ADVERTISEMENT

ಮನೆಯಲ್ಲೇ ಉಳಿದ ಜನ; 20 ವರ್ಷಗಳ ಕೆಳಗೆ ಜಾರಿದ ಉತ್ತರ ಭಾರತದ ವಾಯು ಮಾಲಿನ್ಯ: ನಾಸಾ

ಏಜೆನ್ಸೀಸ್
Published 23 ಏಪ್ರಿಲ್ 2020, 8:04 IST
Last Updated 23 ಏಪ್ರಿಲ್ 2020, 8:04 IST
ನಾಸಾ ಉಪಗ್ರಹ ಸೆರೆ ಹಿಡಿದಿರುವ ಭಾರತದ ವಾತಾವರಣ
ನಾಸಾ ಉಪಗ್ರಹ ಸೆರೆ ಹಿಡಿದಿರುವ ಭಾರತದ ವಾತಾವರಣ   

ವಾಷಿಂಗ್ಟನ್‌: ಉತ್ತರ ಭಾರತದಲ್ಲಿ ವಾಯು ಮಾಲಿನ್ಯ 20 ವರ್ಷಗಳ ಕೆಳಮಟ್ಟಕ್ಕೆ ಇಳಿದಿರುವುದಾಗಿ ನಾಸಾ ಪ್ರಕಟಿಸಿರುವ ಉಪಗ್ರಹಗಳ ಮಾಹಿತಿಗಳಿಂದ ತಿಳಿದು ಬಂದಿದೆ.

ಕೊರೊನಾ ವೈರಸ್‌ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ದೇಶದಾದ್ಯಂತ ಲಾಕ್‌ಡೌನ್‌ ಜಾರಿಯಲ್ಲಿರುವುದರಿಂದ ಬಹುತೇಕ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ ಹಾಗೂ ಪ್ರವಾಸಿ ತಾಣಗಳು, ಕೈಗಾರಿಕೆಗಳು ಸಹ ಸ್ಥಗಿತಗೊಂಡಿರುವ ಪರಿಣಾಮ ವಾತಾವರಣ ಕಲುಷಿತಗೊಳ್ಳುವ ಪ್ರಮಾಣ ಕಡಿಮೆಯಾಗಿದೆ. ಗಾಳಿಗೆ ಸೇರುವ ಸೂಕ್ಷ್ಮ ಘನ ಮತ್ತು ದ್ರವ ಕಣಗಳಿಂದಾಗಿ ಹೊಗೆ ಮಂಜಿನಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅದು ಮನುಷ್ಯರ ಶ್ವಾಸಕೋಶ ಹಾಗೂ ಹೃದಯಕ್ಕೆ ಹಾನಿ ಮಾಡುವಷ್ಟ ಪರಿಣಾಮಕಾರಿಯಾಗಿರುತ್ತದೆ.

'ಲಾಕ್‌ಡೌನ್‌ನಿಂದಾಗಿ ಹಲವು ಭಾಗಗಳ ವಾತಾವರಣಗಳಲ್ಲಿ ಬದಲಾವಣೆಗಳನ್ನು ಕಾಣಬಹುದೆಂಬುದು ತಿಳಿದಿದ್ದೆ. ಆದರೆ, ಗಂಗಾ–ಸಿಂಧು ಬಯಲಿಲ್ಲ ಗಾಳಿಯಲ್ಲಿರುವ ಮಾಲಿನ್ಯಕಾರಕ ಅಂಶಗಳ ಪ್ರಮಾಣ ಇಷ್ಟು ಪ್ರಮಾಣಕ್ಕೆ ಜಾರಿರುವುದನ್ನು ನಾನು ಎಂದಿಗೂ ಕಂಡಿರಲಿಲ್ಲ' ಎಂದು ನಾಸಾ ವಿಜ್ಞಾನಿ ಪವನ್‌ ಗುಪ್ತಾ ಹೇಳಿದ್ದಾರೆ.

ADVERTISEMENT

2016ರ ವಸಂತ ಋತುವಿನಿಂದ ನಾಸಾ ಭಾರತದ ವಾತಾವರಣದಲ್ಲಿನ ವಾಯು ಮಾಲಿನ್ಯದ ಪ್ರಮಾಣವನ್ನು ಉಪಗ್ರಹಗಳು ಸೆರೆಹಿಡಿಯುವ ಚಿತ್ರಗಳ ಮೂಲಕ ಸಂಗ್ರಹಿಸುತ್ತಿದೆ. 2018ರಲ್ಲಿ ವಾಯು ಮಾಲಿನ್ಯ ಏರಿಕೆಯಾಗಿರುವುದು ಹಾಗೂ 2020ರಲ್ಲಿ ಪ್ರಮಾಣ ಇಳಿಕೆಯಾಗಿರುವುದನ್ನು ಚಿತ್ರಗಳಲ್ಲಿ ಗಮನಿಸಬಹುದಾಗಿದೆ. ಏರೊಸಾಲ್‌ ಆಪ್ಟಿಕಲ್‌ ಡೆಪ್ತ್‌ (ಎಒಡಿ) ಅಂದರೆ, ಗಾಳಿಯಲ್ಲಿರುವ ಕಣಗಳಿಂದ ಬೆಳಕು ಎಷ್ಟು ಪ್ರಮಾಣದಲ್ಲಿ ಹೀರಲ್ಪಟ್ಟಿದೆ ಅಥವಾ ಪ್ರತಿಫಲಿಸಲ್ಪಟ್ಟಿದೆ ಎಂಬುದನ್ನು ಅಳೆಯಲಾಗುತ್ತದೆ.

