ADVERTISEMENT

ಒಲಿಂಪಿಕ್ಸ್‌: ಭಾರತ ತಂಡದೊಂದಿಗೆ ಪ್ರಯಾಣಿಸದಿರಲು ಕೋಚ್ ಗೋಪಿಚಂದ್ ನಿರ್ಧಾರ

ಸಾಯಿಪ್ರಣಿತ್ ಟ್ರೇನರ್ ಏಗಸ್ ಡ್ವಿ ಸಂತೊಸಾಗೆ ಸ್ಥಾನ

ಪಿಟಿಐ
Published 6 ಜುಲೈ 2021, 19:31 IST
Last Updated 6 ಜುಲೈ 2021, 19:31 IST
ಪಿ.ವಿ. ಸಿಂಧು ಮತ್ತು ಪಿ. ಗೋಪಿಚಂದ್
ಪಿ.ವಿ. ಸಿಂಧು ಮತ್ತು ಪಿ. ಗೋಪಿಚಂದ್   

ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ಗೆ ತೆರಳಲಿರುವ ಭಾರತ ಬ್ಯಾಡ್ಮಿಂಟನ್ ತಂಡದೊಂದಿಗೆ ಪ್ರಯಾಣ ಮಾಡದಿರಲು ರಾಷ್ಟ್ರೀಯ ಮುಖ್ಯ ಕೋಚ್ ಪಿ. ಗೋಪಿಚಂದ್ ನಿರ್ಧರಿಸಿದ್ದಾರೆ.

ಆಟಗಾರ ಬಿ. ಸಾಯಿ ಪ್ರಣೀತ್ ಅವರ ಸಿಂಗಲ್ಸ್‌ ಬ್ಯಾಡ್ಮಿಂಟನ್ ಟ್ರೇನರ್, ಇಂಡೋನೆಷ್ಯಾದ ಏಗಸ್ ದ್ವಿ ಸಂತೊಸಾಗೆ ತಂಡದೊಂದಿಗೆ ತೆರಳಲು ಗೋಪಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

2012ರಲ್ಲಿ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗಳಿಸಿದ್ದ ಸೈನಾ ನೆಹ್ವಾಲ್ ಮತ್ತು ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ಪಿ.ವಿ. ಸಿಂಧು ಅವರಿಗೆ ಗೋಪಿ ಮಾರ್ಗದರ್ಶನ ನೀಡಿದ್ದರು.

ADVERTISEMENT

ಈ ಬಾರಿ ಬ್ಯಾಡ್ಮಿಂಟನ್ ತಂಡದೊಂದಿಗೆ ತೆರಳಲು ನೆರವು ಸಿಬ್ಬಂದಿಯಲ್ಲಿ ಐದು ಜನಕ್ಕೆ ಮಾತ್ರ ಅವಕಾಶ ನೀಡಲು ಭಾರತ ಒಲಿಂಪಿಕ್ ಸಂಸ್ಥೆ (ಐಒಸಿ) ನಿರ್ಧರಿಸಿದೆ. ಅದರಿಂದಾಗಿ ತಂಡದಲ್ಲಿ ಮೂವರು ಕೋಚ್ ಮತ್ತು ಇಬ್ಬರು ಫಿಸಿಯೊ ಇದ್ದಾರೆ.

ಗಚ್ಚಿಬೌಳಿ ಕ್ರೀಡಾಂಗಣದಲ್ಲಿ ಸಿಂಧು ಅವರು ಕೊರಿಯಾದ ಕೋಚ್ ಥೇ ಸಂಗ್ ಪಾರ್ಕ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ. ಪ್ರಣಿತ್ ಅವರಿಗೆ ಸಂತೊಸಾ ಮಾರ್ಗದರ್ಶನ ನೀಡುತ್ತಿದ್ದಾರೆ. ಚಿರಾಗ್ ಮತ್ತು ಸಾತ್ವಿಕ್ ಅವರಿಗೆ ಡೆನ್ಮಾರ್ಕ್‌ನ ಮಥಾಯಿಸ್ ಬೊಯ್ ಮಾರ್ಗದರ್ಶನ ನೀಡುತ್ತಿದ್ದಾರೆ.

‘ಲಭ್ಯವಿದ್ದ ಒಂದು ಕೋಟಾದಲ್ಲಿ ಸಂತೊಸಾ ಅವರು ತೆರಳಲು ಗೋಪಿಚಂದ್ ಅವಕಾಶ ಮಾಡಿಕೊಟ್ಟಿದ್ದಾರೆ‘ ಎಂದು ಭಾರತ ಬ್ಯಾಡ್ಮಿಂಟನ್ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಜಯ್ ಸಿಂಘಾನಿಯಾ ತಿಳಿಸಿದ್ದಾರೆ.

ಇದರಿಂದಾಗಿ ಭಾರತ ತಂಡದಲ್ಲಿ ಒಟ್ಟು ಒಂಬತ್ತು ಮಂದಿ ತೆರಳುತ್ತಿದ್ದಾರೆ. ಅದರಲ್ಲಿ ಮೂವರು ವಿದೇಶಿ ಕೋಚ್‌ಗಳು, ಫಿಸಿಯೊಗಳಾದ ಸುಮಾಂಶ್ ಸಿವಾಲೆಂಕಾ ಮತ್ತು ಎವಾಗ್ಲಿನಾ ಬೆದಂ ಮತ್ತು ನಾಲ್ವರು ಆಟಗಾರರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.