ಬೆಂಗಳೂರು: ಅಗ್ರಶ್ರೇಯಾಂಕದ ಆಟಗಾರ ಕರ್ನಾಟಕದ ರಿಷಿ ರೆಡ್ಡಿ ಅವರು ಎಐಟಿಎ ಪುರುಷರ ಟೆನಿಸ್ ಚಾಂಪಿಯನ್ಷಿಪ್ನಲ್ಲಿ ಶನಿವಾರ ಪ್ರಶಸ್ತಿ ಮುಡಿಗೇರಿಸಿಕೊಂಡರು. ಇಲ್ಲಿಯ ಪಡುಕೋಣೆ–ದ್ರಾವಿಡ್ ಸ್ಪೋರ್ಟ್ಸ್ ಎಕ್ಸ್ಲೆನ್ಸ್ನ ಪಿಬಿಐ –ಸಿಎಸ್ಇ ಟೆನಿಸ್ ಆಕಾಡೆಮಿಯಲ್ಲಿ ನಡೆದ ಟೂರ್ನಿಯ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ರಿಷಿ 6–3, 6–2ರಿಂದ ಗುಜರಾತ್ನ ಮಧ್ವಿನ್ ಕಾಮತ್ ಅವರನ್ನು ಸೋಲಿಸಿದರು.
ಜಿದ್ದಾಜಿದ್ದಿನ ಹಣಾಹಣಿ ನಿರೀಕ್ಷಿಸಲಾಗಿದ್ದ ಪಂದ್ಯವನ್ನು ರಿಷಿ ಏಕಪಕ್ಷೀಯವಾಗಿ ಗೆದ್ದು ಬೀಗಿದರು. ಮೊದಲ ಸೆಟ್ ಆರಂಭದಲ್ಲಿ ಸಮಬಲದಲ್ಲಿ ಸಾಗಿತ್ತು. ಐದನೇ ಗೇಮ್ನಲ್ಲಿ ಬ್ರೇಕ್ ಪಾಯಿಂಟ್ ಗಳಿಸಿದ ರಿಷಿ ಸೆಟ್ಅನ್ನು ಸುಲಭವಾಗಿ ಗೆದ್ದುಕೊಂಡರು. ಅದೇ ಲಯವನ್ನು ಮುಂದುವರಿಸಿದ ಅವರು ಎರಡನೇ ಸೆಟ್ನ ಮೂರನೇ ಗೇಮ್ನಲ್ಲಿ ಎದುರಾಳಿಯ ಸರ್ವ್ ಮುರಿದರು. ಏಳನೇ ಗೇಮ್ನಲ್ಲೂ ಇದು ಪುನರಾವರ್ತನೆಯಾಯಿತು. ಇದರೊಂದಿಗೆ 5–2ರೊಂದಿಗೆ ಮುನ್ನಡೆದ ಜೈನ್ ಕಾಲೇಜು ವಿದ್ಯಾರ್ಥಿ ರಿಷಿ, ತವರಿನ ಪ್ರೇಕ್ಷಕರ ಬೆಂಬಲದೊಂದಿಗೆ ಪಂದ್ಯ ಜಯಿಸಿ ಸಂಭ್ರಮದಲ್ಲಿ ಅಲೆಯಲ್ಲಿ ತೇಲಿದರು.
‘ನನಗನಿಸಿದಂತೆ ಈ ವಾರದಲ್ಲಿ ನಾನು ಉತ್ತಮ ಸಾಮರ್ಥ್ಯ ತೋರಿದೆ. ಕಳೆದ ವಾರ ಮಾಡಿದ ತಪ್ಪುಗಳನ್ನು ಸರಿಪಡಿಸಿಕೊಂಡಿದ್ದು ಟ್ರೋಫಿಯನ್ನು ಗೆಲ್ಲಲು ಸಹಕಾರಿಯಾಯಿತು‘ ಎಂದು ಪಂದ್ಯದ ಬಳಿಕ ರಿಷಿ ಪ್ರತಿಕ್ರಿಯಿಸಿದರು.
ಕೆಎಸ್ಎಲ್ಟಿಎ ಅಂಗಣದಲ್ಲಿ ಸೋಮವಾರದಿಂದ ತತ್ವಂ ಟ್ಯಾಲೆಂಟ್ ಸಿರೀಸ್ ಟೂರ್ನಿ ಆರಂಭವಾಗಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.