ಅಹಮದಾಬಾದ್: ಇಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಕ್ರಿಕೆಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ಪ್ರಮುಖ ಮೂರು ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಭಾರತ ಉತ್ತಮ ಆರಂಭವನ್ನು ಪಡೆದರೂ ಸಂಕಷ್ಟಕ್ಕೆ ಒಳಗಾಗಿದೆ. ಶುಭಮನ್ ಗಿಲ್, ಶ್ರೇಯಸ್ ಅಯ್ಯರ್ ರನ್ ಗಳಿಸುವಲ್ಲಿ ವಿಫಲರಾದರೆ, ಅಬ್ಬರಿಸಿ ರೋಹಿತ್ ಶರ್ಮಾ ವಿಕೆಟ್ ಕೊಟ್ಟರು.
ರೋಹಿತ್ ಶರ್ಮಾ ಇಂದು ವೇಗದ ಆರಂಭವನ್ನೇ ನೀಡಿದರು. ಆದರೆ ಶುಭಮನ್ ಗಿಲ್ ಹೆಚ್ಚು ಹೊತ್ತು ಇರಲಿಲ್ಲ. 5ನೇ ಓವರ್ನಲ್ಲಿ 4 ರನ್ಗಳಿಸಿದ್ದ ಗಿಲ್ ಔಟ್ ಅದರು. ನಾಯಕ ರೋಹಿತ್ ಶರ್ಮಾ 10ನೇ ಓವರ್ನಲ್ಲಿ ಮ್ಯಾಕ್ಸ್ವೆಲ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು. ಶ್ರೇಯಸ್ ಅಯ್ಯರ್ ಬಂದ ಕೂಡಲೇ ಬೌಂಡರಿ ಗಳಿಸಿ ಅಬ್ಬರಿಸುವ ಸೂಚನೆ ನೀಡಿದರಾದರೂ ನಂತರದ ಬಾಲ್ನಲ್ಲಿ ವಿಕೆಟ್ ಕಳೆದುಕೊಂಡರು.
ವಿಶ್ವಕಪ್ ಲೀಗ್ ಹಂತದ ಮೊದಲ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ರೀತಿಯಲ್ಲೇ ರಾಹುಲ್ ಮತ್ತು ವಿರಾಟ್ ಕೊಹ್ಲಿ ತಂಡದ ಆಸರೆ ಆಗಿದ್ದಾರೆ.
ಐದು ಬಾರಿ ಪ್ರಶಸ್ತಿ ಗೆದ್ದಿರುವ ಆಸ್ಟ್ರೇಲಿಯಾ ತಂಡವು ಆರನೇ ವಿಶ್ವಕಪ್ ವಿಜಯದ ಮೇಲೆ ಕಣ್ಣಿಟ್ಟಿದೆ. ಭಾರತ 3ನೇ ಬಾರಿಗೆ ಕಪ್ ಗೆಲ್ಲುವ ತವಕದಲ್ಲಿದೆ.
ಉಭಯ ತಂಡಗಳು ಸೆಮಿಫೈನಲ್ ಆಡಿದ ತಂಡವನ್ನೇ ಉಳಿಸಿಕೊಂಡಿದ್ದು, ಯಾವುದೇ ಬದಲಾವಣೆ ಮಾಡಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.