ನವದೆಹಲಿ: ಪ್ರಮುಖ ಬ್ಯಾಡ್ಮಿಂಟನ್ ಪಟುಗಳ ಅಭ್ಯಾಸಕ್ಕೆ ಭಾರತ ಕ್ರೀಡಾ ಪ್ರಾಧಿಕಾರ ಭಾನುವಾರ ಹಸಿರು ನಿಶಾನೆ ತೋರಿದ್ದು ಹೈದರಾಬಾದ್ನ ಪುಲ್ಲೇಲ ಗೋಪಿಚಂದ್ ಅಕಾಡೆಮಿಯಲ್ಲಿ ಸೋಮವಾರದಿಂದ ಅಭ್ಯಾಸ ನಡೆಯಲಿದೆ.
ಕೋವಿಡ್ ಸಂಬಂಧಿಸಿದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿ ಸೆಪ್ಟೆಂಬರ್ 27ರ ವರೆಗೆ ಅಭ್ಯಾಸ ನಡೆಯಲಿದ್ದು ಸೈನಾ ನೆಹ್ವಾಲ್ ಮತ್ತು ಕಿದಂಬಿ ಶ್ರೀಕಾಂತ್, ಸಾಯ್ ಪ್ರಣೀತ್, ಪಿ,ಕಶ್ಯಪ್, ಸಿಕ್ಕಿ ರೆಡ್ಡಿ ಮತ್ತು ಅಶ್ವಿನಿ ಪೊನ್ನಪ್ಪ ಕಣಕ್ಕೆ ಇಳಿಯಲಿರುವ ಪ್ರಮುಖರು. ಏಳು ಮಂದಿ ಕೋಚ್ಗಳು ಮತ್ತು ನಾಲ್ವರು ನೆರವು ಸಿಬ್ಬಂದಿಯೂ ಇರುತ್ತಾರೆ.
ಅಕ್ಟೋಬರ್ ಮೂರರಿಂದ ಡೆನ್ಮಾರ್ಕ್ನಲ್ಲಿ ನಡೆಯಲಿರುವ ಥಾಮಸ್ ಮತ್ತು ಉಬರ್ ಕಪ್ ಟೂರ್ನಿಗಾಗಿ 26 ಆಟಗಾರರನ್ನು ಸಿದ್ಧಗೊಳಿಸುವುದು ಶಿಬಿರದ ಪ್ರಮುಖ ಉದ್ದೇಶ.
ಶಿಬಿರಕ್ಕೆ ಬರುವ ಎಲ್ಲರೂ ಆರ್ಟಿ–ಪಿಸಿಆರ್ ಪರೀಕ್ಷೆಗೆ ಕಡ್ಡಾಯವಾಗಿ ಒಳಗಾಗಬೇಕು. ನೆಗೆಟಿವ್ ವರದಿ ಬಂದಿದ್ದರೆ ಮಾತ್ರ ಅಕಾಡೆಮಿಯ ಒಳಗೆ ಪ್ರವೇಶ ನೀಡಲಾಗುವುದು. ಅಕಾಡೆಮಿಯ ಒಳಗೆ ಪ್ರವೇಶಿಸಿದ ನಂತರ ಪ್ರತ್ಯೇಕವಾಸದಲ್ಲಿ ಇರಬೇಕು. ಆರನೇ ದಿನ ಮತ್ತೊಂದು ಸುತ್ತಿನ ಪರೀಕ್ಷೆಗೆ ಒಳಗಾಗಬೇಕು‘ ಎಂದು ಸಾಯ್ ಪ್ರಕಟಣೆ ತಿಳಿಸಿದೆ.
ಬೆಂಗಳೂರು ಸಾಯ್ ಕೇಂದ್ರದಲ್ಲಿ ಕೋವಿಡ್ ಸೋಂಕಿಗೆ ಒಳಗಾದ ಹಾಕಿ ಆಟಗಾರರಿಗೆ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಲು ನೆರವಾದ ಸಾಯ್ ಸಹಾಯಕ ನಿರ್ದೇಶಕಿ ಮೋನಿಕಾ ಅವರನ್ನು ಗೋಪಿಚಂದ್ ಅಕಾಡೆಮಿಗೆ ಕಳುಹಿಸಲಾಗಿದ್ದು ಅಲ್ಲಿ ಅವರು ಆಟಗಾರರು ಮತ್ತು ಸಿಬ್ಬಂದಿಗೆ ತರಬೇತಿ ಕ್ವಾರಂಟೈನ್ ಮತ್ತಿತರ ವಿಷಯಗಳಲ್ಲಿ ನೆರವು ನೀಡಲಿದ್ದಾರೆ.
’ತರಬೇತಿ ಶಿಬಿರ ಆರಂಭಿಸಿರುವುದು ಖುಷಿ ನೀಡಿದೆ. ಬ್ಯಾಡ್ಮಿಂಟನ್ ಕಣಕ್ಕೆ ಇಳಿಯಲು ಕಾತರನಾಗಿದ್ದೇನೆ‘ ಎಂದು ಕಿದಂಬಿ ಶ್ರೀಕಾಂತ್ ತಿಳಿಸಿದರು.
ಶಿಬಿರದ ಬಗ್ಗೆ ಮಾತನಾಡಿದ ಸಿಕ್ಕಿ ರೆಡ್ಡಿ ’ಎಲ್ಲರೂ ಜೊತೆಗೂಡಿ ಅಭ್ಯಾಸ ಮಾಡುವುದರಿಂದ ನಮ್ಮ ಬಲ ಹೆಚ್ಚಲಿದೆ‘ ಎಂದು ಅಭಿಪ್ರಾಯಪಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.