಕ್ಕೆ ಸೆಡ್ಡು ಹೊಡೆದ ಮಣಿಂದರ್ ಸಿಂಗ್ ಚಾಣಾಕ್ಷ ಆಟದಿಂದಾಗಿ ಬೆಂಗಾಲ್ ವಾರಿಯರ್ಸ್‌ ತಂಡವು ಬೆಂಗಳೂರು ಬುಲ್ಸ್‌ ವಿರುದ್ಧ ರೋಚಕ ಜಯ ಸಾಧಿಸಿತು.

ವೈಟ್‌ಫೀಲ್ಡ್‌ನ ಗ್ರ್ಯಾಂಡ್ ಶೆರಟಾನ್ ಹೋಟೆಲ್‌ನಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಟೂರ್ನಿಯ ಪಂದ್ಯದಲ್ಲಿ ಬುಲ್ಸ್ ತಂಡವು 39–40 ರಿಂದ ಬೆಂಗಾಲ್ ವಿರುದ್ಧ ಸೋತಿತು.

ಬುಲ್ಸ್‌ ನಾಯಕ ಪವನ್ 13 ಪಾಯಿಂಟ್ಸ್‌ ಗಳಿಸಿದರು. ರೇಡರ್ ಚಂದನ್ ರಂಜೀತ್ ಎಂಟು ಮತ್ತು ಸೌರಭ್ ನಂದಾಲ್ ನಾಲ್ಕು ಅಂಕ ಗಳಿಸಿದರು.

ADVERTISEMENT

ಬೆಂಗಾಲ್ ತಂಡದ ನಾಯಕ ಮಣಿಂದರ್ ಒಂಬತ್ತು ಮತ್ತು ಸುಖೇಶ್ ಹೆಗಡೆ ಏಳು ಅಂಕ ಗಳಿಸಿ ಮಿಂಚಿದರು.

ಉಭಯ ತಂಡಗಳು ಆರಂಭದಿಂದಲೂ ತುರುಸಿನ ಪೈಪೋಟಿ ನಡೆಸಿದವು. ಅರ್ಧ ವಿರಾಮದ ವೇಳೆಗೂ ಬೆಂಗಾಲ್ ತಂಡವು ಕೇವಲ ಒಂದು ಅಂಕದ ಅಂತರದಿಂದ (14–13) ಮುನ್ನಡೆಯಲ್ಲಿತ್ತು. ಕೊನೆಯವರೆಗೂ ಜಿದ್ದಾಜಿದ್ದಿನ ಆಟ ನಡೆಯಿತು.

ಗುಜರಾತ್‌ಗೆ ರೋಚಕ ಜಯ: ರೇಡರ್ ಮಹೇಂದ್ರ ರಜಪೂತ್ ಮತ್ತು ರಾಕೇಶ್ ನರ್ವಾಲ್ ಅವರ ಅಮೋಘ ಆಟದ ಬಲದಿಂದ ಗುಜರಾತ್ ಜೈಂಟ್ಸ್ ತಂಡವು ತಮಿಳ್ ತಲೈವಾಸ್ ಎದುರು ಎರಡು ಅಂಕಗಳ ಅಂತರದ ರೋಚಕ ಜಯ ಸಾಧಿಸಿತು.

ದಿನದ ಮೊದಲ ಪಂದ್ಯದಲ್ಲಿ ಮಹೆಂದ್ರ (9) ಮತ್ತು ರಾಕೇಶ್ (6) ಮಿಂಚಿದರು. ಅದರಿಂದಾಗಿ ಗುಜರಾತ್ ತಂಡವು 37–35ರಿಂದ ತಮಿಳ್‌ ತಂಡವನ್ನು ಮಣಿಸಿತು.

ಇದರಿಂದಾಗಿ ತಮಿಳ್ ತಂಡದ ಮಂಜೀತ್ (12) ಅವರ ಅಮೋಘ ಆಟವು ವ್ಯರ್ಥವಾಯಿತು. ರೇಡರ್ ಅಜಿಂಕ್ಯ ಪವಾರ್ ಹತ್ತು ಅಂಕ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.