ADVERTISEMENT

ಕುಸ್ತಿ ಫೆಡರೇಷನ್‌ ಅಧ್ಯಕ್ಷ ಸಂಜಯ್ ಸಿಂಗ್ ವಿರುದ್ಧ ಕ್ರಮ: ಕ್ರೀಡಾ ಸಚಿವಾಲಯ

ಪಿಟಿಐ
Published 30 ಜನವರಿ 2024, 23:30 IST
Last Updated 30 ಜನವರಿ 2024, 23:30 IST
ಸಂಜಯ್ ಕುಮಾರ್ ಸಿಂಗ್
ಸಂಜಯ್ ಕುಮಾರ್ ಸಿಂಗ್   

ನವದೆಹಲಿ: ಅಮಾನತುಗೊಂಡಿರುವ ಭಾರತ ಕುಸ್ತಿ ಫೆಡರೇಷನ್‌ ಅಧ್ಯಕ್ಷ ಸಂಜಯ್ ಸಿಂಗ್ ಅವರು ಸರ್ಕಾರದ ಮಾನ್ಯತೆಗೆ ಸಂಬಂಧಿಸಿ ‘ಆಧಾರರಹಿತ ಮತ್ತು ಕುಚೇಷ್ಠೆಯ’ ಹೇಳಿಕೆಗಳನ್ನು ನೀಡುತ್ತಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕ್ರೀಡಾ ಸಚಿವಾಲಯ ಮಂಗಳವಾರ ಎಚ್ಚರಿಕೆ ನೀಡಿದೆ.

ಡಬ್ಲ್ಯುಎಫ್‌ಐ ನಡೆಸುವ ಯಾವುದೇ ಟೂರ್ನಿಯನ್ನು ‘ಮಾನ್ಯತೆ ಪಡೆಯದ ಟೂರ್ನಿ’ ಎಂದು ಪರಿಗಣಿಸಲಾಗುವುದು ಎಂದೂ ಸಚಿವಾಲಯ ಪುನರುಚ್ಚರಿಸಿದೆ.

ಸಂಜಯ್ ಸಿಂಗ್ ಅವರನ್ನು ಉದ್ದೇಶಿಸಿ ಸಚಿವಾಲಯವು ಬರೆದ ಪತ್ರದಲ್ಲಿ ಈ ವಿಷಯ ತಿಳಿಸಲಾಗಿದೆ.

ADVERTISEMENT

ಪುಣೆಯಲ್ಲಿ ಜನವರಿ 29 ರಿಂದ 31ರವರೆಗೆ ನಡೆಯುವ ಸೀನಿಯರ್‌ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ 700 ಕುಸ್ತಿಪಟುಗಳು ಭಾಗವಹಿಸುವರು ಎಂದು ಸಿಂಗ್ ಕಳೆದ ಶನಿವಾರ ಹೇಳಿದ್ದರು. ಇದು ಸಚಿವಾಲಯದ ಕೆಂಗಣ್ಣಿಗೆ ಕಾರಣವಾಗಿತ್ತು. ಸಂಜಯ್ ಸಿಂಗ್ ನೇತೃತ್ವದ ಹೊಸ ಸಮಿತಿಯನ್ನು ಮೂರೇ ದಿನಕ್ಕೆ ಸರ್ಕಾರ ಅಮಾನತುಗೊಳಿಸಿತ್ತು.

ಐಒಎ ನೇಮಿಸಿರುವ ಭೂಪೇಂದರ್ ಸಿಂಗ್ ಬಾಜ್ವಾ ನೇತೃತ್ವದ ಅಡ್‌ಹಾಕ್ ಸಮಿತಿಯು, ಫೆ. 2 ರಿಂದ 5ರ ವರೆಗೆ ಜೈಪುರದಲ್ಲಿ ಸೀನಿಯರ್ ರಾಷ್ಟ್ರೀಯ ಚಾಂಪಿಯನ್‌ಷಿಪ್‌ ನಡೆಸುವುದಾಗಿ ಪ್ರತ್ಯೇಕವಾಗಿ ಪ್ರಕಟಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.