ADVERTISEMENT

ಕ್ರೀಡಾ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಸೆಹ್ವಾಗ್‌, ಸರ್ದಾರ್ ಸಿಂಗ್

ಪಿಟಿಐ
Published 31 ಜುಲೈ 2020, 12:22 IST
Last Updated 31 ಜುಲೈ 2020, 12:22 IST
ವೀರೇಂದ್ರ ಸೆಹ್ವಾಗ್
ವೀರೇಂದ್ರ ಸೆಹ್ವಾಗ್   

ನವದೆಹಲಿ:ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ಸ್ಫೋಟಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಮತ್ತು ಹಾಕಿ ದಿಗ್ಗಜ ಸರ್ದಾರ್ ಸಿಂಗ್ ಅವರನ್ನು ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳ ಆಯ್ಕೆ ಸಮಿತಿಗೆ ಶುಕ್ರವಾರ ಸೇರ್ಪಡೆಗೊಳಿಸಲಾಗಿದೆ. ಕೇಂದ್ರ ಕ್ರೀಡಾ ಸಚಿವಾಲಯ ಈ ವಿಷಯವನ್ನು ತಿಳಿಸಿದೆ.

ಕಳೆದ ವರ್ಷದಂತೆಯೇ ಈ ಬಾರಿಯೂ ಸಚಿವಾಲಯವು ಕ್ರೀಡಾಪಟುಗಳ ಮತ್ತು ಕೋಚ್‌ಗಳ ಆಯ್ಕೆಗೆ ಒಂದೇ ಸಮಿತಿಯನ್ನು ರಚಿಸಿದ್ದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮುಕುಂದಕಂ ಶರ್ಮಾ ಅವರು ಸಮಿತಿಯ ಮುಖ್ಯಸ್ಥರಾಗಿದ್ದಾರೆ. ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗಳಿಸಿರುವ ದೀಪಾ ಮಲಿಕ್ ಅವರೂ ಸಮಿತಿಯಲ್ಲಿದ್ದಾರೆ. ಭಾರತ ಕ್ರೀಡಾ ಪ್ರಾಧಿಕಾರದ ಮಹಾನಿರ್ದೇಶಕ ಸಂದೀಪ್ ಪ್ರಧಾನ್, ಜಂಟಿ ಕಾರ್ಯದರ್ಶಿ ಎಲ್‌.ಎಸ್‌.ಸಿಂಗ್ ಮತ್ತು ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಯೋಜನೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ್ ರಾಜಗೋಪಾಲನ್ ಕೂಡ ಇದ್ದಾರೆ.

‘ಈ ಬಾರಿಯೂ ಒಂದೇ ಸಮಿತಿಯ ಮೂಲಕ ಪ್ರಶಸ್ತಿಗೆ ಆಯ್ಕೆ ಮಾಡಲು ನಿರ್ಧರಿಸಲಾಗಿದೆ. ಸಮಿತಿಗಳು ಹೆಚ್ಚಾದರೆ ಗೊಂದಲ ಮತ್ತು ಸಮಸ್ಯೆಗಳು ಹೆಚ್ಚಾಗುವುದೇ ಹೊರತು ಆಯ್ಕೆ ಪ್ರಕ್ರಿಯೆ ಸುಸೂತ್ರವಾಗಿ ನಡೆಯದು’ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.

ADVERTISEMENT

ಮಾಜಿ ಟೇಬಲ್ ಟೆನಿಸ್ ಆಟಗಾರ್ತಿ ಮೊನಾಲಿಸಾ ಬರುವಾ ಮೆಹ್ತಾ, ಬಾಕ್ಸರ್‌ ವೆಂಕಟೇಶನ್ ದೇವರಾಜನ್, ಕ್ರೀಡಾ ವೀಕ್ಷಕ ವಿವರಣೆಕಾರ ಮನೀಷ್ ಬಟಾವಿಯಾ, ಕ್ರೀಡಾ ಪತ್ರಕರ್ತ ಆಲೋಕ್ ಸಿನ್ಹಾ ಮತ್ತು ನೀರು ಭಾಟಿಯಾ ಅವರೂ ಸಮಿತಿಯಲ್ಲಿದ್ದಾರೆ. ಹಾಕಿ ದಂತಕತೆ ಧ್ಯಾನ್ ಚಂದ್ ಅವರ ಜನ್ಮದಿನವಾದ ಆಗಸ್ಟ್ 29ರಂದು ಕ್ರೀಡಾ ಪ್ರಶಸ್ತಿಗಳನ್ನು ನೀಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.