ಆಪ್ಟಿಕಲ್‌ ಡೆಪ್ತ್‌ನಲ್ಲಿ 1 ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಮಾಲಿನ್ಯಕಾರಕ ಕಣಗಳ ದಟ್ಟತೆ ಕಂಡು ಬಂದರೆ ವಾತಾವರಣ ಅಪಾಯದ ಮಟ್ಟದಲ್ಲಿದೆ ಎಂದು ತಿಳಿಯಲಾಗುತ್ತದೆ. ಅದೇ ಪ್ರಮಾಣ 0.1 ಕಂಡು ಬಂದರೆ ವಾತಾವರಣ ಶುದ್ಧವಾಗಿರುವುದಾಗಿ ಅರ್ಥೈಸಲಾಗುತ್ತದೆ. ನಾಸಾದ 'ಟೆರ್‍ರಾ' ಉಪಗ್ರಹದಿಂದ ವಾತಾವರಣದ ಮಾಹಿತಿ ಸಂಗ್ರಹಿಸಲಾಗಿದೆ.

ದೇಶದಲ್ಲಿ ಲಾಕ್‌ಡೌನ್ ಘೋಷಣೆಯಾಗಿ ಮೊದಲ ವಾರದಲ್ಲಿಯೇ ಗಾಳಿಯಲ್ಲಿರುವ ಮಾಲಿನ್ಯಕಾರಕ ಕಣಗಳ ಪ್ರಮಾಣ ಇಳಿಯಿತು. ಆದರೆ, ಮಳೆ ಹಾಗೂ ಲಾಕ್‌ಡೌನ್‌ ಎರಡರ ಪರಿಣಾಮವೂ ಅಲ್ಲಿತ್ತು. ಮಾರ್ಚ್‌ 27ರಂದು ಉತ್ತರ ಭಾರತದಲ್ಲಿ ಉತ್ತಮ ಮಳೆಯಾದ ಪರಿಣಾಮ ಗಾಳಿಯಲ್ಲಿನ ಕಲ್ಮಶ ಕಡಿಮೆಯಾಗಿದೆ. ಸಾಮಾನ್ಯವಾಗಿ ಮಳೆಯ ನಂತರ ಗಾಳಿಯಲ್ಲಿನ ಮಾಲಿನ್ಯಕಾರಕ ಕಣಗಳ ಪ್ರಮಾಣ ಏರಿಕೆಯಾಗುತ್ತದೆ. ಇಲ್ಲಿ ಇನ್ನಷ್ಟು ಕಡಿಮೆಯಾಗುವುದು ಕಂಡು ಬಂದಿತು ಎಂದು ಗುಪ್ತಾ ತಿಳಿಸಿದ್ದಾರೆ.

ದಕ್ಷಿಣ ಭಾರತದ ವಾತಾವರಣದಲ್ಲಿ ಮಾಲಿನ್ಯಕಾರಕ ಕಣಗಳ ಪ್ರಮಾಣ ಕಡಿಮೆಯಾಗಿಲ್ಲ ಎಂದು ಸಂಗ್ರಹಿಸಿರುವು ಮಾಹಿತಿಗಳಿಂದ ತಿಳಿದು ಬಂದಿದೆ. ಬಹುಶಃ ವಾತಾವರಣದಲ್ಲಿನ ಬದಲಾವಣೆ, ಕೃಷಿ ಚಟುವಟಿಕೆಗಳಲ್ಲಿ ಬೆಂಕಿ ಇಟ್ಟಿರುವುದರಿಂದ ಧೂಳು ಹಬ್ಬಿರುವುದು, ಗಾಳಿ ಅಥವಾ ಯಾವ ಕಾರಣಗಳಿಂದ ಏರೊಸೊಲ್‌ ಪ್ರಮಾಣ ಹೆಚ್ಚಿದೆ ಎಂಬುದು ತಿಳಿದು ಬಂದಿಲ್ಲ. ನೈಸರ್ಗಿಕ ಮೂಲಗಳಿಂದ ಹಾಗೂ ಮಾನವ ನಿರ್ಮಿತ ಮೂಲಗಳಿಂದ ಹೇಗೆ ವಾತಾವರಣದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಅಧ್ಯಯ ಮಾಡಲು ಈ ಅವಧಿ ಉತ್ತಮ ಅವಕಾಶವಾಗಿದೆ ಎಂದು ನಾಸಾದ ರಾಬರ್ಟ್‌ ಲೆವಿ ಅಭಿಪ್ರಾಯ ಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.