
ಇಲಾನ್ ಮಸ್ಕ್
ಬೆಂಗಳೂರು: ಮಗನಿಗೆ ನೊಬೆಲ್ ಪ್ರಶಸ್ತಿ ಪುರಸ್ಕೃತ ಭಾರತೀಯ ಮೂಲದ ಖಗೋಳಭೌತ ವಿಜ್ಞಾನಿ ಡಾ. ಸುಬ್ರಮಣ್ಯನ್ ಚಂದ್ರಶೇಖರ್ ಅವರ ಹೆಸರು ಇಟ್ಟು ಸುದ್ದಿಯಲ್ಲಿರುವ ಸ್ಪೇಸ್ಎಕ್ಸ್ ಸಂಸ್ಥಾಪಕ ಇಲಾನ್ ಮಸ್ಕ್ ಅವರು, ಮುಂದಿನ 20ರಿಂದ 50 ವರ್ಷಗಳಲ್ಲಿ ಜೀವನ ಹೇಗಿರಲಿದೆ ಎಂಬ ಭವಿಷ್ಯವನ್ನು ಅಂದಾಜಿಸಿದ್ದಾರೆ.
ಹೂಡಿಕೆಯ ಆ್ಯಪ್ ಝೆರೊದಾ ಸಂಸ್ಥಾಪಕ ನಿಖಿಲ್ ಕಾಮತ್ ಅವರ ‘ಪೀಪಲ್ ಬೈ ಡಬ್ಲೂಟಿಎಫ್’ ಎಂಬ ಕಾರ್ಯಕ್ರಮದಲ್ಲಿ ಹಲವು ವಿಷಯಗಳನ್ನು ಹಂಚಿಕೊಂಡಿರುವ ಮಸ್ಕ್, ಕೃತಕ ಬುದ್ಧಿಮತ್ತೆ ಮತ್ತು ರೊಬೊಟಿಕ್ಸ್ನಿಂದ ಜಗತ್ತಿನಲ್ಲಿ ಆಗಬಹುದಾದ ಬದಲಾವಣೆಯನ್ನು ವಿವರಿಸಿದ್ದಾರೆ.
‘ಮುಂದಿನ 20 ವರ್ಷಗಳಲ್ಲಿ ಕೆಲಸ ಎಂಬುದು ಆಯ್ಕೆಯಾಗಲಿದೆಯೇ ಹೊರತು, ಅದು ಅನಿವಾರ್ಯವಲ್ಲ. ಏಕೆಂದರೆ ಕೃತಕ ಬುದ್ಧಿಮತ್ತೆ ಮತ್ತು ರೊಬೊಟಿಕ್ಸ್ನಿಂದ ಉತ್ಪಾದಕತೆ ಹೆಚ್ಚಲಿದೆ. ಅದು ಎಷ್ಟರ ಮಟ್ಟಿಗೆ ಎಂದರೆ ಕೆಲಸ ಮಾಡುವುದು ಅನಿವಾರ್ಯವಲ್ಲ ಎಂಬಷ್ಟರ ಮಟ್ಟಿಗೆ’ ಎಂದು ಇಲಾನ್ ಹೇಳಿದ್ದಾರೆ.
‘ಎಐನಿಂದ ಹಣದ ಮೌಲ್ಯವೂ ಶೂನ್ಯವಾಗಲಿದೆ. ಆಗ ‘ಶಕ್ತಿ’ (ಇಂಧನ) ಎಂಬುದೇ ನಿಜವಾದ ಕರೆನ್ಸಿ ಆಗಲಿದೆ’ ಎಂದು ಭವಿಷ್ಯ ನುಡಿದಿದ್ದಾರೆ.
ಇಲಾನ್ ಅವರ ಮೂರು ಕಂಪನಿಗಳ ಭವಿಷ್ಯವೇನು ಎಂಬ ನಿಖಿಲ್ ಪ್ರಶ್ನೆಗೆ ಉತ್ತರಿಸಿದ ಇಲಾನ್, ‘ಮುಂದಿನ ಕೆಲವೇ ವರ್ಷಗಳಲ್ಲಿ ಎಕ್ಸ್, ಟೆಸ್ಲಾ ಮತ್ತು ಸ್ಪೇಸ್ಎಕ್ಸ್ ಒಂದು ಉದ್ದೇಶಗಳಿಗೆ ಕೆಲಸ ಮಾಡಲಿವೆ. ಸೌರ ಇಂಧನ ಚಾಲಿತ ಉಪಗ್ರಹಗಳು ಬಾಹ್ಯಾಕಾಶದ ಆಳದಲ್ಲಿ ಕೆಲಸ ಮಾಡಲಿವೆ. ಇದಕ್ಕೆ ಸ್ಪೇಸ್ ಎಕ್ಸ್ ರಾಕೆಟ್ ಸಿದ್ಧಪಡಿಸಿದರೆ, ಟೆಸ್ಲಾ ಬ್ಯಾಟರಿ ನೀಡಲಿದೆ ಹಾಗೂ ಎಕ್ಸ್ ಬುದ್ಧಿಮತ್ತೆ ತುಂಬಲಿದೆ’ ಎಂದು ವಿವರಿಸಿದ್ದಾರೆ.
ಭವಿಷ್ಯದ ಜನರ ಬದುಕು ಹೇಗಿರಲಿದೆ ಎಂಬ ಪ್ರಶ್ನೆಗೆ ಇಲಾನ್ ಅವರ ಉತ್ತರ ಚಕಿತಗೊಳಿಸಿದೆ. ‘ನಾವೆಲ್ಲರೂ ಪ್ರತ್ಯನುಕರಣೆ ಯುಗದಲ್ಲಿ ಬದುಕಲಿದ್ದೇವೆ. ಪಾಂಗ್ನಿಂದ ಫೋಟೊ ರಿಯಲಿಸ್ಟಿಕ್ ಗೇಮ್ಗಳಾಗಿ
50 ವರ್ಷಗಳಲ್ಲಿ ಪಿಎನ್ಜಿಯಿಂದ ಫೋಟೊ ರಿಯಲಿಸ್ಟಿಕ್ ಗೇಮ್ಗಳಾಗಿ ಬದಲಾಗಲಿವೆ. ನಾವೆಲ್ಲರೂ ಒಂದು ಮಾಯಾಲೋಕದಲ್ಲಿ ಜೀವಿಸಲಿದ್ದೇವೆ ಎಂದು ಇಲಾನ್ ಹೇಳಿದ್ದಾರೆ.
ಇಲಾನ್ ಮಸ್ಕ್ ಅವರು ತತ್ವಜ್ಞಾನದ ಕುರಿತೂ ಮಾತನಾಡಿದ್ದಾರೆ. ‘ವಿಶ್ವದ ಉತ್ತರ ಸರಳವಾಗಿದೆ. ಆದರೆ ನಾವು ಅದಕ್ಕೆ ಸರಿಯಾದ ಪ್ರಶ್ನೆಗಳನ್ನು ಕೇಳಬೇಕಷ್ಟೇ. ಭವಿಷ್ಯದಲ್ಲಿ ಅರಿವು ಇನ್ನಷ್ಟು ವಿಸ್ತಾರಗೊಳ್ಳಲಿದೆ. ಅದರಿಂದ ಕೇಳುವ ಪ್ರಶ್ನೆಗಳೂ ಉತ್ತಮವಾಗಲಿವೆ. ಅದರಿಂದ ಮನುಕುಲದ ಏಳಿಗೆ ಸಾಧ್ಯವಾಗಲಿದೆ’ ಎಂಬುದು ಅವರ ಲೆಕ್ಕಾಚಾರ.
ಎಕ್ಸ್ (ಹಿಂದೆ ಟ್ವಿಟರ್) ಗ್ಲೋಬಲ್ ಟೈಂ ಸ್ಕ್ವೇರ್ ಮಾಡಬೇಕಿದೆ. ರಾಜಕೀಯ ಕೇಂದ್ರಿತ ಒಲವನ್ನಲ್ಲ. ಭವಿಷ್ಯದಲ್ಲಿ ರಿಯಲ್ ಟೈಂನಲ್ಲಿ ಅಕ್ಷರ, ಭಾಷಾಂತರ, ವಿಡಿಯೊ ಒಳಗೊಂಡ ಸಂಗ್ರಹ ಆಧಾರಿತ ಕೆಲಸ ನಡೆಯಲಿದೆ. ಹಾಗೆಯೇ ಸ್ಟಾರ್ಲಿಂಕ್ ಪ್ರತಿ ಉಪಗ್ರಹವು 550 ಕಿ.ಮೀ. ವ್ಯಾಪ್ತಿಯ ಲೇಸರ್ ಜಾಲವನ್ನು ಹೊಂದಿರಲಿದೆ. ಹೀಗಾಗಿ ಭೂಮಿಯಲ್ಲಿ ಎಂಥದ್ದೇ ದುರ್ಘಟನೆ ಸಂಭವಿಸಿ ನೆಟ್ವರ್ಕ್ ಇಲ್ಲವಾದರೂ, ಸ್ಟಾರ್ ಲಿಂಕ್ ನಿರಂತರ ಸಂಪರ್ಕ ನೀಡಲಿದೆ’ ಎನ್ನುವುದು ಇಲಾನ್ ಅವರ ಯೋಜನೆ.
‘ಭವಿಷ್ಯದಲ್ಲಿ ಜನಸಂಖ್ಯೆ ಕ್ಷೀಣಿಸಲಿದೆ. ಕಡಿಮೆ ಜನ ಎಂದರೆ ಕಡಿಮೆ ಅರಿವು ಎಂದರ್ಥ. ಅದರಿಂದ ವಿಶ್ವವನ್ನು ಅರಿಯುವ ಸಾಮರ್ಥ್ಯವೂ ಕಡಿಮೆಯಾಗಲಿದೆ’ ಎಂದು ಇಲಾನ್ ಹೇಳಿದ್ದಾರೆ.
‘ಕಾಲೇಜು ಎಂಬುದು ವಿದ್ಯಾರ್ಥಿಗಳ ಸೇರುವ ಉತ್ತಮ ವೇದಿಕೆಯಾಗಲಿದೆ. ಆದರೆ ಕೌಶಲ ಎಂಬುದು ಶಿಕ್ಷಣವನ್ನೂ ಮೀರಿಸಲಿದೆ’ ಎಂದಿದ್ದಾರೆ.
‘ಮೇಕ್ ಮೋರ್ ದ್ಯಾನ್ ಯು ಟೇಕ್’ ಎಂದು ಹೇಳಿರುವ ಇಲಾನ್, ಹಣದ ಹಿಂದೆ ಹೋಗಬೇಡಿ. ಮೌಲ್ಯಗಳನ್ನು ಬೆನ್ನುಹತ್ತಿ. ಹಣ ಎಂಬುದು ಕೇವಲ ಒಂದು ಸೈಡ್ಎಫೆಕ್ಟ್ ಮಾತ್ರ’ ಎಂದು ಇಲಾನ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.